ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಪರಿಸರ ಸಮತೋಲನ ಕಾಪಾಡದಿದ್ದರೆ ಬದುಕು ದುಸ್ತರವಾದೀತು. ಆದ್ದರಿಂದ ನಿಸರ್ಗವನ್ನು ಪೂಜಿಸುವ ಮೂಲಕ ಸಂಕ್ರಾಂತಿ ಸಡಗರವನ್ನು ಆಚರಿಸಬೇಕು, ಪರಿಸರವನ್ನೇ ದೇವರೆಂದು ಕಾಣುವ ಮೂಲಕ ಅದನ್ನು ರಕ್ಷಿಸುವ ಸಂಕಲ್ಪ ಮಾಡಬೇಕು ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸಲಹೆ ನೀಡಿದರು.ನಗರದ ಗಲ್ಪೇಟೆಯ ಚಾಮುಂಡೇಶ್ವರಿ ದೇವಾಲಯದಲ್ಲಿ ೫೪ನೇ ವರ್ಷದ ಧನುರ್ಮಾಸ ಸಂಕೀರ್ತನೆಯ ಸಮಾರೋಪ ಸಮಾರಂಭದಲ್ಲಿ ಇಡೀ ತಿಂಗಳು ಭಜನೆ, ಸಂಕೀರ್ತನೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.ಸಂಸ್ಕೃತಿ, ಸಂಪ್ರದಾಯ ಉಳಿಸಿ
ಧನುರ್ಮಾಸದ ಚುಮು ಚುಮು ಚಳಿ ಲೆಕ್ಕಸದೇ ನಗರ ಸಂಕೀರ್ತನೆ ನಡೆಸುವ ಮಕ್ಕಳು, ಹಿರಿಯರು ತಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಸಿಕೊಂಡು ಬಂದಿದ್ದಾರೆ, ಇದು ಮಕ್ಕಳಿಗೆ ಮುಂದಿನ ದಿನಗಳಲ್ಲಿ ಬೆಳಗ್ಗೆ ಬೇಗ ಎದ್ದು ವ್ಯಾಯಾಮ, ಓದುವ ಅಭ್ಯಾಸ ಸುಲಭಗೊಳಿಸುತ್ತದೆ. ಸಂಕ್ರಾಂತಿ ಸರ್ವರಲ್ಲೂ ಸೌಹಾರ್ದತೆ ತರುವ ಹಬ್ಬವಾಗಿದೆ, ಗ್ರಾಮೀಣ ಭಾಗದಲ್ಲಿ ಇಡೀ ವರ್ಷ ದುಡಿಮೆ ಮಾಡಿ ನಮಗೆ ಅನ್ನ ನೀಡಲು ನೆರವಾಗುವ ರಾಸುಗಳನ್ನು ಪೂಜಿಸುವ ವಿಶಿಷ್ಟ ಸಂಪ್ರದಾಯ ಇನ್ನು ಉಳಿದಿರುವುದು ಸಂತಸದ ವಿಷಯ ಎಂದರು.ರಾಸುಗಳನ್ನು ದೇವಂತೆ ಪೂಜಿಸಿ
ರೈತ ವರ್ಷಪೂರ್ತಿ ಬೆಳದ ದವಸ, ಧಾನ್ಯಕ್ಕೆ ಪೂಜೆ ಸಲ್ಲಿಸಿ ನಿರಂತರವಾಗಿ ಒಳ್ಳೆ ಮಳೆ, ಫಸಲು ಬರಲಿ ಎಂದು ಪ್ರಾರ್ಥಿಸುತ್ತಾನೆ. ರೈತನ ಒಡನಾಡಿಗಳಾದ ಹಸು, ಕರು, ಎತ್ತುಗಳನ್ನು ತೊಳೆದು ಸಿಂಗರಿಸಿ, ದೇವರಂತೆ ಪೂಜಿಸುವ ಹಬ್ಬವೇ ಸಂಕ್ರಾಂತಿಯಾಗಿದೆ. ಎಳ್ಳುಬೆಲ್ಲ ಕೊಟ್ಟು ಒಳ್ಳೆಯ ಮಾತನಾಡು ಎಂಬ ನಮ್ಮ ಹಿರಿಯರು ಹಾಕಿಕೊಟ್ಟ ಪದ್ದತಿ ಸಮಾಜದಲ್ಲಿ ಶಾಂತಿ, ಪ್ರೀತಿ ನೆಲಸಲು ಸಹಾಯ ಮಾಡಿದೆ, ಈ ಹಬ್ಬದ ವಿಶೇಷವೇ ಪ್ರಕೃತಿಯನ್ನು ಪೂಜಿಸುವುದಾಗಿದೆ ಎಂದರು.ರಾಗಿ, ಧಾನ್ಯಗಳ ರಾಶಿ ಹಾಕಿ ಪೂಜಿಸುವ ಪದ್ದತಿ ಮುಂದುವರೆಯಬೇಕು, ನಮ್ಮ ರೈತರ ಜೀವಾಳವಾದ ರಾಸುಗಳನ್ನು ಇಲ್ಲಿಯೂ ತಂದು ಪೂಜಿಸಿ ಮೆರವಣಿಗೆ ಮಾಡುವ ಪದ್ದತಿ ಅನುಸರಿಸಿ, ನಾವು ಪ್ರಕೃತಿ ತಾಯಿಯ ಮಡಿಲಲ್ಲಿ ಇದ್ದೇವೆ ಆಕೆಯನ್ನು ಪೂಜಿಸಿ ಆರಾಧಿಸೋಣ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನತೆ ಕೃಷಿಯನ್ನು ಬಿಟ್ಟು ನಗರಗಳತ್ತ ವಲಸೆ ಹೋಗುತ್ತಿದ್ದಾರೆ, ಇದು ಪರಿಸರಕ್ಕೆ ಮಾರಕ ಎಂದ ಅವರು, ಕೆಸಿ ವ್ಯಾಲಿ ನೀರು ಬಂದಿದೆ, ಮುಂದಿನ ದಿನಗಳಲ್ಲಿ ಎತ್ತಿನ ಹೊಳೆ ನೀರು ಹರಿದರೆ ಜಿಲ್ಲೆಯಲ್ಲಿ ಕೃಷಿಯತ್ತ ಮತ್ತೆ ಒಲವು ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
ಸಮಪ್ರದಾಯ ಉಳಿಯಬೇಕುಸಂಕ್ರಾಂತಿಯ ನಮ್ಮ ಸಂಸ್ಕೃತಿ ಹಿರಿಯರೊಂದಿಗೆ ಕೊನೆಯಾಗದಿರಲಿ, ಮಕ್ಕಳಿಗೂ ಇದರ ಕುರಿತು ಅರಿವು ಮೂಡಿಸಬೇಕು, ಸಂಕ್ರಾಂತಿಯ ಮಹತ್ವವನ್ನು ತಿಳಿಸಿಕೊಡಬೇಕು, ಈ ಸಂಪ್ರದಾಯ ಮುಂದುವರೆಯಬೇಕು ಎಂದು ಕಿವಿಮಾತು ಹೇಳಿದರು.ಶ್ರೀ ಚಾಮುಂಡೇಶ್ವರಿ ದೇವಾಲಯ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ರಾಜು ಪ್ರತಿವರ್ಷವೂ ಧನುರ್ಮಾಸದ ತಿಂಗಳ ಪೂರ್ತಿ ಮಕ್ಕಳು ಚಳಿಯಲ್ಲಿ ಮುಂಜಾನೆ ಭಜನೆ ಮಾಡುತ್ತಾ ನಗರದಲ್ಲಿ ಸಾಗುವ ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದೇವೆ, ಇದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ, ಇದನ್ನು ಮುಂದುವರೆಸುತ್ತೇವೆ ಮತ್ತು ಮುಂದಿನ ವರ್ಷ ರಾಸುಗಳ ಪೂಜೆ,ಮೆರವಣಿಗೆಯನ್ನು ನಡೆಸುವ ಇಚ್ಚೆ ಇದೆ ಎಂದರು.ಮಾವು ಮಂಡಳಿ ಮಾಜಿ ಅಧ್ಯಕ್ಷ ದಳಸನೂರು ಗೋಪಾಲಕೃಷ್ಣ, ಡಾ.ಗೋವಿಂದರಾಜು, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಡಿ.ಎಲ್.ನಾಗರಾಜ್, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ನಗರಸಭಾ ಸದಸ್ಯೆ ಪಾವನಿ ಜನಾರ್ಧನ್, ಮೇಸ್ತ್ರಿ ಸೀನಪ್ಪ, ನಾಗರಾಜ್, ನಾರಾಯಣಪ್ಪ, ಪೋಸ್ಟ್ ನಾರಾಯಣಸ್ವಾಮಿ, ಲಕ್ಷ್ಮಣ್, ಮಂಜುನಾಥ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ರಾಜೇಶ್ ಸಿಂಗ್, ನರಸಪ್ಪ, ಮುನಿಸ್ವಾಮಿ, ವೆಂಕಟೇಶ್, ಹಾಬಿ ರಮೇಶ್ ಇದ್ದರು.