ಸಾರಾಂಶ
- ಗಣೇಶೋತ್ಸವ, ಈದ್ ಮಿಲಾದ್ ಸೌಹಾರ್ದ ಸಭೆ
- ತುರ್ತು ನೆರವಿಗೆ 112ಗೆ ಕರೆ ನೀಡಲು ಸೂಚನೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಯಾವುದೇ ಹಬ್ಬಗಳನ್ನು ಬೇರೆ ಧರ್ಮಕ್ಕೆ ಧಕ್ಕೆಯಾಗದಂತೆ ಆಚರಿಸಬೇಕು. ಗಣೇಶ ಹಬ್ಬ, ಈದ್ ಮಿಲಾದ್ ಆಚರಣೆಗಳನ್ನು ಸಾಮರಸ್ಯ, ಸಂಭ್ರಮದಿಂದ ಆಚರಿಸಬೇಕು ಎಂದು ಹಿಂದು-ಮುಸ್ಲಿಂ ಸಮುದಾಯದವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮನವಿ ಮಾಡಿದರು.ನಗರದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಅಂಗವಾಗಿ ಹಮ್ಮಿಕೊಂಡಿದ್ದ ನಾಗರೀಕ ಶಾಂತಿ, ಸೌಹಾರ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲರೂ ತಂತಮ್ಮ ಧರ್ಮ, ಸಂಸ್ಕೃತಿಯನ್ನು ಅನುಸರಿಸಿ, ಸಡಗರ, ಸಂಭ್ರಮದಿಂದ ಹಬ್ಬ ಆಚರಿಸಿ. ಆದರೆ, ಅನ್ಯ ಧರ್ಮೀಯರ ಧರ್ಮಕ್ಕೆ ಧಕ್ಕೆ ತರದಂತೆ ನಿಮ್ಮ ಹಬ್ಬಗಳ ಆಚರಣೆಯಾಗಲಿ ಎಂದರು.
ನಾವೆಲ್ಲರೂ ಭಾರತೀಯರಾಗಿದ್ದು, ಇಲ್ಲಿನ ಸಂಸ್ಕೃತಿಗಳಿಗೆ ಬೆಲೆ ಕೊಡುವುದನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಾತಂತ್ರ್ಯವಿದೆ. ಹಬ್ಬದ ದಿನಗಳಲ್ಲಿ, ಸಂಕಷ್ಟದ ಸಮಯದಲ್ಲಿ ಪೊಲೀಸರಿಂದ ಯಾವುದೇ ರಕ್ಷಣೆಯ ಸಹಾಯಕ ಬೇಕೆಂದರೆ ತಕ್ಷಣವೇ ಪೊಲೀಸ್ ಇಲಾಖೆಯ 112 ಸಂಖ್ಯೆಗೆ ಕರೆ ಮಾಡಿ, ನೆರವು ಪಡೆಯಲು ತಿಳಿಸಿದರು.ಮೆರವಣಿಗೆಗಳಲ್ಲಿ ಪೊಲೀಸ್ ಇಲಾಖೆ ನಿಗದಿಪಡಿಸಿದ ರಸ್ತೆಗಳಲ್ಲೇ ಸಾಗಿ, ನಿಗದಿತ ಸ್ಥಳಗಳಲ್ಲೇ ಗಣೇಶ ವಿಸರ್ಜನೆ ಮಾಡಬೇಕು. ಯಾವುದೇ ಕಾರಣಕ್ಕೂ ಗಣೇಶ ವಿಸರ್ಜನೆ ಮೆರವಣಿಗೆ ಮಾರ್ಗ ಬದಲಾಯಿಸಬಾರದು. ನಿಗದಿತ ಮಾರ್ಗದಲ್ಲಿ ಸಂಚರಿಸುವಾಗಲೂ ಸೂಕ್ಷ್ಮ ಪ್ರದೇಶಗಳಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸಬಾರದು. ಒಟ್ಟಾರೆ, ಪೊಲೀಸರು, ನಾಗರಿಕರು ಇಲಾಖೆ ಸೂಚನೆಯಂತೆ ನಡೆದುಕೊಳ್ಳಬೇಕು. ಯಾರೇ ಆಗಲಿ, ಕಾನೂನು ಕೈಗೆತ್ತಿಕೊಳ್ಳಬಾರದು. ಇಲಾಖೆಯೂ ನಿಮ್ಮಗಳ ಜೊತೆಗಿರುತ್ತದೆ ಎಂದು ಎಸ್ಪಿ ಭರವಸೆ ನೀಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ನಗರ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಅಧಿಕಾರಿ ಸಿಬ್ಬಂದಿ, ಹಿಂದು-ಮುಸ್ಲಿಂ ಸಮಾಜದ ಮುಖಂಡರು, ಸಂಘ-ಸಂಸ್ಥೆಗಳು, ಯುವಜನರು ಇದ್ದರು.- - - -6ಕೆಡಿವಿಜಿ9, 10:
ದಾವಣಗೆರೆಯಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ನಾಗರೀಕ ಶಾಂತಿ ಸೌಹಾರ್ದ ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.