ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಾಜಿ ಮುಖ್ಯ ಮಂತ್ರಿ, ಬಿಜೆಪಿ ಕೇಂದ್ರೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಬದುಕಿನ 50 ವರ್ಷಗಳ ಅಭಿನಂದನಾ ಕಾರ್ಯಕ್ರಮವಾದ ಅಭಿಮಾನೋತ್ಸವ ಪೂರ್ವಭಾವಿ ಸಭೆ ಚಿಕ್ಕಮಗಳೂರಿನ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಭಾನುವಾರ ನಡೆಯಿತು.

ಈ ವೇಳೆ ಮಾತನಾಡಿದ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಡಾಸಿ.ಟಿ.ರವಿ, ರಾಜ್ಯದಲ್ಲಿ ಪಕ್ಷಕ್ಕೆ ಗಟ್ಟಿ ನೆಲೆ ತಂದು ಕೊಟ್ಟವರು ಯಡಿಯೂರಪ್ಪ. ಅನಂತಕುಮಾರ್. ಯಡಿಯೂರಪ್ಪ ಹಾರ್ಡ್‌ ವೇರ್‌ ರೀತಿ ಅನಂತ ಕುಮಾರ್‌ ಸಾಫ್ಟ್ ವೇರ್ ಆಗಿ ಪಕ್ಷವನ್ನು ಕಟ್ಟಿದ್ದಾರೆ. ಯಡಿಯೂರಪ್ಪ ಅವರ ರಾಜಕೀಯ ಬದುಕಿಗೆ 50 ವರ್ಷಗಳು ತುಂಬಿರುವುದು ಎಲ್ಲರೂ ಸಂಭ್ರಮಿಸುವ ಸಂಗತಿಯಾಗಿದೆ ಎಂದರು.

ರಾಜಕೀಯ ಜೀವನದಲ್ಲಿ ಯಡಿಯೂರಪ್ಪ ಅವರು ಅನೇಕ ಏಳುಬೀಳುಗಳನ್ನು ಎದುರಿಸಿದ್ದಾರೆ. ಯಡಿಯೂರಪ್ಪ ಎಂದರೆ ಶಕ್ತಿ. ನಾನು ಸೇರಿದಂತೆ ಅದೆಷ್ಟೋ ಕಾರ್ಯಕರ್ತರಿಗೆ ಪ್ರೇರಣೆ ಕೊಟ್ಟಿದ್ದಾರೆ. ಮಾತೃ ಹೃದಯ ಅವರದ್ದಾಗಿತ್ತು. ಪಕ್ಷಕ್ಕೆ ಅವರ ಕೊಡುಗೆ ದೊಡ್ಡದಿದೆ. ಅವರು ನಮ್ಮ ನಾಯಕರು. ಅವರನ್ನು ಅಭಿನಂದಿಸುವುದು ಪಕ್ಷದ ಸಂಘಟನೆಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗುತ್ತದೆ. ಎಲ್ಲರೂ ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು ಎಂದು ಸಲಹೆ ಮಾಡಿದರು.

ಮಾಜಿ ಶಾಸಕ ಹಾಗೂ ಅಭಿಮಾನೋತ್ಸವ ಸಮಿತಿ ಜಿಲ್ಲಾ ಸಂಚಾಲಕ ಬೆಳ್ಳಿ ಪ್ರಕಾಶ್ ಮಾತನಾಡಿ, ಕಡೂರಿನಲ್ಲಿ ವಿವಿಧ ಮಹಾಶಕ್ತಿ ಕೇಂದ್ರಗಳಲ್ಲಿ ವಿವಿಧ ಹಂತಗಳಲ್ಲಿ ಸಭೆ ನಡೆಸಲಾಗಿದೆ. ಈಗಾಲೇ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 7 ಸಾವಿರ ಕಾರ್ಯಕರ್ತರು ಹೊರಡಲು ಸಿದ್ಧರಾಗಿದ್ದಾರೆ. ಈ ಉತ್ಸಾಹ ಎಲ್ಲಾ ಕಾರ್ಯಕರ್ತರಲ್ಲಿ ಬರಬೇಕು ಎಂದು ಹೇಳಿದರು.


ಜನ ಶಕ್ತಿಯೇ ನಮಗೆ ಶಕ್ತಿ. ಇಚ್ಚಾಸಕ್ತಿ ಇದ್ದರೆ ನಮ್ಮ ಶಕ್ತಿ ಇಮ್ಮಡಿಯಾಗುತ್ತದೆ. ಅಭಿಮಾನೋತ್ಸವ ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ಮಾತನಾಡಿ, ಚಿತ್ರದುರ್ಗದಲ್ಲಿ ನಡೆಯುವ ಅಭಿಮಾ ನೋತ್ಸವ ಕಾರ್ಯಕ್ರಮದ ಲಾಭ ಪಕ್ಷಕ್ಕೆ ಮತ್ತು ಸಾಮಾನ್ಯ ಕಾರ್ಯಕರ್ತರಿಗೆ ಆಗಲಿದೆ. ಅದೊಂದು ಅಪೂರ್ವ ಕಾರ್ಯಕ್ರಮ ಆಗಿರುವುದರಿಂದ ಎಲ್ಲರೂ ಭಾಗವಹಿಸಬೇಕು ಎಂದರು.

ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಪುಷ್ಪರಾಜ್, ಬಿಜಿಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ವಿಜಯಕುಮಾರ್ ಮೊದಲಾದವರಿದ್ದರು. ಇದೇ ವೇಳೆ ಅಭಿಮಾನೋತ್ಸವದ ಸ್ಟಿಕ್ಕರ್ ಬಿಡುಗಡೆ ಮಾಡಲಾಯಿತು.

ಫೋಟೋ

ಭಾನುವಾರ ಬಿಜೆಪಿ ಕಚೇರಿಯಲ್ಲಿ ನಡೆದ ಯಡಿಯೂರಪ್ಪ ಅವರ ಅಭಿಮಾನೋತ್ಸವ ಪೂರ್ವ ಭಾವಿ ಸಭೆ ಸಿ.ಟಿ.ರವಿ. ಬೆಳ್ಳಿ ಪ್ರಕಾಶ, ದೇವರಾಜ್‌ ಶೆಟ್ಟಿ, ಕಲ್ಮರುಡಪ್ಪ, ಪುಷ್ಪರಾಜ್ ಮೊದಲಾದವರಿದ್ದರು.