ಸಾರಾಂಶ
ವಿಜಯಪುರ: ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಯಿತು.ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಉದ್ಯಾನ, ಮಾರುಕಟ್ಟೆ ಹಾಗೂ ಅನೇಕ ನಗರಗಳುಳ್ಳ ಅದ್ಭುತ ನಗರ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರು ಅನೇಕ ನಗರ ನಿರ್ಮಾತೃರಿಗೆ ಮಾದರಿಯಾಗಿದ್ದಾರೆ. ಕೆಂಪೇಗೌಡರು ನಿರ್ಮಾಣ ಮಾಡಿದ ಬೃಹತ ಬೆಂಗಳೂರು ಈಗಲೂ ಸಹ ತನ್ನ ಪ್ರಖ್ಯಾತಿ ಪಡೆದುಕೊಂಡಿದೆ. ಲಕ್ಷಾಂತರ ಜನರು ತಮ್ಮ ಬದುಕು ಕಟ್ಟಿಕೊಳ್ಳಲು ಆಸರೆಯ ತಾಣವಾಗಿದೆ. ಇಡೀ ವಿಶ್ವದಲ್ಲಿಯೇ ಗುರುತಿಸುವಂತಹ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ಕಾರ್ಯ ಸ್ಮರಣೀಯವಾಗಿದೆ ಎಂದು ಹೇಳಿದರು.
ಪ್ರಾಚಾರ್ಯ ಮಹಾದೇವ ರೆಬಿನಾಳ ಉಪನ್ಯಾಸ ನೀಡಿ, ಬೃಹತ್ ನಗರ ನಿರ್ಮಾಣವಷ್ಟೆ ಅಲ್ಲದೆ ಪಾರದರ್ಶಕತೆಯುಳ್ಳ ಉತ್ತಮ ಆಡಳಿತಗಾರಾಗಿದ್ದ ಕೆಂಪೇಗೌಡರು ರೈತರಿಗೆ ಹೊರೆಯಾಗದಂತೆ ತೆರಿಗೆ, ಸೈನ್ಯಕ್ಕಾಗಿ ಹಣ ಮೀಸಲಿಟ್ಟಿದ್ದರು. ಸಾಮಾನ್ಯ ಜನರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಕೌಶಲ ಮತ್ತು ಜಾಣ್ಮೆಯಿಂದ ಸ್ವತಂತ್ರ್ಯ ಸಂಸ್ಥಾನವನ್ನು ನಿರ್ಮಿಸಿ ದಕ್ಷಿಣ ಕರ್ನಾಟಕದಲ್ಲಿ ನಾಡಪ್ರಭು ಎಂದು ಜನಮಾಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಹೇಳಿದರು.ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ್ ಸೌದಾಗರ್, ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿ ಅನಸೂಯಾ ಚಲವಾದಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಿಂಬಾಬಾ ಮುದ್ದೇಬಿಹಾಳ, ಸಂಕೇತಗೌಡ ಗಾಯಕ್ವಾಡ, ವಿದ್ಯಾವತಿ ಅಂಕಲಗಿ ಸೇರಿದಂತೆ ಮುಂತಾದವರು ಇದ್ದರು.