ಮಂಗಳೂರು: ಜನಗಣತಿಯ ಪೂರ್ವಭಾವಿಯಾಗಿ ಮನೆಗಣತಿ ಕಾರ್ಯಕ್ಕೆ ನಗರದಲ್ಲಿ ಬುಧವಾರ ಚಾಲನೆ ನೀಡಲಾಯಿತು.

ನಗರದ ಬಾವುಟಗುಡ್ಡೆಯಲ್ಲಿರುವ ಸ್ಪೀಕರ್ ಯು.ಟಿ. ಖಾದರ್ ಅವರ ನಿವಾಸದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮತ್ತು ಗಣತಿದಾರರು ಆಗಮಿಸಿ ಮಾಹಿತಿ ಪಡೆದರು. ಮನೆ ಮಾಹಿತಿಯನ್ನು ಸಂಪೂರ್ಣವಾಗಿ ಆನ್‍ಲೈನ್‍ನಲ್ಲಿ ದಾಖಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಸ್ಪೀಕರ್ ಖಾದರ್‌, ಜನಗಣತಿಯು ದೇಶದ ಅತಿ ದೊಡ್ಡ ಕಾರ್ಯಕ್ರಮವಾಗಿದ್ದು, ದೇಶದ ಪ್ರತಿಯೊಂದು ಮನೆ ಮತ್ತು ನಾಗರಿಕರ ಮಾಹಿತಿ ಒಳಗೊಳ್ಳಲಿದೆ. ದೇಶದ ಅಭಿವೃದ್ಧಿಗೆ ಈ ಮಾಹಿತಿ ಅತ್ಯಗತ್ಯ. ನಾಗರಿಕರು ಸ್ವಯಂ ಆಗಿ ಆನ್‍ಲೈನ್‍ನಲ್ಲಿ ತಮ್ಮ ಮನೆಯ ಮಾಹಿತಿ ದಾಖಲಿಸಬಹುದು ಅಥವಾ ಗಣತಿದಾರರು ಮನೆಗೆ ಬಂದಾಗ ಮಾಹಿತಿ ನೀಡಿ ಸಹಕರಿಸಬೇಕು ಎಂದು ಹೇಳಿದರು.

ಜನಗಣತಿಗೆ ಸಹಕರಿಸಲು ಜಿಲ್ಲಾಧಿಕಾರಿ ಕರೆ: ಮಂಗಳೂರು: ಕರ್ನಾಟಕದಲ್ಲಿ ಜನಗಣತಿಯ ಭಾಗವಾಗಿ ಮನೆಗಳ ಗಣತಿಯು ಏ.16ರಿಂದ ಮೇ 15ರವರೆಗೆ 30 ದಿನಗಳ ಕಾಲ ನಡೆಯಲಿದೆ. ಇದರಲ್ಲಿ ‘ಸ್ವಯಂ ಎಣಿಕೆ’ ಆಯ್ಕೆಯು ಏ.1ರಿಂದ 15ರವರೆಗೆ ಇರುತ್ತದೆ. ಮನೆ ಪಟ್ಟಿ ಮತ್ತು ಮನೆ ಗಣತಿ ಸಮಯದಲ್ಲಿ ವಸತಿ ಸ್ಥಿತಿ, ಲಭ್ಯವಿರುವ ಸೌಲಭ್ಯಗಳು, ಹೊಂದಿರುವ ಆಸ್ತಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.


ಜನಗಣತಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು ಆನ್‌ಲೈನ್ ಪೋರ್ಟಲ್ https://se.census.gov.in ಅನುಷ್ಠಾನಗೊಳಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ಮನವಿ ಮಾಡಿದ್ದಾರೆ.

ಸ್ವಯಂ ಗಣತಿ ಹಂತಗಳು

ಆನ್‌ಲೈನ್‌ ಪೋರ್ಟಲ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ. ನಿಮ್ಮ ಸ್ಥಳವನ್ನು ಆಯ್ಕೆ ಮಾಡಿ. ನಕ್ಷೆಯಲ್ಲಿ ನಿಮ್ಮ ಮನೆಯನ್ನು ಪತ್ತೆ ಮಾಡಿ. ಮಾಹಿತಿಯನ್ನು ಭರ್ತಿ ಮಾಡಿ. ಸಲ್ಲಿಸಿ ಮತ್ತು ನಿಮ್ಮ ಎಸ್ಇ ಐಡಿ ಪಡೆಯಿರಿ. ನಿಮ್ಮ ಎಸ್ಇ ಐಡಿಯನ್ನು ಸುರಕ್ಷಿತವಾಗಿ ಇರಿಸಿ ಮತ್ತು ಗಣತಿದಾರರು ಭೇಟಿ ನೀಡಿದಾಗ ಅವರೊಂದಿಗೆ ಹಂಚಿಕೊಳ್ಳಬೇಕು.

ಏ.16ರಿಂದ ಮೇ 15ರವರೆಗೆ ಗಣತಿದಾರರು ಮತ್ತು ಮೇಲ್ವಿಚಾರಕರು ವಿವರಗಳನ್ನು ಪರಿಶೀಲಿಸಲು ಮನೆಗಳಿಗೆ ಭೇಟಿ ನೀಡುತ್ತಾರೆ. ಗಣತಿದಾರರಿಗೆ ಎಸ್ಇ ಐಡಿ ಸಲ್ಲಿಸಿ ಡೇಟಾವನ್ನು ಪರಿಷ್ಕರಿಸಬಹುದು. ಎಸ್ಇ ಇಲ್ಲದಿದ್ದರೆ, ಗಣತಿದಾರರು ಕ್ಷೇತ್ರ ಭೇಟಿಯ ಸಮಯದಲ್ಲೇ ಮಾಹಿತಿ ಸಂಗ್ರಹಿಸುತ್ತಾರೆ.

ಹೆಚ್ಚಿನ ಮಾಹಿತಿಗೆ ತಾಲೂಕು ಕಚೇರಿ, ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯ್ತಿ ಅಥವಾ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ವೆಬ್‍ಸೈಟ್ https://se.census.gov.in ಗೆ ಭೇಟಿ ನೀಡಬಹುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.