ಸಾರಾಂಶ
ಚಿಕ್ಕಮಗಳೂರು, ರಾಜ್ಯ ಸರ್ಕಾರದ ಜಾತಿ ಜನಗಣತಿಯಲ್ಲಿ ಒಂದು ವರ್ಗವನ್ನು ಓಲೈಸುವ ಸಲುವಾಗಿ ಒಕ್ಕಲಿಗ ಸಮಾಜದ ಮರಣ ಶಾಸನ ಬರೆಯಲು ಮುಂದಾಗಿದೆ. ಸರ್ಕಾರ ಈ ವರದಿಯನ್ನು ತಿರಸ್ಕರಿಸಬೇಕು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ರಾಜ್ಯ ಸರ್ಕಾರದ ಜಾತಿ ಜನಗಣತಿಯಲ್ಲಿ ಒಂದು ವರ್ಗವನ್ನು ಓಲೈಸುವ ಸಲುವಾಗಿ ಒಕ್ಕಲಿಗ ಸಮಾಜದ ಮರಣ ಶಾಸನ ಬರೆಯಲು ಮುಂದಾಗಿದೆ. ಸರ್ಕಾರ ಈ ವರದಿಯನ್ನು ತಿರಸ್ಕರಿಸಬೇಕು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಆಗ್ರಹಿಸಿದ್ದಾರೆ.2015 ರಲ್ಲಿ ಸಮೀಕ್ಷೆ ಮಾಡುವಾಗ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸ ಲಾಗುವುದೆಂದು ತಿಳಿಸಿ, ನಂತರ ಅದನ್ನೇ ಜಾತಿ ಜನ ಗಣತಿಯೆಂದು ಹೇಳುತ್ತಿರುವುದು ಖಂಡನೀಯ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಸ್ಲಿಮರ ಸಂಖ್ಯೆ ಹೆಚ್ಚಿಸಿ ಒಕ್ಕಲಿಗರು, ಲಿಂಗಾಯಿತರು ಸೇರಿದಂತೆ ವಿವಿಧ ಪ್ರಮುಖ ಜಾತಿಗಳ ಜನಸಂಖ್ಯೆ ಇಳಿಕೆ ಎಂದು ತೋರಿಸುತ್ತಿದೆ. ಒಕ್ಕಲಿಗ ಜನಾಂಗ ಉಪ ಪಂಗಡಗಳು ಸೇರಿ ರಾಜ್ಯದಲ್ಲಿ ಅಂದಾಜು 1.20 ಕೋಟಿ ಇದ್ದಾರೆ. ಈ ಬಗ್ಗೆ ರಾಜ್ಯ ಒಕ್ಕಲಿಗರ ಸಂಘದಲ್ಲಿ ಮಾಹಿತಿಯಿದೆ. ಆದರೆ, ರಾಜ್ಯ ಸರ್ಕಾರ ಕೇವಲ 61 ಲಕ್ಷ ಒಕ್ಕಲಿಗ ಜನ ಸಂಖ್ಯೆಯನ್ನು ತೋರಿಸುತ್ತಿದೆ ಇದನ್ನು ಸಂಘ ವಿರೋಧಿಸುತ್ತದೆ ಎಂದರು.ಆಯೋಗ ನೇಮಿಸಿರುವ ವ್ಯಕ್ತಿಗಳು ಇಡೀ ಜಿಲ್ಲೆಯಲ್ಲಿ ಯಾರ ಮನೆಗೂ ಬಂದು ಸಮೀಕ್ಷೆ ಮಾಡಿಲ್ಲ. ಒಕ್ಕಲಿಗರು ಮತ್ತು ಲಿಂಗಾಯತರನ್ನು ಎಲ್ಲಾ ತರಹದ ಸೌಲಭ್ಯಗಳಿಂದ ದೂರ ಇಡುವ ಹುನ್ನಾರ ಇದೆಂದರು.
10 ವರ್ಷಗಳ ಹಿಂದೆಯೇ ರಾಜ್ಯದ ಒಟ್ಟು ಜನಸಂಖ್ಯೆ 6.35 ಕೋಟಿ ಇದ್ದು, ಆಯೋಗದ ವರದಿಯಲ್ಲಿ 5.98 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಿದ್ದು, ಉಳಿದ 37 ಲಕ್ಷ ಜನಸಂಖ್ಯೆ ಬಗ್ಗೆ ಸ್ಪಷ್ಟತೆಯಿಲ್ಲ ಎಂದರು.ಈ ವರದಿ ಒಕ್ಕಲಿಗರ ಜನಾಂಗದ ಅಭಿವೃದ್ಧಿ ಮತ್ತು ಸರ್ಕಾರಿ ನೇಮಕಾತಿ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತದೆ. ಒಕ್ಕಲಿಗ ಸಮುದಾಯದಿಂದ ಪ್ರತಿನಿಧಿಸುವ ಎಲ್ಲಾ ಜನ ಪ್ರತಿನಿಧಿಗಳು ಇದನ್ನು ವಿರೋಧಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು. ಮತ್ತು ಈ ವರದಿಯನ್ನು ಅನುಷ್ಠಾನಗೊಳಿಸದಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಆಗ್ರಹಿಸಿದರು.
ಸರ್ಕಾರ ವರದಿಯನ್ನು ತಿರಸ್ಕರಿಸಿ ಆಧುನಿಕ ತಂತ್ರಜ್ಞಾನ ಮತ್ತು ಆಧಾರ್ ಕಾರ್ಡ್ನ್ನು ಬಳಸಿ ಹೊಸದಾಗಿ ಸಮೀಕ್ಷೆ ನಡೆಸ ಬೇಕು ಎಂದು ಒತ್ತಾಯಿಸಿದರು. ಇಲ್ಲವಾದಲ್ಲಿ ಒಕ್ಕಲಿಗರ ಸಮಾಜದ ಶ್ರೀ ಗಳಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಜನಾಂಗದ ಮುಖಂಡರು ಮತ್ತು ವೀರಶೈವ-ಲಿಂಗಾಯತ ಮುಖಂಡರ ಜೊತೆ ಸಮಲೋಚನೆ ನಡೆಸಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಎಂ.ಸಿ.ಪ್ರಕಾಶ್, ಅರುಣಾಕ್ಷಿ ನಾಗರಾಜ್, ಚೇತನ್, ಅಶೋಕ್, ಸತೀಶ್ ಕುಮಾರ್ ಇದ್ದರು.
ಪೋಟೋ ಪೈಲ್ ನೇಮ್ 19 ಕೆಸಿಕೆಎಂ 6