ಸಾರಾಂಶ
ಮೂಡುಬಿದಿರೆ : ಸಾರ್ಥಕ ಬದುಕಿನಲ್ಲಿ ಶತಮಾನೋತ್ಸವ ಕಾಣುತ್ತಿರುವ ಅಪರೂಪದ ವ್ಯಕ್ತಿತ್ವ, ವಿಶ್ರಾಂತ ಶಿಕ್ಷಕ ಬಂಗಬೆಟ್ಟು ಸೀತಾರಾಮ ಶೆಟ್ಟಿ ಒದಗಿ ಬಂದಿರುವ ಲೋಕ ಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಉತ್ಸಾಹದಲ್ಲಿದ್ದಾರೆ.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಸಹಿತ ಘಟಾನುಘಟಿ ಶಿಷ್ಯಂದಿರ ಪಾಲಿಗೆ ಶಿಸ್ತಿನ ಮೇಸ್ಟ್ರಾಗಿದ್ದ ಸೀತಾರಾಮ ಶೆಟ್ಟರು ನೂರರ ಹೊಸ್ತಿಲಲ್ಲೂ ಅರಳು ಹುರಿದಂತೆ ಮಾತು, ಉತ್ತಮ ಶ್ರವಣ , ದೃಷ್ಟಿ ಸಾಮರ್ಥ್ಯ ಹೊಂದಿ ಸಕ್ರಿಯರಾಗಿರುವುದು ಮಾತ್ರವಲ್ಲ ಲೋಕ ವಿಚಾರದ ಲ್ಲಿ ಆಸಕ್ತಿಯನ್ನೂ ಉಳಿಸಿಕೊಂಡಿರುವುದು ವಿಶೇಷ.
ಸ್ವಾತಂತ್ರ್ಯ ಪೂರ್ವದ ದಿನಗಳನ್ನೂ ಕಂಡಿರುವ ಸೀತಾರಾಮ ಶೆಟ್ಟರು ಅಂದಿನ ರಾಜಕೀಯ ಕ್ಕೂ ಇಂದಿಗೂ ಸಾಕಷ್ಟು ಬದಲಾವಣೆಯಾಗಿದೆ. ಆಗ ರಾಷ್ಟ್ರ ಅಭಿಮಾನ, ಸೇವೆ ಮುಖ್ಯವಾಗಿತ್ತು. ಇಂದು ರಾಜಕೀಯವನ್ನು ಹಣ ಸಂಪಾದನೆಯ ಅಡ್ಡದಾರಿಯಾಗಿಯೂ ಬಳಸಲಾಗುತ್ತಿದೆ. ಜನಪ್ರತಿನಿಧಿಯಾದವರಿಗೆ ಜನತೆಯ ಕಾಳಜಿಯಿರಬೇಕು ಎನ್ನುತ್ತಾರೆ.
ಮೂಡುಬಿದಿರೆ ಮಿಜಾರು ಶಾಲೆಯಲ್ಲಿ ಮತದಾನ ಮಾಡಬೇಕಾಗಿರುವ ಸೀತಾರಾಮ ಶೆಟ್ಟರು ಸದ್ಯ ಪುತ್ರಿ ರೂಪಲೇಖಾ ಜತೆ ಮಂಗಳೂರಿನಲ್ಲಿದ್ದಾರೆ. ಆದರೆ ತನ್ನ ನೂರರ ಬದುಕಿನ ಸಾರ್ಥಕತೆಗೊಂದು ಮತದಾನದ ಹಕ್ಕು ಚಲಾಯಿಸಿ ಈವರೆಗೆ ತಾವು ನಿರಂತರ ಚಲಾಯಿಸಿರುವ ಹಕ್ಕಿನ ಮತದಾನಕ್ಕೆ ಅವರು ಉತ್ಸುಕರಾಗಿರುವುದು ಗಮನಾರ್ಹ.