ಮಹಿಳಾ ಸ್ವಾವಲಂಬನೆಗೆ ಕೇಂದ್ರ, ರಾಜ್ಯ ಸರ್ಕಾರ ಉತ್ತಮ ಕಾರ್ಯಕ್ರಮ ರೂಪಿಸುತ್ತಿವೆ: ವಿಂದ್ಯಾ ಹೆಗಡೆ

| Published : Oct 11 2024, 11:51 PM IST

ಮಹಿಳಾ ಸ್ವಾವಲಂಬನೆಗೆ ಕೇಂದ್ರ, ರಾಜ್ಯ ಸರ್ಕಾರ ಉತ್ತಮ ಕಾರ್ಯಕ್ರಮ ರೂಪಿಸುತ್ತಿವೆ: ವಿಂದ್ಯಾ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಗಾಗಿ ಹಲವು ಕಾರ್ಯಕ್ರಮ ರೂಪಿಸುತ್ತಿದೆ ಎಂದು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಂದ್ಯಾ ಹೆಗಡೆ ತಿಳಿಸಿದರು.

ಶೆಟ್ಟಿಕೊಪ್ಪ ಶಾಲಾ ಆವರಣದಲ್ಲಿ ಕಡಹಿನಬೈಲು ಗ್ರಾಪಂ ವ್ಯಾಪ್ತಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಗಾಗಿ ಹಲವು ಕಾರ್ಯಕ್ರಮ ರೂಪಿಸುತ್ತಿದೆ ಎಂದು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಂದ್ಯಾ ಹೆಗಡೆ ತಿಳಿಸಿದರು.

ಗುರುವಾರ ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಡಹಿನಬೈಲು ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾ ಸಭೆ ಉದ್ಘಾಟಿಸಿ ಮಾತನಾಡಿದರು. ಸಂಜೀವಿನಿ ಸಂಘಗಳು 2021 ರಲ್ಲಿ ಪ್ರಾರಂಭವಾಗಿವೆ. 3 ವರ್ಷಗಳಲ್ಲಿ ಹಲವಾರು ಆರ್ಥಿಕ ಚಟುವಟಿಕೆ ನಡೆಸಿದ್ದೇವೆ. ಒಕ್ಕೂಟದಲ್ಲಿ ನೋಂದಾಯಿಸಿರುವ 38 ಸ್ವಸಹಾಯ ಸಂಘಗಳಲ್ಲಿ 19 ಸ್ವಸಹಾಯ ಸಂಘಗಳಿಗೆ ₹ 28. 50 ಲಕ್ಷ ವನ್ನು ಶೇ.12 ರ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗಿದೆ. ಈ ಪೈಕಿ ಎಲ್ಲಾ ಸಂಘಗಳು ಸಮಯಕ್ಕೆ ಸರಿಯಾಗಿ ಸಾಲ ಮರು ಪಾವತಿಸಿ ಮತ್ತೆ ಸಾಲ ಪಡೆದುಕೊಂಡಿದೆ. ನಮ್ಮ ಸಂಜೀವಿನಿ ಒಕ್ಕೂಟಕ್ಕೆ 3 ವರ್ಷದಲ್ಲಿ ₹ 2,64,038 ನಿವ್ಹಳ ಲಾಭ ಬಂದಿದೆ. ನಮ್ಮ ಒಕ್ಕೂಟದಲ್ಲಿ ನೋಂದಾಯಿತ 38 ಸ್ವಸಹಾಯ ಸಂಘಗಳಲ್ಲಿ ಒಟ್ಟು 450 ಸದಸ್ಯರಿದ್ದಾರೆ. ಆದರೆ, ಇನ್ನೂ ಹೆಚ್ಚಿನ ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳನ್ನು ಒಕ್ಕೂಟದಲ್ಲಿ ನೋಂದಾಯಿಸಿ 1 ಸಾವಿರ ಸದಸ್ಯರನ್ನು ಸೇರಿಸುವ ಗುರಿ ಹೊಂದಿದ್ದೇವೆ ಎಂದರು.

ಎನ್‌.ಆರ್‌.ಎಲ್‌.ಎಂ. ತಾಲೂಕು ವ್ಯವಸ್ಥಾಪಕ ಸುಬ್ರಮಣ್ಯ ಮಾತನಾಡಿ, ನರಸಿಂಹರಾಜಪುರ ತಾಲೂಕಿನಲ್ಲಿ 14 ಸಂಜೀವಿನಿ ಒಕ್ಕೂಟ ಗಳಿವೆ.ಈಗಾಗಲೇ 13 ಒಕ್ಕೂಟಗಳ ವಾರ್ಷಿಕ ಮಹಾ ಸಭೆ ಮುಗಿಸಿದ್ದೇವೆ. ವಾರ್ಷಿಕ ಮಹಾ ಸಭೆಗಳಲ್ಲಿ ಸರ್ಕಾರದಿಂದ ಒಕ್ಕೂಟಕ್ಕೆ ಬಂದ ಅನುದಾನ, ಸಮುದಾಯ ಬಂಡವಾಳ ನಿಧಿ, ದುರ್ಬಲ ವರ್ಗದ ನಿಧಿ, ಪ್ರಧಾನ ಮಂತ್ರಿ ಕೌಶಲ್ಯಾಧಾರಿತ ನಿಧಿ ಸೇರಿದಂತೆ ಎಲ್ಲಾ ಅನುದಾನ ಬಳಕೆ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿ ಲೆಕ್ಕ ಪರಿಶೋಧನೆ ಮಾಡಿ ಶಾಸನ ಬದ್ಧ ಅನುದಾನದ ಲೆಕ್ಕ ಪತ್ರಗಳನ್ನು ವಾರ್ಷಿಕ ಮಹಾ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ ಮಾತನಾಡಿ, ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗಿರದೆ ಎಲ್ಲಾ ಕ್ಷೇತ್ರ ಗಳಲ್ಲೂ ಭಾಗವಹಿಸಬೇಕು. ಪ್ರತಿಯೊಬ್ಬ ಮಹಿಳೆಯಲ್ಲೂ ಒಂದಲ್ಲ ಒಂದು ಕೌಶಲ್ಯ, ಪ್ರತಿಭೆ ಇರುತ್ತದೆ. ಅವರಿಗೆ ಸರಿಯಾದ ವೇದಿಕೆ ಸಿಗುವುದಿಲ್ಲ. ಇಂತಹ ಸಿಕ್ಕ ಅವಕಾಶ ಉಪಯೋಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.

ಅತಿಥಿಯಾಗಿದ್ದ ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್‌ ಮಾತನಾಡಿ, ಹೆಣ್ಣು ಕುಟುಂಬದ ಕಣ್ಣು, ಸಮಾಜದ ಬೆಳಕು ಎನ್ನುತ್ತಾರೆ. ಇಂದು ಮಹಿಳೆ ತಾಯಿ, ಸಹೋದರಿ, ಪತ್ನಿಯಾಗಿ ಪುರುಷನ ಯಶಸ್ಸಿನ ಹಿಂದೆ ನಿಂತಿದ್ದಾಳೆ. ಮಹಿಳೆಯರು ನಾಯಕತ್ವ ಗುಣ ಬೆಳೆಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶುಭ ಹಾಗೂ ಸಂಜೀವಿನಿ ಒಕ್ಕೂಟದ ಹಿಂದಿನ ಪದಾಧಿಕಾರಿಗಳಾದ ಸಲೀನಾ, ರಾಗಿಣಿ ಅ‍ವರನ್ನು ಸನ್ಮಾನಿಸಲಾಯಿತು.

ಮುಖ್ಯ ಪುಸ್ತಕ ಬರಹಗಾರ ಶಾಲಿ ವಾರ್ಷಿಕ ವರದಿ ವಾಚಿಸಿದರು. ಅತಿಥಿಗಳಾಗಿದ್ದ ಗ್ರಾಪಂ ಸದಸ್ಯರಾದ ಲಿಲ್ಲಿ, ಶೈಲಾ ಮಹೇಶ್‌, ಎ.ಬಿ.ಮಂಜುನಾಥ್‌, ವಲಯ ಮೇಲ್ವಿಚಾರಕ ಗಿರೀಶ್‌ ಮಾತನಾಡಿದರು. ಸಭೆಯಲ್ಲಿ ಗ್ರಾಪಂ ಸದಸ್ಯರಾದ ವಾಣಿ ನರೇಂದ್ರ, ರವೀಂದ್ರ, ಪೂರ್ಣಿಮ,ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಾದ ಸಲೀನಾ, ರಾಗಿಣಿ, ಸುಮಿತ್ರ, ಶೈನಿ, ಶ್ವೇತ, ವಿನೋದ, ಚಂದ್ರಿಕಾ, ಮಾಲಿನಿ ಮತ್ತಿತರರು ಇದ್ದರು.