ಧಾರವಾಡ:

ವಿಕಸಿತ ಭಾರತದ ಗುರಿ ಸಾಕಾರಗೊಳಿಸಲು‌ ಪ್ರಸಕ್ತ ಕೇಂದ್ರ ಬಜೆಟ್ ಪೂರಕವಾಗಿದೆ ಎಂದು ಹಿರಿಯ ಲೆಕ್ಕ ಪರಿಶೋಧಕ ಡಾ. ಎನ್.ಎ. ಚರಂತಿಮಠ ಅಭಿಪ್ರಾಯಪಟ್ಟರು.

ಕರ್ನಾಟಕ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗವು ಕೆನರಾ ಬ್ಯಾಂಕ್ ಪೀಠ ಮತ್ತು ಅರ್ಥಶಾಸ್ತ್ರ ಸಂಶೋಧನಾ ವೇದಿಕೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ ಕೇಂದ್ರ ಬಜೆಟ್-2026 ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿ, ಭಾರತವು ಜಗತ್ತಿನಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿದ್ದು, ಪ್ರಸ್ತುತ ದೇಶದ ಆರ್ಥಿಕ ಒಟ್ಟು ಬೆಳವಣಿಗೆ ದರ ಶೇ.5.5ರಷ್ಟಿದೆ. ದೇಶದ ಒಟ್ಟು ಬೆಳವಣಿಗೆಗೆ ತಯಾರಿಕಾ ವಲಯದಿಂದ ಶೇ.75 ಹಾಗೂ ಕೃಷಿ ವಲಯದಿಂದ ಶೇ.15-20ರಷ್ಟು ತಮ್ಮದೇ ಕೊಡುಗೆ ನೀಡುತ್ತಲಿವೆ. ತಯಾರಿಕಾ ವಲಯದ ಮೂಲಕ ''''''''ಮೇಕ್- ಇನ್ ಇಂಡಿಯಾ'''''''' ಹೆಚ್ಚು ಉತ್ತೇಜನ ನೀಡಿದೆ. ದೇಶದಲ್ಲಿ ಉತ್ತಮ ಉತ್ಪಾದಕತೆ ಹೆಚ್ಚಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಿದೆ ಎಂದರು.

ಕೃಷಿ ಬೆಳವಣಿಗೆ ಹೆಚ್ಚಿಸಲು ''''''''ಲ್ಯಾಂಡ್ ಟು ಲ್ಯಾಬ್'''''''' ಕೃಷಿಗೆ ಸಂಬಂಧಿಸಿದ ಸಂಶೋಧನೆ ನಡೆಸಲು ಸಹಕಾರಿಯಾಗಿದೆ. ಇದರಿಂದ ಕೃಷಿಯಲ್ಲಿ ಹೆಚ್ಚು ಉತ್ಪಾದಕತೆ ಹೆಚ್ಚಿಸಲು ಸಾಧ್ಯ. ಪ್ರಸ್ತುತ ಗ್ಲೋಬಲ್ ಕ್ಯಾಪ್ಯಾಸಿಟಿ ಸೆಂಟರ್ (ಜೆಸಿಸಿ) ಸ್ಥಾಪನೆ ಎಲ್ಲ ಕ್ಷೇತ್ರದ ಉತ್ಪಾದಕತೆ ಹೆಚ್ಚುಸಲು ಸಹಕಾರಿಯಾಗಲಿದ್ದು, ಬೆಂಗಳೂರಿನಲ್ಲಿ ಜಾಗತಿಕ ಸಾಮರ್ಥ್ಯ ವೃದ್ಧಿ ಕೇಂದ್ರಗಳು (ಜೆಸಿಸಿ) ಇರುವುದು ವಿಶೇಷ ಸಂಗತಿ ಎಂದ ಅವರು, ಯುವ ಜನರಿಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಲು ಐಟಿ ಮತ್ತು ಅದಕ್ಕೆ ಸಂಬಂಧಿಸಿದ ಹೆಚ್ಚು ಮಹತ್ವ ಪ್ರಸ್ತುತ ಬಜೆಟ್‌ನಲ್ಲಿ ನೀಡಲಾಗಿದೆ. 2047ರ ವಿಕಸಿತ ಭಾರತ ಗಮನದಲ್ಲಿಟ್ಟುಕೊಂಡು ಗ್ಲೋಬಲ್ ಡೇಟಾ ಸೆಂಟರ್ ಸ್ಥಾಪನೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಉತ್ತಮ ಆರ್ಥಿಕ ಕಾರಿಡಾರ್ ‌ನಿರ್ಮಿಸಲು ದೇಶದಲ್ಲಿ ಏಳು ರೈಲ್ವೆ ಕಾರಿಡಾರ್ ನಿರ್ಮಿಸಲು ಯೋಜನೆ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ಐದು ಯುನಿವರ್ಸಿಟಿ ಕ್ಲಸ್ಟರ್ ಹಬ್ ಸ್ಥಾಪನೆ ಹಾಗೂ ಮುಕ್ತ ವ್ಯಾಪಾರ ಒಪ್ಪಂದಗಳಿಂದ ರಫ್ತು ವಹಿವಾಟಕ್ಕೆ ಉತ್ತೇಜನ ದೊರೆಯಲಿದೆ. ಹೀಗಾಗಿ ಇದೊಂದು ಜನಪರ, ಅಭಿವೃದ್ಧಿ ಪೂರಕ ಬಜೆಟ್ ಆಗಿದೆ ಎಂದು ಚರಂತಿಮಠ ವಿಶ್ಲೇಷಿಸಿದರು.


ಸಿಎಂಡಿಆರ್ ಮಾಜಿ ನಿರ್ದೇಶಕ ಡಾ. ವಿನೋದ್ ಅಣ್ಣಿಗೇರಿ, ಪ್ರಸಕ್ತ ಕೇಂದ್ರದ ಬಜೆಟ್ ದೂರದೃಷ್ಟಿಯುಳ್ಳದ್ದಾಗಿದೆ. ಆತ್ಮ ನಿರ್ಭರ ಮತ್ತು ಎಲ್ಲಾ ಸಮುದಾಯ ವರ್ಗಗಳನ್ನು ಒಳಗೊಳ್ಳುವ ಬಜೆಟ್‌ನಲ್ಲಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದ್ದು, ಸಾರ್ವಜನಿಕ ಹೂಡಿಕೆಗೆ ಹೆಚ್ಚು ಅವಕಾಶವಿದೆ. ಬಜೆಟ್ ಸ್ಥಿರ ಮತ್ತು ಅಭಿವೃದ್ಧಿಪರ ಬೆಳವಣಿಗೆಗೆ ಪೂರಕವಾಗಿದ್ದು, ಉದ್ಯಮದ ಪೂರಕ ಅಂಶಗಳನ್ನು ಹೊಂದಿವೆ ಎಂದರು. ಕವಿವಿ ಅರ್ಥಶಾಸ್ತ್ರ ವಿಷಯದ ಪ್ರಾಧ್ಯಾಪಕರಾದ ಡಾ.ಎಚ್.ಎಚ್‌. ಭರಡಿ, ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಪ್ರಸ್ತುತ ಬಜೆಟ್ ಅನೇಕ ಮಾರ್ಗೋಪಾಯ ಒಳಗೊಂಡಿವೆ. ಪ್ರಸ್ತುತ ಶೇ.4.5ರಷ್ಟು ಕೃಷಿ ಬೆಳವಣಿಗೆ ದರ ಹೊಂದಿದ್ದು 2047ರ ವಿಕಸಿತ ಭಾರತ ಗುರಿಯನ್ನು ದೃಷ್ಟಿಯನ್ನು ಇಟ್ಟುಕೊಂಡು ಶೇಕಡಾ ಶೇ.7 ರಷ್ಟು ಬೆಳವಣಿಗೆಯ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಎಚ್. ನಾಗೂರ ಮಾತನಾಡಿದರು. ಡಾ. ಮನೋಜ ಡೊಳ್ಳಿ, ಡಾ. ಮುಗದೂರ, ಸಚಿನ್ ಕುರಾಡೆ ಹಾಗೂ ವಿದ್ಯಾರ್ಥಿಗಳಿದ್ದರು.