ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಅಡಿಯಲ್ಲಿ ₹ 6 ಕೋಟಿ ಅನುದಾನ ಮಂಜೂರಾಗಿದ್ದು, ಇದಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.ಕ್ಷೇತ್ರದ ಸಾರ್ವಜನಿಕರ ಬಹುಕಾಲದ ಬೇಡಿಕೆಯಾಗಿದ್ದ ಹೆಬ್ರಿ ತಾಲೂಕಿನ ಬಚ್ಚಪ್ಪುವಿನಿಂದ ಹೆಬ್ರಿ ಕಡೆಗೆ ಸಾಗುವ ರಸ್ತೆ, ಮುಂಡ್ಕೂರು ಪೇಟೆ ರಸ್ತೆ, ನಿಟ್ಟೆ-ಕೆಮ್ಮಣ್ಣು ಬಪ್ಪಗೋಳಿ ದ್ವಾರದಿಂದ ಕೆಮ್ಮಣ್ಣು ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ರಸ್ತೆ, ಅಜೆಕಾರು-ಹೆರ್ಮುಂಡೆ ಚರ್ಚ್ ಸಮೀಪದ ರಸ್ತೆ, ಕಾರ್ಕಳ-ನಾರಾವಿ ಮುಖ್ಯ ರಸ್ತೆಯ ಈದು ಕ್ರಾಸ್ ರಸ್ತೆ ಹಾಗೂ ಪಡುಕುಡೂರು ಶಾಲೆಯಿಂದ ಶಿವಪುರದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ತಲಾ ₹1 ಕೋಟಿ ರು.ಗಳಂತೆ ಒಟ್ಟು ₹6 ಕೋಟಿ ಅನುದಾನ ಮಂಜೂರಾಗಿದೆ. ವಿಶೇಷ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲಕ ಮನವಿ ಸಲ್ಲಿಸಲಾಗಿತ್ತು ಎಂದು ಶಾಸಕರ ವಿಕಾಸ ಜನಸೇವಾ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.