ಸಾರಾಂಶ
ಸುರಪುರ ನಗರದ ರಂಗಂಪೇಟೆಯ ಖಾದಿ ಕೇಂದ್ರ ಆವರಣದಲ್ಲಿ ಬೀದಿ ರಂಗ ದಿನಾಚರಣೆ ಹಾಗೂ ಸಿ.ಜಿ.ಕೆ ಪ್ರಶಸ್ತಿ 2024ರ ಪ್ರದಾನ ಸಮಾರಂಭದಲ್ಲಿ ಲಿಂಗಣ್ಣ ಸಾಹುಕಾರ ತಡಿಬಿಡಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಸುರಪುರ
ಕರ್ನಾಟಕ ರಂಗ ಕ್ಷೇತ್ರಕ್ಕೆ ಹಿರಿಯ ನಾಟಕಕಾರರಾಗಿದ್ದ ಸಿ.ಜಿ.ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.ನಗರದ ರಂಗಂಪೇಟೆಯ ಖಾದಿ ಕೇಂದ್ರ ಆವರಣದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ಹಾಗೂ ಕರ್ನಾಟಕ ಬೀದಿ ನಾಟಕ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಬೀದಿ ರಂಗ ದಿನಾಚರಣೆ ಹಾಗೂ ಸಿ.ಜಿ.ಕೆ ಪ್ರಶಸ್ತಿ 2024ರ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸುತ್ತಾ, ರಂಗ ಸಂಘಟಕರನ್ನು ಒಂದುಗೂಡಿಸಿದ ಸಿ.ಜಿ.ಕೆ ಯವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಮಹತ್ತರ ಕಾರ್ಯನಿರ್ವಹಿಸಿದ್ದಾರೆ ಎಂದರು.ಪ್ರತಿ ವರ್ಷ ಸಗರನಾಡು ಸೇವಾ ಪ್ರತಿಷ್ಠಾನದ ಮೂಲಕ ಸಿ.ಜಿ.ಕೆ ಅವರ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸುತ್ತಾ ಬರುತ್ತಿದ್ದು, ಇದುವರೆಗೂ ಒಟ್ಟು 8 ಜನ ನಾಟಕಕಾರರಿಗೆ ಪ್ರಶಸ್ತಿ ನೀಡಲಾಗಿದೆ ಎಂದರು. ಎಲ್.ಬಿ.ಕೆ ಆಲ್ದಾಳ, ಮಲ್ಲೇಶಿ ಕೋನ್ಹಾಳ, ಹೊನ್ನಪ್ಪ ಚನ್ನುರು, ಶರಣಪ್ಪ ಹಾಲಭಾವಿ, ಬಲಭೀಮ ನಾಯಕ ಬೈರಿಮಡ್ಡಿ, ಬಸವರಾಜ ಪಂಚಗಲ್ ಕೋಡೆಕಲ್, ಮಹಾಂತಯ್ಯ ಸ್ವಾಮಿ ಹಿರೇಮಠ ಅವರಿಗೆ ನೀಡಲಾಗಿದೆ. ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ರಂಗ ಸಂಘಟಕರು ಹಾಗೂ ಹಿರಿಯ ನಾಟಕಕಾರರಾದ ಲಿಂಗಣ್ಣ ಸಾಹುಕಾರ ತಡಿಬಿಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಚಾರ್ಯ ವೀರೇಶ ಹಳಿಮನಿ, ಉಪಪ್ರಾಚಾರ್ಯ ಬಲಭೀಮ ಪಾಟೀಲ, ಹಿರಿಯ ಮುಖಂಡರಾದ ಶಿವಶರಣಪ್ಪ ಹೆಡಿಗಿನಾಳ, ಸಂಘಟಕ ಶ್ರೀಕಾಂತ ರತ್ತಾಳ, ಕಲಾವಿದರಾದ ಸಿದ್ಧಣ್ಣ ಹದನೂರ, ರುದ್ರಪ್ಪ ಕೆಂಭಾವಿ ಸೇರಿದಂತೆ ಇತರರಿದ್ದರು.