ಸಾರಾಂಶ
20 ತಿಂಗಳಲ್ಲಿ 10 ತಿಂಗಳ ಅಧಿಕಾರ ಹಂಚಿಕೆಗೆ ಒತ್ತಾಯ
ಕನ್ನಡಪ್ರಭ ವಾರ್ತೆ ಹಾಸನಕೇಂದ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಇರುವಂತೆ ಹಾಸನ ನಗರಸಭೆಯಲ್ಲೂ ಮೈತ್ರಿ ಮುಂದುವರಿಯಬೇಕು. ಮೈತ್ರಿಗೆ ಯಾವ ಸಮಸ್ಯೆ ಆಗದಂತೆ ಪ್ರೀತಂಗೌಡರ ಸಲಹೆಯಂತೆ ೨೦ ತಿಂಗಳ ಒಟ್ಟು ಅಧಿಕಾರಾವಧಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿಗೆ ತಲಾ ೧೦ ತಿಂಗಳ ಅಧಿಕಾರ ಹಂಚಿಕೆಯಾಗಬೇಕು ಎಂದು ಬಿಜೆಪಿ ನಗರಾಧ್ಯಕ್ಷ ಮಂಜು ಬೀರನಹಳ್ಳಿ ತಿಳಿಸಿದರು.
ನಗರಸಭೆ ಚುನಾವಣೆಗೂ ಮುನ್ನ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಸಂಸದರ ಚುನಾವಣೆಯಲ್ಲಿ ಜೆಡಿಎಸ್ಗೆ ಅವಕಾಶ ಕೊಡಲಾಗಿದ್ದು, ನಗರಸಭೆ ಅಧ್ಯಕ್ಷ ಸ್ಥಾನ ಮೊದಲ ಅವಧಿಗೆ ಬಿಜೆಪಿ ಪಕ್ಷಕ್ಕೆ ನೀಡುವಂತೆ ಬಿಜೆಪಿ ನಾಯಕರು ತಿಳಿಸಿದ್ದು, ಮೈತ್ರಿ ಮೂಲಕ ಅಧಿಕಾರ ನಡೆಸೋಣ ಎಂದು ಹೇಳಲಾಗಿದೆ. ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಸಂಬಂಧ ಮೊದಲ ೧೦ ತಿಂಗಳ ಅವಧಿಗೆ ಜೆಡಿಎಸ್ ಅಭ್ಯರ್ಥಿ ಅಧಿಕಾರ ವಹಿಸಿ ಇನ್ನುಳಿದ ೧೦ ತಿಂಗಳ ಅವಧಿಗೆ ಉಪಾಧ್ಯಕ್ಷ ಸ್ಥಾನದಲ್ಲಿರುವ ಅಭ್ಯರ್ಥಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಸಭೆ ನಡೆಸಿ ಒಮ್ಮತದ ತೀರ್ಮಾನ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮಾಜಿ ಶಾಸಕ ಪ್ರೀತಂಗೌಡ ಅವರೂ ಕೂಡ ಯಾವುದೇ ತೊಂದರೆಯಾಗದಂತೆ ಸಮನಾಗಿ ಚುನಾವಣೆ ಎದುರಿಸಿ ಎಂದು ಸೂಚಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ ಯಾವುದೇ ಉಮೇದುವಾರಿಕೆ ಸಲ್ಲಿಸದೆ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ. ರಾಜ್ಯ ನಾಯಕರ ಸೂಚನೆಯಂತೆ ಮೈತ್ರಿಗೆ ಗೌರವ ನೀಡಿ ಒಪ್ಪಿಗೆ ನೀಡಲಾಗಿದೆ ಎಂದರು.
ಉಪಾಧ್ಯಕ್ಷ ಸ್ಥಾನಕ್ಕೆ ೧೪ನೇ ವಾರ್ಡಿನ ವೀರಶೈವ ಸಮಾಜದ ಶಿಲ್ಪ ವಿಕ್ರಂ ಅವರಿಗೆ ನಾಮಪತ್ರ ಸಲ್ಲಿಸಲು ಹೇಳಲಾಗಿದೆ. ಇನ್ನು ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಉಮೇದುಗಾರಿಕೆ ಸಲ್ಲಿಸಿರುವುದಿಲ್ಲ. ಜೆಡಿಎಸ್ ಪಕ್ಷವರು ಕೂಡ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಸದಸ್ಯ ಶ್ರೀನಿವಾಸ್, ಚಂದ್ರಶೇಕರ್, ಸಂತೋಷ್ ಇದ್ದರು.