ಗಣರಾಜ್ಯೋತ್ಸವಕ್ಕೆ ಚೈತ್ರೋತ್ಸವ, ಫಲಪುಷ್ಪ ಪ್ರದರ್ಶನ

| Published : Jan 25 2025, 01:02 AM IST

ಸಾರಾಂಶ

Chaitrotsava, flower display for Republic Day

-ಶಾಸಕ ಹೆಚ್.ಡಿ. ತಮ್ಮಯ್ಯ ಮಾಹಿತಿ । 26 ರಿಂದ 28 ರವರೆಗೆ ನೇತಾಜಿ ಸುಭಾಷ್ ಚಂದ್ರಬೋಸ್ ಆಟದ ಮೈದಾನದಲ್ಲಿ ಆಯೋಜನೆ

-----

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಾರ್ವಜನಿಕರ ಸಹಭಾಗಿತ್ವದೊಂದಿಗೆ ರಾಷ್ಟ್ರೀಯ ಹಬ್ಬಗಳ ಆಚರಣೆಯಾದರೆ ಅದಕ್ಕೆ ಗೌರವ ತಂದಂತಾಗುತ್ತದೆ. ಈ ನಿಟ್ಟಿನಲ್ಲಿ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಗಣರಾಜ್ಯೋತ್ಸವದ ಅಂಗವಾಗಿ ಚೈತ್ರೋತ್ಸವ, ಫಲಪುಷ್ಪ ಪ್ರದರ್ಶನವನ್ನು ಜ.26 ರಿಂದ 28 ರವರೆಗೆ ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಮೈಸೂರು ಉದ್ಯಾನ ಕಲಾ ಸಂಘ ಹಾಗೂ ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನವನ್ನು ಜ.26 ರಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಉದ್ಘಾಟಿಸಲಿದ್ದಾರೆಂದು ತಿಳಿಸಿದರು.

ಮೈಸೂರು ದಸರಾ ಉತ್ಸವದಲ್ಲಿ ಪ್ರಶಸ್ತಿ ಪಡೆದ ಮುಖ್ಯ ಆಕರ್ಷಣೆಯಾಗಿದ್ದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವಿಸ್ಮಯ ಪ್ರಪಂಚ ಪುಷ್ಪ ಕಲಾಕೃತಿಗಳ ಪ್ರದರ್ಶನ, ಹೂಗಳಿಂದ ಅಲಂಕೃತಗೊಂಡ ತೇಜಸ್ವಿ ಪ್ರತಿಷ್ಠಾನ, ಸ್ಕೂಟರ್, ಇತರೆ ಕಲಾಕೃತಿಗಳ ನಿರ್ಮಾಣ, ಸಿರಿ ಧಾನ್ಯಗಳಿಂದ ಅಲಂಕೃತಗೊಂಡ ತೇಜಸ್ವಿ, ಕುವೆಂಪು ಕಲಾಕೃತಿಗಳು ಜನರ ಅಚ್ಚರಿಗೆ ಕಾರಣವಾಗಲಿದೆ ಎಂದರು.

ಅಲಂಕಾರಿಕ ಗಿಡಗಳು, ಆಂಥೋರಿಯಂ. ಟೋರೇನಿಯಾ, ಸೇವಂತಿಗೆ, ಚೆಂಡುಹೂ, ಪೆಟೋನಿಯಾ, ಸಾಲ್ವಿಯ, ಕ್ಯಾಲುಂಡುಲಾ, ಗಝೇನಿಯಾ, ಡೇಲಿಯ ಸೇರಿದಂತೆ 9 ಸಾವಿರ ವಿವಿಧ ಬಣ್ಣ ಬಣ್ಣದ ಹೂಕುಂಡ, ಸಾಹಿತಿ, ಕ್ರೀಡಾಪಟು, ಜ್ಞಾನಪೀಠ ಪ್ರಶಸ್ತಿ ವಿಜೇತರು, ಇತರೆ ಕಲಾವಿದರ ತರಕಾರಿ ಕೆತ್ತನೆಯ ಪ್ರದರ್ಶನ ಇರಲಿದೆ ಎಂದು ಹೇಳಿದರು.

ತೆಂಗಿನ ಗರಿಗಳಿಂದ ಅಲಂಕೃತಗೊಂಡ ಜಾನೂರು ಆರ್ಟ್, ಬಾಳೇಕಂದು ಮತ್ತು ಕೃಷಿ ತ್ಯಾಜ್ಯ ಬಳಸಿ ಥಾಯ್ ಆರ್ಟ್ ನಿರ್ಮಾಣ, ಜಿಲ್ಲೆಯ ಎಲ್ಲಾ ರೈತರು ಬೆಳೆದಿರುವ ಬಾಳೆ, ಹಲಸು, ಸುವರ್ಣಗೆಡ್ಡೆ, ಗೆಣಸು, ಕಲರ್ ಕ್ಯಾಪ್ಸಿಕಂ, ಕುಂಬಳಕಾಯಿ ವಿವಿಧ ತರಕಾರಿ, ಅಡಿಕೆ, ತಾಳೆ ಮತ್ತಿತರ ಸಾಂಬಾರ ಪದಾರ್ಥಗಳ ಪ್ರದರ್ಶನವಿರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ತೋಟಗಾರಿಕೆ ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಲಾಗುವುದು. 26 ವಿವಿಧ ಆಹಾರ ಮಳಿಗೆಗೆಗಳು, ವಾಣಿಜ್ಯ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಜ.28 ರಂದು 11.30ಕ್ಕೆ ಫಲಪಾಕ ಸ್ಪರ್ಧೆಯಲ್ಲಿ ಸಾರ್ವಜನಿಕರು ಮನೆಯಲ್ಲಿ ಉತ್ತಮವಾಗಿ ತಯಾರಿಸಿಕೊಂಡು ಬಂದಿರುವ ಖಾದ್ಯಗಳಿಗೆ ಪ್ರಥಮ ಬಹುಮಾನ 5 ಸಾವಿರ, ದ್ವಿತೀಯ ಬಹುಮಾನ 3 ಸಾವಿರ, ತೃತೀಯ ಬಹುಮಾನ 2 ಸಾವಿರ ನೀಡಲಾಗುವುದೆಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ಸಿರಿಧಾನ್ಯ ಬಳಸಿ ಅಂಬೇಡ್ಕರ್ ಪುತ್ಥಳಿ, ತರಕಾರಿ ಬಳಸಿ ಸಂಸತ್ ಭವನ ಕಲಾಕೃತಿ, ಆರೋಗ್ಯ ಇಲಾಖೆಯಿಂದ ತಾಯಿ ಮಗು ಪರಿಕಲ್ಪನೆಯ ಸಿರಿಧಾನ್ಯ ಕಲಾಕೃತಿ, ಕೃಷಿ ಇಲಾಖೆಯಿಂದ ಸಿರಿಧಾನ್ಯ ರಾಶಿ, ರಂಗೋಲಿ ಪ್ರದರ್ಶನ, ಮೀನುಗಾರಿಕೆ ಇಲಾಖೆಯಿಂದ ಅಕ್ವೇರಿಯಂ ಅಲಂಕಾರಿ ಮೀನು ಪ್ರದರ್ಶನ, ಮಾರಾಟ ಏರ್ಪಡಿಸಲಾಗಿದೆ ಎಂದರು.

ರೇಷ್ಮೆ ಇಲಾಖೆಯಿಂದ ರೇಷ್ಮೆ ಹುಳುವಿನ ಜೀವನ ಚಕ್ರದ ಪ್ರಾತ್ಯಕ್ಷತೆ, ಪಶುಸಂಗೋಪನ ಇಲಾಖೆಯಿಂದ ಜ.27 ರಂದು ಮಧ್ಯಾಹ್ನ 2.30 ಕ್ಕೆ ಶ್ವಾನ ಪ್ರದರ್ಶನ, ಅದೇ ದಿನ ಲಕ್ಷ್ಮಿ ಮುಗುಳಿದೇವಮ್ಮ ಅವರಿಂದ ಜಾನಪದ ಗೀತ ಗಾಯನ, ಪ್ರವಾಸೋದ್ಯಮ ಇಲಾಖೆಯಿಂದ 3 ದಿನಗಳ ಕಾಲ ಹಾಟ್ ಏರ್ ಬಲೂನ್ ರೈಡಿಂಗ್, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯಿಂದ, ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, 28 ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್, ಜಿ.ಪಂ ಸಿಇಓ ಹೆಚ್.ಎಸ್. ಕೀರ್ತನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮ ಉಪಸ್ಥಿತರಿದ್ದರು.-----

ಪೋಟೋ: 24 ಕೆಸಿಕೆಎಂ 5

ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್‌.ಡಿ. ತಮ್ಮಯ್ಯ ಮಾತನಾಡಿದರು.