ಯಲ್ಲಾಪುರದ ಇಡಗುಂದಿಯಲ್ಲಿ 21ರಿಂದ ಚಾಮುಂಡೇಶ್ವರಿ ಜಾತ್ರೆ

| Published : Feb 18 2024, 01:31 AM IST

ಯಲ್ಲಾಪುರದ ಇಡಗುಂದಿಯಲ್ಲಿ 21ರಿಂದ ಚಾಮುಂಡೇಶ್ವರಿ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಯಲ್ಲಾಪುರ ತಾಲೂಕಿನ ಇಡಗುಂದಿಯ ಶ್ರೀ ಚಾಮುಂಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಫೆ. ೨೧ರಿಂದ ಫೆ. ೨೯ರ ವರೆಗೆ ೯ ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.

ಯಲ್ಲಾಪುರ: ಲೋಕ ಕಲ್ಯಾಣಾರ್ಥವಾಗಿ ಪ್ರತಿ ೩ ವರ್ಷಗಳಿಗೊಮ್ಮೆ ನಡೆಯುವ ತಾಲೂಕಿನ ಇಡಗುಂದಿಯ ಶ್ರೀ ಚಾಮುಂಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಫೆ. ೨೧ರಿಂದ ಫೆ. ೨೯ರ ವರೆಗೆ ೯ ದಿನಗಳ ಕಾಲ ವಿಜೃಂಭಣೆಯಿಂದ ವಿಧ್ಯುಕ್ತವಾಗಿ ನಡೆಯಲಿದೆ ಎಂದು ಚಾಮುಂಡೇಶ್ವರಿ ಟ್ರಸ್ಟ್ ಅಧ್ಯಕ್ಷ ಅನಿಲ ಬಿ. ನಾಯ್ಕ ಚಿನ್ನಾಪುರ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕರಪತ್ರ ಬಿಡುಗಡೆ ಮಾಡಿದ ಅವರು, ಗೋಪಾಲ ಭಟ್ಟ ಮುಂಡಿಗೆತಗ್ಗು ಅವರ ನೇತೃತ್ವದಲ್ಲಿ ಜಾತ್ರೆಯ ಪ್ರಯುಕ್ತ ಫೆ. ೨೧ರಂದು ವಿವಿಧ ವೈದಿಕ ಕಾರ್ಯಕ್ರಮಗಳಾದ ಕಲಾವೃದ್ಧಿ ಹವನ, ಪೂರ್ಣಾಹುತಿ ಮುಂತಾದ ವಿಧಾನಗಳು ನಡೆಯಲಿದೆ. ಫೆ. ೨೧ರಂದು ಮಧ್ಯಾಹ್ನ ೩ ಗಂಟೆಗೆ ಶ್ರೀದೇವಿಯ ಭವ್ಯ ಮೆರವಣಿಗೆಯೊಂದಿಗೆ ಜಾತ್ರಾ ಮೈದಾನದ ಗದ್ದುಗೆಯಲ್ಲಿ ದೇವಿಯ ಪ್ರತಿಷ್ಠಾಪನೆ ನಡೆಯುವುದು ಎಂದು ವಿವರಿಸಿದರು.

ಜಾತ್ರಾ ಅವಧಿಯ ೮ ದಿನಗಳ ಕಾಲ ಭಕ್ತರಿಗೆ ಉಡಿಸೇವೆ, ಹಣ್ಣು-ಕಾಯಿ ಸೇವೆ, ಕುಂಕುಮಾರ್ಚನೆ, ಹರಕೆ ಮತ್ತಿತರ ಸೇವೆಗಳ ಅವಕಾಶಗಳನ್ನು ಕಲ್ಪಿಸಲಾಗಿದೆ. ಜಾತ್ರೆಯ ಪ್ರಯುಕ್ತ ಫೆ. ೨೧ ಮತ್ತು ಫೆ. ೨೭ರಂದು ಸಾರ್ವಜನಿಕ ಅನ್ನಸಂತರ್ಪಣೆ ವ್ಯವಸ್ಥೆಗೊಳಿಸಲಾಗಿದೆ.ಪ್ರಸ್ತುತ ನಡೆಯಲಿರುವ ೬ನೆಯ ವರ್ಷದ ಜಾತ್ರೆಯ ಪ್ರಯುಕ್ತ ಭವ್ಯ ಮೆರವಣಿಗೆ ನಡೆಯಲಿದೆ. ಜಾತ್ರೆಯ ಪ್ರಯುಕ್ತ ಆಕರ್ಷಕ ಸಾಂಸ್ಕೃತಿಕ, ಮನೋರಂಜನಾ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಚಾಮುಂಡೇಶ್ವರಿ ಟ್ರಸ್ಟ್ ಸಮಿತಿ, ಇಡಗುಂದಿಯ ನವಜ್ಯೋತಿ ಜ್ಞಾನ ವಿಕಾಸ ಕೇಂದ್ರ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಮತ್ತಿತರ ಸಂಘಟನೆಗಳ ಸಹಕಾರದೊಂದಿಗೆ ನಡೆಯಲಿರುವ ಜಾತ್ರಾ ಮಹೋತ್ಸವದ ವಿಧಿ-ವಿಧಾನಗಳನ್ನು ದೇವಸ್ಥಾನದ ಮುಖ್ಯ ಅರ್ಚಕ ಗಿರಿಯಾ ಇಡಗುಂದಿ ನಿರ್ವಹಿಸುವರು ಎಂದು ವಿವರಿಸಿದರು.

ಟ್ರಸ್ಟ್ ಉಪಾಧ್ಯಕ್ಷ ತಾರಾಕಾಂತ ಗಿರಿಯಾ ಆಗೇರ, ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರ ಎ. ನಾಯ್ಕ, ಇಡಗುಂದಿ ಗ್ರಾಪಂ ಸದಸ್ಯ ಸತೀಶ ಬಿ. ನಾಯ್ಕ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.