ಸಾರಾಂಶ
ಬದಲಾವಣೆ ಎನ್ನುವುದು ನಿರಂತರವಾದುದು. ಹೀಗಾಗಿ ಮತ್ತಷ್ಟು ಅಭಿವೃದ್ಧಿ ಕೆಲಸ ಆಗಬೇಕಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಕೊಡಗಿಗೆ ಆಗಮಿಸಿ ಬಿಜೆಪಿ ಪ್ರಮುಖರೊಂದಿಗೆ ಸಭೆ ನಡೆಸಿದರು.ಸಭೆಯಲ್ಲಿ ಮಡಿಕೇರಿ ವಿರಾಜಪೇಟೆ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಬೋಪಯ್ಯ ಭಾಗಿಯಾಗಿದ್ದರು. ಕೊಡಗು -ಮೈಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಗೆಲ್ಲಿಸಲು ಸಭೆಯಲ್ಲಿ ವಿಶೇಷ ಚರ್ಚೆ ನಡೆಸಲಾಯಿತು.
ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್, ಮೈಸೂರು- ಕೊಡಗು ಕ್ಷೇತ್ರದಲ್ಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿದ ಬಗ್ಗೆ ಮಾತನಾಡಿ, ಪ್ರತಾಪ್ ಸಿಂಹ 10 ವರ್ಷದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಬದಲಾವಣೆ ಅನ್ನುವುದು ನಿರಂತರವಾದದ್ದು ಹೀಗಾಗಿ ಮತ್ತಷ್ಟು ಅಭಿವೃದ್ಧಿ ಕೆಲಸ ಆಗಬೇಕಿದೆ ಎಂದರು.ಪ್ರತಾಪ್ ಸಿಂಹ ಬದಲಾವಣೆ ಮಾಡಲು ನಿರ್ದಿಷ್ಟವಾದ ಕಾರಣಗಳಿಲ್ಲ. ಸಾಕಷ್ಟು ಕಡೆಗಳಲ್ಲಿ ಈ ರೀತಿ ಬದಲಾವಣೆ ಮಾಡಲಾಗಿದೆ. ಬದಲಾವಣೆ ಎಂಬುದು ಪಕ್ಷದ ನಿರಂತರ ಪ್ರಕ್ರಿಯೆ. ಆದರೆ ಯದುವೀರ್ ಮತ್ತಷ್ಟು ಉತ್ತಮ ಅಭ್ಯರ್ಥಿ ಆಗಿದ್ದಾರೆ. ಪ್ರತಾಪ್ ಸಿಂಹರಿಗೆ ಪಕ್ಷದಲ್ಲಿ ಒಳ್ಳೆಯ ಅವಕಾಶ ಸಿಗಲಿದೆ. ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ. ಪ್ರತಾಪ್ ಸಿಂಹ ಪ್ರಧಾನಿ ನರೇಂದ್ರ ಮೋದಿಗೆ ತುಂಬಾ ಹತ್ತಿರ ಇದ್ದಾರೆ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಹೇಳಿದರು.