ಚನ್ನಬಸವ ಪಟ್ಟದ್ದೇವರ 25ನೆ ಸ್ಮರಣೋತ್ಸವ, ವಚನ ಜಾತ್ರೆ

| Published : Mar 31 2024, 02:13 AM IST

ಸಾರಾಂಶ

ಏ.19 ರಿಂದ 23ರವರೆಗೆ ಭಾಲ್ಕಿ ಹಿರೇಮಠ ಸಂಸ್ಥಾನದಿಂದ ನಡೆಯಲಿರುವ ವಚನ ಜಾತ್ರೆ, ಅಕ್ಕಮಹಾದೇವಿ ಜಯಂತಿ ಉತ್ಸವ, ಡಾ.ಚನ್ನಬಸವ ಪಟ್ಟದ್ದೇವರ 25ನೆ ಸ್ಮರಣೋತ್ಸವ ಮತ್ತು ಕರ್ನಾಟಕ ಸಂಭ್ರಮ 50ರ ಅಂಗವಾಗಿ ಪೂರ್ವಭಾವಿ ಸಭೆ ನಡೆಯಿತು.

ಭಾಲ್ಕಿ: ಏ.19 ರಿಂದ 23ರವರೆಗೆ ಭಾಲ್ಕಿ ಹಿರೇಮಠ ಸಂಸ್ಥಾನದಿಂದ ನಡೆಯಲಿರುವ ವಚನ ಜಾತ್ರೆ, ಅಕ್ಕಮಹಾದೇವಿ ಜಯಂತಿ ಉತ್ಸವ, ಡಾ.ಚನ್ನಬಸವ ಪಟ್ಟದ್ದೇವರ 25ನೆ ಸ್ಮರಣೋತ್ಸವ ಮತ್ತು ಕರ್ನಾಟಕ ಸಂಭ್ರಮ 50ರ ಅಂಗವಾಗಿ ಪೂರ್ವಭಾವಿ ಸಭೆ ನಡೆಯಿತು.

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯ ರಾಜಕೀಯ ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಮಠದ ಭಕ್ತರು, ಹಿತೈಷಿಗಳಿಂದ ಐದು ದಿವಸ ನಡೆಯುವ ಸಮಾರಂಭದ ಯಶಸ್ವಿಗೆ ವಿವಿಧ ಸಲಹೆ ಸೂಚನೆಗಳು ನೀಡಿದರು.

ಸಭೆಯ ನೇತೃತ್ವ ವಹಿಸಿದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಅಂಗವಾಗಿ ಏ.19 ರಿಂದ 23ರವರೆಗೆ ಐದು ದಿವಸ ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜಿಸಲು ನಿರ್ಧರಿಸಲಾಗಿದೆ. ಭಕ್ತರಿಂದ ಉತ್ತಮ ಸಲಹೆಗಳು ವ್ಯಕ್ತವಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಡಾ.ಚನ್ನಬಸವ ಪಟ್ಟದ್ದೇವರ ಕಾಯಕ-ದಾಸೋಹ ನಮ್ಮೆಲ್ಲರಿಗೂ ಪ್ರೇರಣೆಯಾಗಿವೆ. ಅವರ ಸಾನ್ನಿಧ್ಯದಲ್ಲಿ ಕಳೆದ 24 ವರ್ಷಗಳಿಂದ ರಚನಾತ್ಮಕ ಕಾರ್ಯಗಳು ನಡೆಯುತ್ತಿವೆ. ಸಮಾರಂಭದ ಯಶಸ್ವಿಗೆ ಅಗತ್ಯ ಸಹಾಯ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.

ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಡಾ.ಚನ್ನಬಸವ ಪಟ್ಟದ್ದೇವರ 25ನೆ ಸ್ಮರಣೋತ್ಸವ, ಅಕ್ಕಮಹಾದೇವಿ ಜಯಂತಿ, ಕರ್ನಾಟಕ 50ರ ಸಂಭ್ರಮ ಸಮಾರಂಭ ಅರ್ಥಪೂರ್ಣವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಹಸ್ರ ಸಂಖ್ಯೆಯ ಭಕ್ತರು ಸಮಾರಂಭಕ್ಕೆ ಸಾಕ್ಷಿಯಾಗಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಸವಕಲ್ಯಾಣ ಶಾಸಕ ಶರಣು ಸಲಗರ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸಿದ್ರಾಮಪ್ಪ ವಂಕೆ, ರಾಚಪ್ಪ ಗೋರ್ಟೆ, ಬಾಬು ವಾಲಿ, ಬಸವರಾಜ ಧನ್ನೂರು, ಆನಂದ ದೇವಪ್ಪ, ಸುರೇಶ ಚನಶೆಟ್ಟಿ, ಶಿವು ಲೋಖಂಡೆ, ಶಂಭುಲಿಂಗ ಕಾಮಣ್ಣ, ಜಯರಾಜ ಖಂಡ್ರೆ, ಚಂದ್ರಕಾಂತ ಪಾಟೀಲ್, ಓಂಪ್ರಕಾಶ ರೊಟ್ಟೆ, ಶಶಿಧರ ಕೋಸಂಬೆ, ಕಿರಣ ಖಂಡ್ರೆ, ಶಿವಾನಂದ ಗುಂದಗೆ, ಕಾಶಿನಾಥ ಭೂರೆ, ಶ್ರೀಕಾಂತ ಭೂರಾಳೆ, ಬಸವರಾಜ ಭತಮೂರ್ಗೆ, ನಾಗಭೂಷಣ ಮಾಮಡಿ, ಬಸವರಾಜ ಮರೆ, ಶಿವಕುಮಾರ ಕಲ್ಯಾಣೆ, ರವೀಂದ್ರ ಚಿಡಗುಪ್ಪೆ, ರಾಜಕುಮಾರ ಬಿರಾದಾರ, ಶಿವಾಜಿ ಸಗರ, ಅಶೋಕ ಬಾವುಗೆ, ಧನರಾಜ ಬಂಬುಳಗೆ, ಮಲ್ಲಮ್ಮ ನಾಗನಕೇರೆ, ಮಹಾನಂದಾ ಮಾಶೆಟ್ಟೆ ಸೇರಿದಂತೆ ಹಲವರು ಇದ್ದರು. ದೀಪಕ ಠಮಕೆ ನಿರೂಪಿಸಿದರು.

ಸ್ವಾಗತ ಸಮಿತಿಗೆ ಆಯ್ಕೆ:

ಡಾ.ಚನ್ನಬಸವ ಪಟ್ಟದ್ದೇವರ 25ನೆ ಸ್ಮರಣೋತ್ಸವ ಸ್ವಾಗತ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮತ್ತು ಅಧ್ಯಕ್ಷರಾಗಿ ಸಚಿವ ಈಶ್ವರ ಖಂಡ್ರೆ ಹೆಸರು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಪ್ರಕಟಿಸಿದರು.

ಕಾರ್ಯಕ್ರಮಗಳ ವಿವರ: ಏ.10 ರಿಂದ 21ರ ವರೆಗೆ ಸಂಜೆ 5 ಗಂಟೆಗೆ ವೈರಾಗ್ಯನಿಧಿ ಅಕ್ಕಮಹಾದೇವಿ ಕುರಿತು ಪ್ರವಚನ ನಡೆಯಲಿದೆ. 15ರಿಂದ 21ರ ವರೆಗೆ ಬೆಳಗ್ಗೆ 6 ಗಂಟೆಗೆ ವಚನ ಪಾರಾಯಣ, 19ರಿಂದ 21ರವರೆಗೆ ವಿವಿಧ ಗೋಷ್ಠಿ, 22ರಂದು ಬೆಳಗ್ಗೆ 6 ಗಂಟೆಗೆ ಪ್ರಭಾತಫೇರಿ, ಬೆಳಗ್ಗೆ 11ಕ್ಕೆ ಕಾರ್ಯಕ್ರಮ ಉದ್ಘಾಟನೆ, ಸಂಜೆ 6ಕ್ಕೆ ಕರ್ನಾಟಕ 50ರ ಸಂಭ್ರಮ ಕಾರ್ಯಕ್ರಮ, ಏ.23ರಂದು ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತಿ ಆಚರಣೆ ಮೂಲಕ ಈ ಎಲ್ಲ ಸಮಾರಂಭಗಳಿಗೆ ತೆರೆ ಬೀಳಲಿದೆ ಎಂದು ಪೂಜ್ಯರು ತಿಳಿಸಿದರು.