ಮೈಸೂರು, ಶಿವರಾಂ ಪೇಟೆಯಲ್ಲಿರುವ ಸಂಘದ ಕಚೇರಿ

- ಒಕ್ಕಲಿಗರ ಮಹಾಸಭಾ, ಅಲೆಯನ್ಸ್‌ ನಾಲ್ವಡಿಯಿಂದ ಶ್ರದ್ಧಾಂಜಲಿ----------

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಶಿವರಾಂ ಪೇಟೆಯಲ್ಲಿರುವ ಸಂಘದ ಕಚೇರಿಯಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಹಾಗೂ ಅಲೆಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ ವತಿಯಿಂದ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಸ್ಕೃತಿ ಚಿಂತಕ ರಘುರಾಮ ವಾಜಪೇಯಿ ಮಾತನಾಡಿ, ಚನ್ನಮ್ಮ ದೇವೇಗೌಡರು ರಾಜಕೀಯದ ಉನ್ನತ ಸ್ಥಾನದಲ್ಲಿರುವ ಕುಟುಂಬದ ಜನರ ಹಾಗೂ ಸಾಮಾನ್ಯರ ನಡುವೆ ರಾಜಮಾತೆಯ ಹಾಗೆ ಬದುಕಿ ತೋರಿಸಿದವರು. 60-70 ವರ್ಷಗಳ ಸುದೀರ್ಘ ಕೌಟುಂಬಿಕ ರಾಜಕಾರಣದ ವಾತಾವರಣದಲ್ಲಿ ಎಲ್ಲೂ ಅಸಹನೆ, ಬೇಸರಗೊಳ್ಳದೆ ದೇವೇಗೌಡರ ಕುಟುಂಬವನ್ನು ಮುನ್ನಡೆಸಿದ್ದಾರೆ. ಇವತ್ತಿನ ರಾಜಕೀಯ ಕುಟುಂಬದ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿ, ರಾಜಕಾರಣದ ಇಕ್ಕಟ್ಟು ಬಿಕ್ಕಟ್ಟಿನ ಸ್ಥಿತಿಯಲ್ಲಿಯು ಸಮಚಿತ್ತವನ್ನು ಕಾಪಾಡಿಕೊಂಡು ಮಕ್ಕಳನ್ನು ಸರಿದಾರಿಗೆ ನಡೆಸಿದ ಕೀರ್ತಿ ಇವರದು. ಸರಳತೆ ಮತ್ತು ಮುಗ್ದತೆ ಪ್ರಬುದ್ಧ ನಡೆಗಳ ಮೂಲಕ ಇವತ್ತಿನ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ನಾಗರಾಜ್ ವಿ ಭೈರಿ ಮಾತನಾಡಿ, ರಾಜ್ಯದ ಬೇರೆ ಬೇರೆ ರಾಜಕೀಯ ಕುಟುಂಬದ ವ್ಯಕ್ತಿಗಳು ಬೇರೆ ಬೇರೆ ಪಕ್ಷಗಳಲ್ಲಿ ಹಂಚಿ ಹೋಗಿರುವ ನಿದರ್ಶನಗಳಿವೆ. ಆದರೆ ದೇವೇಗೌಡರ ಕುಟುಂಬದಲ್ಲಿ ಎಲ್ಲ ಮಕ್ಕಳು ಬಂಧುಗಳು ಎಲ್ಲರನ್ನೂ ಒಂದೇ ಪಕ್ಷದಲ್ಲಿ ಇರುವಂತೆ ನೋಡಿಕೊಳ್ಳುವಲ್ಲಿ ಚೆನ್ನಮ್ಮನವರ ಪಾತ್ರ ಅಪಾರವಾದದ್ದು. ಅವರ ದೈವಿಕ ಭಕ್ತಿ ಶ್ರದ್ಧೆ ತ್ಯಾಗ ಬೆಲೆ ಕಟ್ಟಲಾಗದ ಸಂಗತಿ ಎಂದು ಅಭಿಪ್ರಾಯಪಟ್ಟರು.

ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಹಾಗೂ ಅಲಿಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ ಇವೆರಡರ ಅಧ್ಯಕ್ಷ ಎನ್. ಬೆಟ್ಟೇಗೌಡ, ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು, ಮಹಾಸಭಾ ಉಪಾಧ್ಯಕ್ಷೆ ಲಕ್ಷ್ಮೀದೇವಿ, ಜ್ಯೋತಿ, ಕೆ.ಕೆ. ಜಯರಾಮ್, ನಾಗೇಂದ್ರ, ಲತಾ ಬಾಲಕೃಷ್ಣ, ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್, ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಳ್ಳಿ ರಾಮಕೃಷ್ಣ, ಯೋಗೇಶ್ ಇದ್ದರು.