ಕನ್ನಡಪ್ರಭ ವಾರ್ತೆ ಹಾಸನ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಪತ್ನಿ ದಿ.ಚನ್ನಮ್ಮ ಅವರ ಉತ್ತರ ಕ್ರಿಯಾದಿ ಕಾರ್ಯವು ಜು.30ರಂದು ಗುರುವಾರ ನಡೆಯಲಿದ್ದು, ಎಚ್.ಡಿ.ದೇವೇಗೌಡರು, ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಿದ್ಧತಾ ಕಾರ್ಯ ಪರಿಶೀಲನೆ ನಡೆಸಿದ್ದಾರೆ.

ಚನ್ನಮ್ಮ ಅವರ 11ನೇ ದಿನದ ಕಾರ್ಯಕ್ಕೆ ಲಕ್ಷಕ್ಕೂ ಅಧಿಕ ಮಂದಿ ಆಗಲಿಸುವ ನಿರೀಕ್ಷೆ ಇದ್ದು, ಪಾರ್ಕಿಂಗ್ ವ್ಯವಸ್ಥೆ, ಊಟಕ್ಕಾಗಿ ಪ್ರತ್ಯೇಕ ಆಸನ ಮತ್ತು ಕೌಂಟರ್ ತೆರೆಯಲಾಗಿದೆ. ಅಡುಗೆ ಸಿದ್ಧಮಾಡುವ ಜವಾಬ್ದಾರಿಯನ್ನು ಮೈಯ್ಯಾಸ್ ಗ್ರೂಪ್‌ನವರಿಗೆ ವಹಿಸಲಾಗಿದೆ. ಸುಮಾರು 6 ವಿಧದ ಸಿಹಿ ತಿಂಡಿ ಸೇರಿ ರುಚಿಕರವಾದ ಅಡುಗೆ ತಯಾರಾಗಲಿದೆ. ಸಾಮಾನ್ಯರು, ಗಣ್ಯರು ಸೇರಿದಂತೆ ಪ್ರತ್ಯೇಕವಾಗಿ 16 ಕೌಂಟರ್ ತೆರೆಯಲಾಗಿದ್ದು, 1500 ಅಡುಗೆ ಭಟ್ಟರು ತರೆಹೇವಾರಿ ಅಡುಗೆ ತಯಾರು ಮಾಡಲಿದ್ದಾರೆ.ಕಾರ್ಯ ನಡೆಯುವ 1 ಕಿ.ಮೀ. ದೂರದಿಂದಲೇ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ವಿಐಪಿಗಳಿಗೆ ಪ್ರತ್ಯೇಕ ಮಾರ್ಗ ಮತ್ತು ಪಾರ್ಕಿಂಗ್ ಸ್ಥಳ ನಿಗದಿ ಮಾಡಲಾಗಿದೆ. ಸಾರ್ವಜನಿಕರು, ಮಹಿಳೆಯರಿಗೆ ಊಟದ ಸ್ಥಳಕ್ಕೆ‌ ಪ್ರತ್ಯೇಕ ದಾರಿ, ಬೈಕ್ ಹಾಗೂ ಕಾರು ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.ಕಾರ್ಯಕ್ರಮ ಸ್ಥಳದ 1 ಕಿ.ಮೀ. ಸುತ್ತಳತೆಯಲ್ಲಿ ದೇವೇಗೌಡರ ಕುಟುಂಬದವರ ವಾಹನ ಹೊರತುಪಡಿಸಿ ಯಾವುದೇ ಖಾಸಗಿ ವಾಹನ ಒಳ ಬರುವಂತಿಲ್ಲ. ಜನರನ್ನು ಪಿಕ್ ಅಪ್ ಮತ್ತು ಡ್ರಾಪ್ ಮಾಡಲು ಸುಮಾರು 16 ವಾಹನ ವ್ಯವಸ್ಥೆ ಮಾಡಲಾಗಿದೆ.

ಪಾರ್ಕಿಂಗ್‌ಗಾಗಿ ಹಾಸನ ಕಡೆಯಿಂದ ಹೋಗುವವರಿಗೆ ಹೆದ್ದಾರಿ ಎದುರು, ಎಡಭಾಗ, ಹರಿಹರಪುರ ಕಡೆಯಿಂದ ಬರುವವರಿಗೆ ಮೊರಾರ್ಜಿ ವಸತಿ ಶಾಲೆ ಸುತ್ತಮುತ್ತ, ನೀರಿನ ಟ್ಯಾಂಕ್ ಪಕ್ಕ, ಹೆಲಿಪ್ಯಾಡ್ ಕೆಳಗೆ, ಹರದನಹಳ್ಳಿ ಸರ್ಕಾರಿ ಸಂಯುಕ್ತ ಶಾಲೆ ಮೊದಲಾದ ಹತ್ತಕ್ಕೂ ಕಡೆಗಳಲ್ಲಿ ಪಾರ್ಕಿಂಗ್ ಸ್ಥಳ ಗೊತ್ತು ಮಾಡಲಾಗಿದೆ.

ಮಾಜಿ‌ ಸಚಿವ ಎಚ್‌.ಡಿ.ರೇವಣ್ಣ ಅವರು ಭಾನುವಾರದಿಂದಲೂ ಸ್ಥಳದಲ್ಲೇ ಮೊಕ್ಕಾಂ ಹೂಡಿ ಊಟದ ಹಾಲ್, ಇತರ ವ್ಯವಸ್ಥೆ ಗಳ ಮೇಲುಸ್ತುವಾರಿ ನಡೆಸಿದ್ದಾರೆ.