ಸಾರಾಂಶ
ಇದೊಂದು ದೇಶ ದ್ರೋಹದ ಕೆಲಸ. ವಿಧಾನಸೌಧದಲ್ಲಿ ಅಷ್ಟೊಂದು ಸಂಖ್ಯೆಯ ಸಾರ್ವಜನಿಕರನ್ನು ಬಿಟ್ಟಿದ್ದಾದರೂ ಯಾರು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ದೇಶ ವಿರೋಧಿ ಹೇಳಿಕೆ ಕೂಗಿದವರು ಯಾರು, ತಕ್ಷಣವೇ ಅವರನ್ನು ಬಂಧಿಸಬೇಕಿತ್ತು
ಗದಗ: ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಮಂಗಳವಾರ ಗದಗ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರ ಮತ್ತು ನಾಶಿರ್ ಹುಸೇನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗಾಂಧಿ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ನಾಶಿರ್ ಹುಸೇನ ವಿರುದ್ಧ ಘೋಷಣೆ ಕೂಗಿದರು.ಈ ಸಂದರ್ಭದಲ್ಲಿ ನಾಯಕರು ಮಾತನಾಡಿ, ಇದೊಂದು ದೇಶ ದ್ರೋಹದ ಕೆಲಸ. ವಿಧಾನಸೌಧದಲ್ಲಿ ಅಷ್ಟೊಂದು ಸಂಖ್ಯೆಯ ಸಾರ್ವಜನಿಕರನ್ನು ಬಿಟ್ಟಿದ್ದಾದರೂ ಯಾರು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ದೇಶ ವಿರೋಧಿ ಹೇಳಿಕೆ ಕೂಗಿದವರು ಯಾರು, ತಕ್ಷಣವೇ ಅವರನ್ನು ಬಂಧಿಸಬೇಕಿತ್ತು, ಅವರನ್ನು ಹೊರಗೆ ಬಿಟ್ಟವರು ಯಾರು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ನಾಶಿರ್ ಹುಸೇನ ಕೂಡಾ ಆ ಸಮಯದಲ್ಲಿ ಮಾಧ್ಯಮಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ, ಕಾಂಗ್ರೆಸ್ ನಾಯಕರು ಹಲವಾರು ಬಾರಿ ಪಾಕಿಸ್ತಾನ ಪರವಾಗಿ ಮಾತನಾಡುತ್ತಿದ್ದಾರೆ. ಇವರೆಲ್ಲ ರಾಷ್ಟ್ರ ವಿರೋಧಿಗಳು ಎನ್ನುವುದು ಪದೇ ಪದೇ ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಪ್ರತಿಭಟನೆಯಲ್ಲಿ ನಗರಸಭೆಯ ಅಧ್ಯಕ್ಷೆ ಉಷಾ ದಾಸರ, ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ವಿದ್ಯಾವತಿ ಗಡಗಿ, ವಿಜಯಲಕ್ಷ್ಮಿ ದಿಂಡೂರ, ಶಿವರಾಜಗೌಡ ಹಿರೇಮನಿ ಪಾಟೀಲ, ಮಹೇಶ ದಾಸರ, ಎಂ.ಎಸ್. ಕರಿಗೌಡ್ರ, ವಿಜಯಕುಮಾರ ಗಡ್ಡಿ, ಶ್ರೀಪತಿ ಉಡುಪಿ, ಸಿದ್ಧು ಪಲ್ಲೇದ ಸೇರಿದಂತೆ ಅನೇಕರು ಹಾಜರಿದ್ದರು.