ಲೋಕಸಭೆ ಚುನಾವಣೆಯಲ್ಲಿ ರಾಮ, ಕೃಷ್ಣರ ಜಪ ನಡೆಯಲ್ಲ

| Published : Jan 10 2024, 01:46 AM IST

ಸಾರಾಂಶ

ದೇಶದಲ್ಲಿ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ಈಗ ನಿದ್ದೆಯಿಂದ ಮೇಲೆದ್ದಿರುವ ಬಿಜೆಪಿಗರು ರಾಮ, ಕೃಷ್ಣರ ಜಪ ಮಾಡುತ್ತಿದ್ದಾರೆ. ಇಂಥ ಅಧ್ಯಾತ್ಮ ಗಿಮಿಕ್‌ಗಳು ನಡೆಯುವುದಿಲ್ಲ. ಈ ಕಾಲಕ್ಕೆ ಏನಿದ್ದರೂ ಅಭಿವೃದ್ಧಿಯ ಜಪ ಮಾತ್ರ ಗೆಲುವಿನ ಸಾಧನ ಎಂದು ಸಚಿವ ಮಧು ಬಂಗಾರಪ್ಪ ಸೊರಬದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಲೋಕಸಭೆ ಚುನಾವಣೆ ಹತ್ತಿರ ಆಗುತ್ತಿದ್ದಂತೆ ನಿದ್ದೆಯಿಂದ ಮೇಲೆದ್ದಿರುವ ಬಿಜೆಪಿಗರು ರಾಮ, ಕೃಷ್ಣರ ಜಪ ಮಾಡುತ್ತಿದ್ದಾರೆ. ಇಂಥ ಅಧ್ಯಾತ್ಮ ಗಿಮಿಕ್‌ಗಳು ನಡೆಯುವುದಿಲ್ಲ. ಈ ಕಾಲಕ್ಕೆ ಏನಿದ್ದರೂ ಅಭಿವೃದ್ಧಿಯ ಜಪ ಮಾತ್ರ ಗೆಲುವಿನ ಸಾಧನ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಮಂಗಳವಾರ ಪಟ್ಟಣದ ಬಂಗಾರಧಾಮದಲ್ಲಿ ಯುವನಿಧಿ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದ ಜಾಗತಿಕ ಮಟ್ಟದಲ್ಲಿ ದೇಶದ ಸಂಸ್ಕೃತಿ ಎತ್ತಿಹಿಡಿದಿದ್ದಾರೆ. ಅವರ ಜನ್ಮದಿನದಂದು ಯುವಜನತೆಗೆ ಸ್ಫೂರ್ತಿಯಾಗಿ ರಾಜ್ಯ ಸರ್ಕಾರ ಯುವನಿಧಿ ಹೆಸರಿನಲ್ಲಿ 5ನೇ ಗ್ಯಾರಂಟಿ ಜಾರಿಗೊಳಿಸುತ್ತಿದೆ. ಪದವೀಧರರಿಗೆ ಆರ್ಥಿಕ ಶಕ್ತಿ ನೀಡುವ ಉದ್ದೇಶದಿಂದ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಅರಣ್ಯ ಭೂಮಿಯಲ್ಲಿ ಶೇ.70ರಷ್ಟು ಜನರು ವಾಸವಾಗಿದ್ದಾರೆ. ಸರ್ಕಾರ ಅರಣ್ಯ ಮತ್ತು ಬಗರ್‌ಹುಕುಂ ಸಾಗುವಳಿದಾರರ ಪರವಾಗಿದೆ. ಸಾಕಷ್ಟು ಗ್ರಾಮದ ರೈತರಿಗೆ ಅರಣ್ಯ ಇಲಾಖೆಯಿಂದ ನೋಟಿಸ್ ನೀಡಿರುವ ಮಾಹಿತಿಯಿದೆ. ಯಾವುದೇ ರೈತರು ಅರಣ್ಯ ಮತ್ತು ಬಗರ್‌ಹುಕುಂ ವಿಚಾರದಲ್ಲಿ ಭಯಪಡುವ ಅಗತ್ಯವಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಹಾಗೂ ತಜ್ಞರ ಜೊತೆ ಸಮಾಲೋಚನೆ ನಡೆಸಲಾಗಿದೆ ಎಂದರು.

ತಾಲೂಕಿನ ಜನರ ಸಂಪೂರ್ಣ ಬೆಂಬಲ ಇರುವವರೆಗೆ ರಾಜಕೀಯವಾಗಿ ಉನ್ನತ ಸ್ಥಾನಕ್ಕೇರುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಬದುಕಿರುವವರೆಗೂ ಕ್ಷೇತ್ರದ ಜನರ ರಕ್ಷಣೆ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ. ಜ.15ರ ನಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ನಡೆಸಿ, ಸಾರ್ವಜನಿಕ ಸಮಸ್ಯೆಗಳನ್ನು ಅರಿತು, ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ, ಮುಖಂಡರಾದ ಎಂ. ಶ್ರೀಕಾಂತ್, ಷಡಕ್ಷರಿ, ಎಚ್. ಗಣಪತಿ, ಸದಾನಂದಗೌಡ, ಕೆ.ವಿ. ಗೌಡ, ಕೆ.ಪಿ.ರುದ್ರಗೌಡ, ಕಲ್ಲಂಬಿ ಹಿರಿಯಣ್ಣ, ತಬಲಿ ಬಂಗಾರಪ್ಪ, ಎಂ.ಡಿ.ಶೇಖರ್, ವಿಶಾಲಕ್ಷಮ್ಮ, ರವಿ ಬರಗಿ, ಪ್ರವೀಣ್, ಸಂಜಯ್ ಸೇರಿದಂತೆ ಪುರಸಭಾ ಸದಸ್ಯರು ಹಾಜರಿದ್ದರು.

- - -

ಕೋಟ್ ಬಿಜೆಪಿಯವರು ರಾಮ, ಕೃಷ್ಣರನ್ನು ಮುಂದಿಟ್ಟುಕೊಂಡು ಚುನಾವಣೆ ದಾಳ ಉರುಳಿಸಿ ಮತದಾರರನ್ನು ವಂಚಿಸಲು ಹೊರಟಿದ್ದಾರೆ. ಅವರಿಗೆ ಯಾವುದೇ ಲಾಭ ಲಭಿಸುವುದಿಲ್ಲ

- ಮಧು ಬಂಗಾರಪ್ಪ, ಶಿಕ್ಷಣ ಸಚಿವ

- - - -09ಕೆಪಿಸೊರಬ04:

ಸೊರಬ ಪಟ್ಟಣದ ಬಂಗಾರಧಾಮದಲ್ಲಿ ಯುವನಿಧಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.