ದಾನ - ಧರ್ಮದಿಂದ ಬದುಕು ಸಾರ್ಥಕ

| Published : Dec 30 2023, 01:30 AM IST

ಸಾರಾಂಶ

ನಮ್ಮ ಶರೀರ ಮಣ್ಣಿಗೆ ಹೋಗುವ ಮುನ್ನ ದಾನದಂತಹ ಪರೋಪಕಾರ ಕೆಲಸ ಮಾಡಬೇಕು. ಆಗ ಸಾರ್ಥಕ ಬದುಕು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಪ್ರತಿಯೊಬ್ಬರೂ ತಮ್ಮ ದುಡಿಮೆಯಲ್ಲಿನ ಸ್ವಲ್ಪ ಭಾಗ ದಾನ, ಧರ್ಮಕ್ಕೆ ಮೀಸಲಿಡಬೇಕು. ಆಗ ಈ ಶರೀರ ಕಳೆದ ಹೋದ ಮೇಲೂ ದಾನಿಗಳು ಮಾಡಿದಂತಹ ಕೆಲಸ ಕಾರ್ಯಗಳು ನಮ್ಮನ್ನು ಅಜರಾಮರವಾಗಿ ಉಳಿಯುವಂತೆ ಮಾಡುತ್ತದೆ ಎಂದು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರುಪಾಕ್ಷ ಸ್ವಾಮಿಗಳು ಹೇಳಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಹಾರ್ವರ್ಡ್ ಪಿಯು ಸೈನ್ಸ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಲಿಂ.ಚನ್ನಣ್ಣ ಬಸವಂತ್ರಾಯ ದೇಸಾಯಿ ಇವರ ಸ್ಮರಣಾರ್ಥ ಹಾರ್ವರ್ಡ ಕಾಲೇಜಿನಲ್ಲಿ ದತ್ತಿ ಸಾಹಿತ್ಯ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮ ಶರೀರ ಮಣ್ಣಿಗೆ ಹೋಗುವ ಮುನ್ನ ದಾನದಂತಹ ಪರೋಪಕಾರ ಕೆಲಸ ಮಾಡಬೇಕು. ಆಗ ಸಾರ್ಥಕ ಬದುಕು ಸಾಧ್ಯವಾಗುತ್ತದೆ. ಸೇವೆ ಮಾಡುವುದರಿಂದ ಬದುಕು ಉಜ್ವಲದತ್ತ ಕೊಂಡೊಯ್ಯುತ್ತದೆ. ಅದನ್ನು ಲಿಂ. ಚನ್ನಣ್ಣ ದೇಸಾಯಿ ಮಾಡಿದ್ದಾರೆ. ವಯಸ್ಸಾದ ತಂದೆ - ತಾಯಿ ವೃದ್ಧಾಶ್ರಮಕ್ಕೆ ಕಳುಹಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪ್ರಭುಗೌಡ ದೇಸಾಯಿ ತಮ್ಮ ತಂದೆ ಹೆಸರಲ್ಲಿ ದತ್ತಿಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ದಾನ, ಧರ್ಮ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಪ್ರಸ್ತುತ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವುದು ಅಗತ್ಯವಾಗಿದೆ. ಗುರುವಿಗೆ ಭಾರತದಲ್ಲಿ ದೊಡ್ಡ ಸ್ಥಾನವಿದೆ. ಗುರುಗಳಿಗೆ ಗೌರವ ಕೊಡುವುದರ ಜತೆಗೆ ಶ್ರದ್ಧೆ, ಪರಿಶ್ರಮ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಯಶಸ್ಸು ಕಂಡ ಮೇಲೆ ತಂದೆ - ತಾಯಿ ಸೇವೆ ಮಾಡಿ, ಪುಣ್ಯ ಪಡೆಯಬೇಕು. ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಜಿ.ಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ನಮ್ಮ ತಂದೆ ಚನ್ನಣ್ಣ ದೇಸಾಯಿ ಎಲ್ಲರಿಗೂ ಗೌರವಿಸುವ ಸ್ವಭಾವ ಹೊಂದಿದ್ದರು. ಸರಳ ವ್ಯಕ್ತಿತ್ವದವರಾಗಿದ್ದರು. ಜೊತೆಗೆ ಸಂಗೀತಗಾರರು ಕೂಡ ಆಗಿದ್ದು ದೇವರ ಭಜನೆ, ಪ್ರಾರ್ಥನೆ ಹೀಗೆ ದೇವರ ಆರಾಧಕರಾಗಿದ್ದರು. ಅವರು ಮಾಡಿದ ಸಾಮಾಜಿಕ ಕೆಲಸ ಕಾರ್ಯಗಳನ್ನು ಸ್ಮರಿಸಿಕೊಂಡರೆ ಈಗಲೂ ದುಃಖ ಆಗುತ್ತದೆ ಎಂದು ಭಾವುಕರಾಗಿ ಮೆಲುಕು ಹಾಕಿದರು. ಈ ವೇಳೆ ಹಾರ್ವರ್ಡ್‌ ಪಿಯು ಕಾಲೇಜು ಅಧ್ಯಕ್ಷ ಎಸ್.ಎಂ ನೆರಬೆಂಚಿ, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಸವರಾಜ ನಾಲತವಾಡ, ಬಾಲಾಜಿ ಶುಗರ್ಸ್‌ ನ ಉಪಾಧ್ಯಕ್ಷ ರಾಹುಲ ಪಾಟೀಲ, ನ್ಯಾಯವಾದಿ ಎಸ್.ಬಿ ಬಾಚಿಹಾಳ, ಕ.ಕೋ.ಬ್ಯಾಂಕ್ ಅಧ್ಯಕ್ಷ ಸತೀಶ್ ಓಸ್ವಾಲ್, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಸಾಹಿತಿ ಅಶೋಕ ಮಣಿ, ಗಣ್ಯ ಉದ್ಯಮಿಗಳಾದ ಸುಧೀರ ನಾವದಗಿ, ಶರಣು ಸಜ್ಜನ, ಸುನೀಲ ಇಲ್ಲೂರ, ರುದ್ರಪ್ಪ ಕಡಿ, ಎಸ್.ಎಚ್. ಮುದ್ನಾಳ, ಅರವಿಂದ ಹೂಗಾರ, ಪುರಸಭೆ ಸದಸ್ಯ ಚನ್ನಪ್ಪ ಕಂಠಿ, ವಿರೇಶ ಹಡಲಗೇರಿ,ಬಾಪುಗೌಡ ಪಾಟೀಲ, ಮಹಾದೇವಿ ವಾಲಿ, ರೂಪಾ ದೇಸಾಯಿ, ಆರ್.ಬಿ ರೂಡಗಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.