ಸಾರಾಂಶ
ಚೆಲುವನಾರಾಯಣಸ್ವಾಮಿಗೆ ಶನಿವಾರ ರಾತ್ರಿ ವಜ್ರಖಚಿತ ರಾಜಮುಡಿ ಕಿರೀಟಧಾರಣ ಮಹೋತ್ಸವ ವೈಭವದಿಂದ ನೆರವೇರಿತು. ಜಿಲ್ಲಾ ಖಜಾನೆಯಿಂದ ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ತಂದ ರಾಜಮುಡಿ ತಿರುವಾಭರಣಪೆಟ್ಟಿಗೆ ಪಾರ್ಕಾವಣೆ ಮಾಡಿ 7.15ಕ್ಕೆ ಸ್ವಾಮಿಗೆ ಧರಿಸಿ ವೈಭವದಿಂದ ಉತ್ಸವ ನೆರವೇರಿಸಲಾಯಿತು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಚೆಲುವನಾರಾಯಣಸ್ವಾಮಿಗೆ ಶನಿವಾರ ರಾತ್ರಿ ವಜ್ರಖಚಿತ ರಾಜಮುಡಿ ಕಿರೀಟಧಾರಣ ಮಹೋತ್ಸವ ವೈಭವದಿಂದ ನೆರವೇರಿತು. ಜಿಲ್ಲಾ ಖಜಾನೆಯಿಂದ ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ತಂದ ರಾಜಮುಡಿ ತಿರುವಾಭರಣಪೆಟ್ಟಿಗೆ ಪಾರ್ಕಾವಣೆ ಮಾಡಿ 7.15ಕ್ಕೆ ಸ್ವಾಮಿಗೆ ಧರಿಸಿ ವೈಭವದಿಂದ ಉತ್ಸವ ನೆರವೇರಿಸಲಾಯಿತು. ಚತುರ್ವೀದಿಗಳಲ್ಲಿ ನಡೆದ ಉತ್ಸವ 9 ಗಂಟೆಗೆ ಮುಕ್ತಾಯವಾಯಿತು. ವಿವಿಧ ಸ್ಥಳಗಳಿಂದ ಆಗಮಿಸಿದ್ದ ನೂರಾರು ಭಕ್ತರು ರಾಜಮುಡಿ ಉತ್ಸವ ದರ್ಶನಪಡೆದು ಧನ್ಯತಾಭಾವ ಅನುಭವಿಸಿದರು.ಕಾರ್ತಿಕ ಮಾಸದ ಜಾತ್ರಾಮಹೋತ್ಸವಕ್ಕಾಗಿ ಮೈಸೂರು ಮಹಾರಾಜ ರಾಜಒಡೆಯರ್ ಭಕ್ತಿಪೂರ್ವಕವಾಗಿ ಸಮರ್ಪಿಸಿದ ಸಿಂಹಲಾಂಚನವಿರುವ ಅಪರೂಪದ ವಜ್ರಗಳಿಂದ ಕೂಡಿದ ರಾಜಮುಡಿ ಕಿರೀಟ, ರಾಜಲಾಂಛನ ಗಂಡುಬೇರುಂಡ ಪದಕ, ಹನ್ನೆರಡು ಆಳ್ವಾರುಗಳನ್ನು ಒಳಗೊಂಡ ಪದ್ಮಪೀಠ, ಶಂಕ, ಚಕ್ರ, ಗದೆ, ಶಿರಚ್ಚಕ್ರ, ಅಭಯಹಸ್ತ, ಪಾದಜೋಡಿ ಕರ್ಣಕುಂಡಲ ಸೇರಿದಂತೆ 16 ಬಗೆಯ ವಜ್ರ,ಪಚ್ಚೆ,ರತ್ನ ಮುತ್ತುಗಳಿಂದ ಕೂಡಿದ ಐತಿಹಾಸಿಕ ಆಭರಣಗಳನ್ನುತೊಡಿಸಿ ದಿವ್ಯಪ್ರಬಂಧಪಾರಾಯಣ ಹಾಗೂ ಮಂಗಳವಾದ್ಯದೊಂದಿಗೆ ಉತ್ಸವ ನೆರವೇರಿಸಲಾಯಿತು.
ದೇವಾಲಯದ ಆಡಳಿತಾಧಿಕಾರಿಗಳೂ ಆದ ಉಪವಿಭಾಗಾಧಿಕಾರಿ ಶ್ರೀನಿವಾಸ್ ರಾಜಮುಡಿ ಮತ್ತು ತಿರುವಾಭರಣಗಳನ್ನು ಪರಿಶೀಲಿಸಿ ಸ್ಥಾನೀಕರು ಅರ್ಚಕ ಪರಿಚಾರಕರ ವಶಕ್ಕೆ ನೀಡಿದರು. ಪಾಂಡವಪುರ ತಹಸೀಲ್ದಾರ್ ಸಂತೋಷ್ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲ. ಸ್ಥಾನೀಕರಾದ ಶ್ರೀನಿವಾಸನರಸಿಂಹನ್ ಗುರೂಜಿ, ಕರಗಂ ರಾಮಪ್ರಿಯ ತಿರುನಾರಾಯಣ ಅಯ್ಯಂಗಾರ್ ಸಂಪತ್ಕುಮಾರನ್, ಮುಕುಂದನ್ ಶ್ರೀರಾಮನ್ ಅರ್ಚಕ ವರದರಾಜಭಟ್ಟರ್ ಪರಿಚಾರಕ ಎಂ.ಎನ್ ಪಾರ್ಥಸಾರಥಿ ಮತ್ತಿತರರು ಭಾಗವಹಿಸಿದ್ದರುತಮಿಳುನಾಡು ಸರ್ಕಾರದ ಪರವಾಗಿ ಹಾಜರಾಗಿದ್ದ ಕಾಂಚೀಪುರಂ ವಿಭಾಗದ ಧಾರ್ಮಿಕದತ್ತಿ ಇಲಾಖೆಯ ಜಂಟಿ ಆಯುಕ್ತ ಕುಮಾರ ದೊರೈ ಶ್ರೀಪೆರೆಂಬೂದೂರು ರಾಮಾನುಜರ ದೇಗುಲದ ರಾಜು ಇಲಂ ಪೆರುವಲತಿ ಮತ್ತು ಚಕ್ರಪಾಣಿ ಸೇರಿದಂತೆ ಅಧಿಕಾರಿಗಳು ಭಾಗವಹಿಸಿ ಸರ್ಕಾರದ ಗೌರವಸಮರ್ಪಣೆಮಾಡಿದರು.