ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸಾಲದ ಹಣಕ್ಕೆ ನೀಡಿದ್ದ ಚೆಕ್ ಬೌನ್ಸ್ ಆದ ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ಘೋಷಿಸಿರುವ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಅಪರಾಧಿಗೆ ₹2.10 ಲಕ್ಷ ವಿಧಿಸಿ ತೀರ್ಪು ನೀಡಿದ್ದು, ದಂಡ ಪಾವತಿಸಲು ವಿಫಲವಾದರೆ 6 ತಿಂಗಳ ಸಾದಾ ಕಾರಾಗೃಹವಾಸದ ಶಿಕ್ಷೆ ಅನುಭವಿಸಬೇಕೆಂದು ತಿಳಿಸಿದೆ.

ತಾಳಿಕೋಟೆ ನಿವಾಸಿ ರವಿಚಂದ್ರ ಬಿರಾದಾರ ಅವರ ಪರವಾಗಿ ಎನ್.ಜಿ. ಕುಲಕರ್ಣಿ ವಕೀಲರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ಸಂಗಮೇಶ ಅಲಿಯಾಸ್ ಸಂಗು ದೇಸಾಯಿ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶರಾದ ರಾಮಮೂರ್ತಿ ಎನ್.ಮಹತ್ವದ ತೀರ್ಪು ನೀಡಿದ್ದಾರೆ.

ದೂರಿನ ಪ್ರಕಾರ, ಆರೋಪಿ 2018ರಲ್ಲಿ ₹2 ಲಕ್ಷ ಕೈಸಾಲ ಪಡೆದು, ಮರುಪಾವತಿಗಾಗಿ ನೀಡಿದ್ದ ಚೆಕ್ ಬ್ಯಾಂಕ್‌ನಲ್ಲಿ ಬ್ಯಾಲನ್ಸ್‌ ಇಲ್ಲದ ಕಾರಣದಿಂದ ಅಮಾನ್ಯಗೊಂಡಿತ್ತು. ಬಳಿಕ ನೋಟಿಸ್ ನೀಡಿದರೂ ಹಣ ಪಾವತಿಸದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿತ್ತು.

ವಿಚಾರಣೆ ವೇಳೆ ಆರೋಪಿ ಚೆಕ್ ಕಳುವಾಗಿದೆ. ತಾನು ನೀಡಿಲ್ಲ ಎಂದು ವಾದಿಸಿದರೂ, ಚೆಕ್ ಕಳೆದುಹೋದ ಕುರಿತು ಪೊಲೀಸ್ ಠಾಣೆ, ಬ್ಯಾಂಕ್ ಅಥವಾ ಸಾರ್ವಜನಿಕ ಪ್ರಕಟಣೆ ಮೂಲಕ ಯಾವುದೇ ಕ್ರಮ ಕೈಗೊಂಡಿರದಿರುವುದನ್ನು ನ್ಯಾಯಾಲಯ ಗಮನಿಸಿ, ಆ ವಾದ ತಿರಸ್ಕರಿಸಿತು.


ಜೊತೆಗೆ, ಪರ್ಯಾಪ್ತ ಸಾಕ್ಷ್ಯಾಧಾರಗಳಿಂದ ದೂರುದಾರರ ವಾದವನ್ನು ನ್ಯಾಯಾಲಯ ಅಂಗೀಕರಿಸಿತು.

ಅಂತಿಮವಾಗಿ, ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯ ಕಲಂ 138ರಡಿ ಆರೋಪಿಯನ್ನು ದೋಷಿ ಎಂದು ಘೋಷಿಸಿದ ನ್ಯಾಯಾಲಯ, ₹2,10 ಲಕ್ಷ ದಂಡ ವಿಧಿಸಿದೆ. ಅದರಲ್ಲಿ ₹5 ಸಾವಿರ ಸರ್ಕಾರಕ್ಕೆ ದಂಡವಾಗಿ ಹಾಗೂ ಉಳಿದ ₹2.5 ಲಕ್ಷ ದೂರುದಾರರಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದೆ.