ಸಾರಾಂಶ
ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಹಾಸನಚೆಸ್ ಕ್ರೀಡೆ ಎಂಬುದು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಅನಕೂಲವಾಗಲಿದ್ದು, ಮುಂದಿನ ಭವಿಷ್ಯಕ್ಕೆ ಉತ್ತಮವಾದ ಭದ್ರ ಬುನಾದಿ ಆಗಲಿದೆ ಎಂದು ಎ.ವಿ.ಕೆ. ಪಿಯು ಕಾಲೇಜು ಪ್ರಾಂಶುಪಾಲ ಎಚ್.ಎಸ್.ಚಂದ್ರಶೇಖರ್ ತಿಳಿಸಿದರು.
ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಎ.ವಿ.ಕೆ.ಕಾಲೇಜು ಸಭಾಂಗಣದಲ್ಲಿ ಕದಂಬ ಚೆಸ್ ಅಕಾಡೆಮಿ ಹಾಗೂ ಶಿಕ್ಷಣ ಸಂಸ್ಥೆಯ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯನ್ನು ಚೆಸ್ ಆಟ ಆಡುವುದರ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿ, ‘ಚೆಸ್ ಎಂಬುದು ಮಕ್ಕಳಲ್ಲಿ ಬಲವಾದ ನಂಬಿಕೆ ಮೂಡಿಸುತ್ತದೆ. ರಾಮಾಯಣ ಮತ್ತು ಮಹಾಭಾರತದ ಮೂಲಕ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಅದೇ ರೀತಿ ಚೆಸ್ ಎಂಬುದು ಕೂಡ ಜೀವನದ ಭರವಸೆಯನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಮಕ್ಕಳಲ್ಲಿ ವೈಜ್ಞಾನಿಕ ಆಲೋಚನೆಯನ್ನು ಬೆಳೆಸಲು ಅನುಕೂಲವಾಗಲಿದೆ’ ಎಂದು ಹೇಳಿದರು.‘ಚೆಸ್ ಎಂಬುದು ಮಕ್ಕಳಲ್ಲಿ ಒಳ್ಳೆಯ ಆಲೋಚನೆಗಳನ್ನು ಉದ್ಭವಿಸುತ್ತದೆ. ಈ ಸ್ಪರ್ದಾತ್ಮಕ ಯುಗದಲ್ಲಿ ಚೆಸ್ ಆಟ ಆಡುವುದರಿಂದ ಅನುಕೂಲವಾಗಲಿದೆ. ಪರೀಕ್ಷೆ ಬರೆಯುವ ವೇಗಕ್ಕೆ ಇದು ನಿಮಗೆ ಸಹಕಾರಿ ಆಗಲಿದೆ. ಈ ಆಟವು ಮುಂದಿನ ಜೀವನದ ಸ್ಪೂತಿ ಆಗಬೇಕು. ಕ್ರಿಕೆಟ್ ಆಟಕ್ಕೆ ಪ್ರಾಮುಖ್ಯತೆ ಕೊಟ್ಟಂತೆ ಚೆಸ್ ಆಟಕ್ಕೂ ಪೋಷಕರು ಪ್ರೋತ್ಸಾಹಿಸಬೇಕು. ಆಟದಲ್ಲಿ ಸೋಲು ಗೆಲುವು ಸಾಮಾನ್ಯ. ಗೆದ್ದಾಗ ಬೀಗದೇ, ಸೋತಾಗ ಕುಗ್ಗದೆ ಮುಂದೆ ಸಾಗಬೇಕು’ ಎಂದು ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಉದಾಹರಣೆ ನೀಡಿದರು.
ಹಾಸನ ಜಿಲ್ಲಾ ಚೆಸ್ ಅಸೋಸಿಯೇಶನ್ ಅಧ್ಯಕ್ಷೆ ರಶ್ಮಿ ಕಿರಣ್ ಮಾತನಾಡಿ, ‘ಟಿವಿ, ಮೊಬೈಲ್ ನೋಡಬೇಡ ಎಂದು ಮಕ್ಕಳಿಗೆ ಪೋಷಕರು ಹೇಳುವುದುಂಟು. ಮೊಬೈಲ್ ಬಳಕೆ ಅವಶ್ಯಕತೆ ಇದ್ದರೆ ಉಪಯೋಗಿಸಿ. ಹೆಚ್ಚು ಉಪಯೋಗಿಸಿದರೆ ಅದರಿಂದ ಅಪಾಯ ಕೂಡ ಅಷ್ಟೆ ಇರುತ್ತದೆ. ಆದರೆ ಚೆಸ್ ಆಟೋಟಗಳಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸಿರುವುದರಿಂದ ಅವರ ಬುದ್ದಿ ಚುರುಕುಗೊಳ್ಳುತ್ತದೆ. ಓದುವುದಕ್ಕೆ ಎಷ್ಟು ಮುಖ್ಯವಾಗಿದೆ. ಅದರಂತೆ ಆಟವಾಡುವುದು ಅಷ್ಟ ಮುಖ್ಯವಾಗಿರುತ್ತದೆ’ ಎಂದು ಚೆಸ್ ಆಟಗಾರರಿಗೆ ಇದೇ ವೇಳೆ ಶುಭಾಶಯ ಕೋರಿದರು.ಜನಮಿತ್ರ ಕನ್ನಡ ದಿನಪತ್ರಿಕೆ ಸಂಪಾದಕ ನವೀನ್ ಕುಮಾರ್ ಮಾತನಾಡಿ, ಯಾವುದೇ ಕ್ರೀಡೆ ಆಗಿರಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಜತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅತೀ ಮುಖ್ಯವಾಗಿದೆ ಎಂದು ಹೇಳಿದರು.
ಇದೇ ವೇಳೆ ಕದಂಬ ಚೆಸ್ ಅಕಾಡೆಮಿ ಸಂಸ್ಥಾಪಕ ಎಂ.ಟಿ.ತ್ಯಾಗರಾಜ್, ಹಾಸನ ಜಿಲ್ಲಾ ಚೆಸ್ ಅಸೋಸಿಯೇಶನ್ ಖಜಾಂಚಿ ವಿ.ಜಿ.ಎಂ. ಪ್ರತಾಪ್, ಸದಸ್ಯರಾದ ಆರ್.ರಾಧಾ ಜಗದೀಶ್, ಜಿಲ್ಲಾ ಚೆಸ್ ಅಸೋಸಿಯೇಶನ್ ಸಹ ಕಾರ್ಯದರ್ಶಿ ರಾಧ ಆರ್. ಜಗದೀಶ್, ಉಪಾಧ್ಯಕ್ಷ ಎಂ.ಎನ್.ಹರೀಶ್ ಕುಮಾರ್, ಕದಂಬ ಚೆಸ್ ಅಕಾಡೆಮಿ ಟ್ರೈನರ್ ಕಾವ್ಯ ಚಂದನ್, ಎವಿಕೆ ಕಾಲೇಜಿನ ಸುನೀಲ್ ಕುಮಾರ್ ಇದ್ದರು.