ಸಾರಾಂಶ
ಗದಗ:
ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ದೇಶದ ಶ್ರೇಷ್ಠ ಸ್ವಾಭಿಮಾನಿ, ರಾಷ್ಟ್ರಪ್ರೇಮಿ, ಸಾಹಸಿ, ದಕ್ಷ ಆಡಳಿತಗಾರರಾಗಿದ್ದು, ಧೈರ್ಯದಲ್ಲಿ ಅವರಿಗೆ ಸರಿಸಾಟಿ ಯಾರೂ ಇಲ್ಲ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ತಿಳಿಸಿದರು.ಅವರು ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರುಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ಸೊರಟೂರು ಶಿವಾಜಿ ಮಹಾರಾಜರ ಕುಟುಂಬದ ಮೂಲ ಊರು ಆಗಿದ್ದು ಇದು ಗದಗ ಜಿಲ್ಲೆಗೆ ಹೆಮ್ಮೆ ತರುವ ವಿಷಯವಾಗಿದೆ. ಶಿವಾಜಿ ಮಹಾರಾಜರ ಮೂಲವನ್ನು ತಿಳಿಸಿದ ಸಂಶೋಧಕ ಢೇರೆ ಅವರು ಶಿವಾಜಿಯವರ ಕುರಿತಾಗಿ ಹಲವಾರು ವಿಚಾರಗಳನ್ನು ಬರೆದಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ ವಂಶಸ್ಥರ ಮೂಲ ಸ್ಥಳ ಈಗಿನ ಗದಗ ಜಿಲ್ಲೆಯ ಸೊರಟೂರು, ಇದನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಕನ್ನಡಿಗರೆಲ್ಲರಿಗೂ ಶಿವಾಜಿ ಕರ್ನಾಟಕದವರೆಂದು ಪರಿಚಯಿಸಿದವರು ಹಿರಿಯ ಪತ್ರಕರ್ತ ಸರಜೂ ಕಾಟ್ಕರ್ ಎಂದರು.
ಶಿವಾಜಿ ಮಹಾರಾಜರ ತತ್ವಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಇಂತಹ ಪುಣ್ಯ ಪುರುಷರ ಜಯಂತಿಗಳನ್ನು ಇನ್ನಷ್ಟು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಬೇಕು. ಶಿವಾಜಿಯವರ ಕುರಿತು ಮತ್ತಷ್ಟು ಆಳವಾದ ಸುದೀರ್ಫವಾದ ಚಿಂತನೆ ನಡೆಸುವ ಕೆಲಸವಾಗಬೇಕು. ಶಿವಾಜಿಯವರ ತತ್ವಗಳಿಂದ ಯುವಜನರು ಸ್ವಾಭಿಮಾನ, ಧೈರ್ಯ ಹಾಗೂ ರಾಷ್ಟ್ರಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.ಸರ್ಕಾರ ಆಚರಿಸುವ ಮಹಾನ್ ಪುರುಷರ ಜಯಂತಿ ಆಚರಣೆಗಳ ಉದ್ದೇಶ ವಿಫಲವಾಗದಂತೆ ಜಿಲ್ಲಾಡಳಿತ ಗಮನಹರಿಸಬೇಕು. ಜಯಂತಿಗಳು ಸಂಬಂಧಿಸಿದ ಸಮುದಾಯಕ್ಕಷ್ಟೇ ಸೀಮಿತಗೊಳಿಸದೇ ಸರ್ವರನ್ನೂ ಆಹ್ವಾನಿಸಬೇಕು ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ವಿಪ ಶಾಸಕ ಎಸ್.ವಿ.ಸಂಕನೂರ ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವವು ಬಹಳ ದೊಡ್ಡದಾಗಿದೆ. ಶಿವಾಜಿ ಮಹಾರಾಜರು ಅನ್ಯಾಯದ ವಿರುದ್ಧ ಹೋರಾಟ ಮಾಡಿದ ಧೀಮಂತ ನಾಯಕರು. ತಾಯಿ ಜೀಜಾಬಾಯಿಯವರಿಂದ ಒಳ್ಳೆಯ ಸಂಸ್ಕಾರ ಕಲಿತ ಶಿವಾಜಿ ಮಹಾರಾಜರು ಗುರುಗಳಾದ ಸಂತ ರಾಮದಾಸ್ ಅವರ ಮಾರ್ಗದರ್ಶನದಲ್ಲಿ ಆದರ್ಶ ರಾಜರಾಗಿ ದಕ್ಷತೆಯಿಂದ ಆಡಳಿತ ನಡೆಸಿದರು ಎಂದರು. ನಿವೃತ್ತ ಉಪನ್ಯಾಸಕ ಪ್ರೊ. ಹನುಮಂತ ಕಾಳೆ ಅವರು ಉಪನ್ಯಾಸಕರಾಗಿ ಆಗಮಿಸಿ ಶಿವಾಜಿ ಮಹಾರಾಜರ ಜೀವನ, ಹೋರಾಟ, ರಾಷ್ಟ್ರಪ್ರೇಮ ಕುರಿತು ಸುದೀರ್ಘವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರಾಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಬಿ.ಬಿ.ಅಸೂಟಿ, ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿ.ಪಂ. ಸಿಇಓ ಭರತ್ ಎಸ್, ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಟಾದಿಕಾರಿ ಎಂ.ಬಿ.ಸಂಕದ, ಎಡಿಸಿ ಅನ್ನಪೂರ್ಣ ಎಂ, ಎಸಿ ಗಂಗಪ್ಪ ಎಂ, ಮರಾಠಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅರುಣಕುಮಾರ್ ಚವ್ಹಾಣ, ಉಪಾಧ್ಯಕ್ಷ ಬಸವರಾಜ ಹುಬ್ಬಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜದ ಗಣ್ಯರು ಹಿರಿಯರು ಹಾಜರಿದ್ದರು.
ಡಾ.ವೆಂಕಟೇಶ ಅಲ್ಕೋಡ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ ಸ್ವಾಗತಿಸಿದರು. ಆರ್.ಬಿ.ಚಿನಿವಾಲರ ನಿರೂಪಿಸಿದರು.