ಮನೆ, ಕಾರಿನಲ್ಲಿ ದಾಸ್ತಾನು ಮಾಡಿದ್ದ ಗಾಂಜಾ ವಶಕ್ಕೆ

| Published : Dec 12 2024, 12:30 AM IST

ಸಾರಾಂಶ

ವರ್ಷದಿಂದ ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕಿನಲ್ಲಿ ಹೆಚ್ಚಾಗಿ ಗಾಂಜಾ ಮಾರಾಟ ಜಾಲ ದೊಡ್ಡದಾಗಿ ಬೆಳದಿತ್ತು,

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ವಾರದಿಂದ ಹೊಂಚು ಹಾಕಿ ಕಾದು ಕೊನೆಗೂ ಮನೆ ಮತ್ತು ಕಾರಿನಲ್ಲಿ ಮೂಟೆಯಲ್ಲಿ ದಾಸ್ತಾನು ಮಾಡಿದ್ದ ಗಾಂಜಾ ಹಾಗೂ ಓರ್ವ ವ್ಯಕ್ತಿಯನ್ನು ಕೆ.ಆರ್. ನಗರ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.ಭೇರ್ಯ ಸಮೀಪದ ಚಿಕ್ಕ ಭೇರ್ಯ ಗ್ರಾಮದಲ್ಲಿ ದಾಸ್ತಾನು ಇಟ್ಟಿದ ಕಾರು, ಒರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದ್ದು, ಕೆ.ಆರ್. ಪೇಟೆ ತಾಲೂಕಿನ ರಜಿಕ್ ಪಾಷ ಬಂಧಿತ ಆರೋಪಿ.ವರ್ಷದಿಂದ ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕಿನಲ್ಲಿ ಹೆಚ್ಚಾಗಿ ಗಾಂಜಾ ಮಾರಾಟ ಜಾಲ ದೊಡ್ಡದಾಗಿ ಬೆಳದಿತ್ತು, ಆದರೆ ಗಾಂಜಾ ಮಾರಾಟ ತಡೆಗಟ್ಟಲು ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳಲ್ಲಿ ನಿರಾಸಕ್ತಿ ಇದ್ದರಿಂದ ಲೀಲಾಜಾಲವಾಗಿ ಎಲ್ಲೆಂದರಲ್ಲಿ ಯುವಕರ ಕೈಯಲ್ಲಿ ದೊರೆಯುವಂತೆ ಗಾಂಜಾ ಮಾರಾಟಗಾರರು ಯಶಸ್ವಿಯಾಗಿದ್ದರು. ಇತ್ತೀಚಿಗೆ ಅಬಕಾರಿ ಇಲಾಖೆಗೆ ಇನ್ಸ್ ಪೆಕ್ಟರ್ ಆಗಿ ಬಂದ ವೈ.ಎಸ್. ಲೋಕೇಶ್ ಕಳೆದ ಒಂದು ತಿಂಗಳಿಂದ ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕುಗಳಲ್ಲಿ ಗಸ್ತು ತಿರುಗಿ ಮಾಹಿತಿ ಪಡೆದು ಗಾಂಜಾ ಸರಬರಾಜಾಗುವ ಮೂಲ ಆಧರಿಸಿ ಮೊದಲಿಗೆ ಕೆ.ಆರ್. ನಗರ ಪಟ್ಟಣದ ಬಸ್ ಡಿಪೋ ಪಕ್ಕದ ರಸ್ತೆಯ ಪೊದೆಯಲ್ಲಿ ಬೆಳದಿದ್ದ 150 ಗ್ರಾಂ ತೂಕದ ಗಾಂಜಾ ಗಿಡ ವಶಪಡಿಸಿಕೊಂಡಿದ್ದಾರೆ.ಇದರ ಜತೆಗೆ ಡಿ. 9 ರ ರಾತ್ರಿ ಪಟ್ಟಣದ ಮಧುವನಹಳ್ಳಿ ರಸ್ತೆಯ ಟಿ. ಮರಿಯಪ್ಪ ಕಾಲೇಜು ಮುಂಬಾಗ ರಾತ್ರಿ 8.30ರ ಸಮಯದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿ ಬಂದ ಮೇರೆಗೆ ದಾಳಿ ಮಾಡಿ ಒಂದು ದ್ವಿಚಕ್ರ ವಾಹನ ಹಾಗೂ 52 ಗ್ರಾಂ ಬೀಜ ಮಿಶ್ರಿತ ಒಣ ಗಾಂಜಾ ಜಪ್ತಿ ಮಾಡಿ ಫಹಾದ್ ಮತ್ತು ಜಿಬ್ರಾನ್ ಎಂಬ ಆರೋಪಿಗಳನ್ನು ಬಂದಿಸಿ ಅವರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ.ದೊಡ್ಡ ಜಾಲದ ಬಗ್ಗೆ ಮಾಹಿತಿ ಭೇರ್ಯ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಗೆ ಕೆ.ಆರ್.ಪೇಟೆ ಕಡೆಯಿಂದ ಗಾಂಜಾ ಮಾರಾಟ ಮಾಡುವ ವ್ಯಕ್ತಿಗಳು ಬರುತ್ತಾರೆ ಎಂಬ ಖಚಿತ ಮಾಹಿತಿ ಪಡೆದು ವಾರದಿಂದ ಈ ಭಾಗದಲ್ಲಿ ಸಿಬ್ಬಂದಿಗಳ ಜೊತೆ ಮಫ್ತಿಯಲ್ಲಿ ಸುತ್ತಿ ಭೇರ್ಯ ಸಮೀಪದ ಚಿಕ್ಕ ಭೇರ್ಯ ಗ್ರಾಮದ ಮಸೀದಿ ಹಿಂಭಾಗದಲ್ಲಿರುವ ಜಬೀವುಲ್ಲಾ ಎಂಬವವರಿಗೆ ಸೇರಿದ ವಾಸದ ಮನೆಯಲ್ಲಿ ಮತ್ತು ಮನೆಯ ಮುಂಭಾಗದಲ್ಲಿರುವ ಸ್ಯಾಂಟ್ರೋ ಕಾರಿನ ಮೇಲೆ ದಾಳಿ ನಡೆಸಿ ಶೋಧನೆ ನಡೆಸಲಾಗಿ ಒಟ್ಟು 8.658 ಕೆ.ಜಿ ಬೀಜ ಮಿಶ್ರಿತ ಒಣ ಗಾಂಜಾವನ್ನು ಅಕ್ರಮವಾಗಿ ಮಾರಾಟದ ಉದ್ದೇಶದಿಂದ ದಾಸ್ತಾನಿಟ್ಟಿರುವುದನ್ನು ಪತ್ತೆ ಮಾಡಿ ಮಾಲನ್ನು ವಶ ಪಡಿಸಿಕೊಂಡಿದ್ದಾರೆ.ಚಿಕ್ಕಭೇರ್ಯ ಗ್ರಾಮದ ಜಬೀವುಲ್ಲಾ ಪರಾರಿಯಾಗಿದ್ದು, ರಜಿಕ್ ಪಾಷ ಹಾಗೂ ಪರಾರಿಯಾದ ಜಬೀವುಲ್ಲಾ ಎಂಬವವರ ವಿರುದ್ಧ ಎನ್.ಡಿ.ಪಿ.ಎಸ್. ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ

ಜಿಲ್ಲಾ ಅಬಕಾರಿ ಆಯುಕ್ತೆ ಡಾ. ಮಹಾದೇವಿ ಬಾಯಿ ಹಾಗೂ ಹುಣಸೂರು ಉಪ ವಿಭಾಗದ ಅಧೀಕ್ಷಕ ಎಂ.ಡಿ. ಮೋಹನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ದೊರೆತ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ಅಬಕಾರಿ ಮುಖ್ಯಪೇದೆ ಎಸ್. ಮಲ್ಲೇಶ ಮತ್ತು ಅಬಕಾರಿ ಪೇದೆಗಳಾದ ಎಂ.ಎಸ್. ಪುಟ್ಟಸ್ವಾಮಿಗೌಡ, ಶಿವಪ್ಪ ಮಾಳಪ್ಪಭಾನುಸಿ, ಬಿ.ಎನ್. ಸಂದೀಪ ಮತ್ತು ವಾಹನ ಚಾಲಕ ಕೆ. ಮಹದೇವ ಭಾಗವಹಿಸಿದ್ದರು.