ಮಂಜುಳಾ ರೇವಡಿ, ಶಾಂತಾಬಾಯಿ ಹಿರೇಮಠ ಪಾಟೀಲ, ನಿರ್ಮಲಾ ತರವಾಡೆ, ಮಂಜುಳಾ ವೆಂಕಟೇಶಯ್ಯ ಸೇರಿದಂತೆ ಐವರು ಸಾಧಕರಿಗೆ ಅನರ್ಘ್ಯ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗದಗ: ಇಂದಿನ ಮಕ್ಕಳೆ ನಾಳಿನ ಪ್ರಜೆಗಳು. ಉತ್ತಮ ಸಂಸ್ಕಾರ ಪಡೆದ ಮಗು ಸರ್ವಕಾಲಕ್ಕೂ ಶ್ರೇಷ್ಠ ವ್ಯಕ್ತಿಯಾಗುತ್ತಾನೆ. ಹೆತ್ತವರು ಮಕ್ಕಳಿಗೆ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಉತ್ತಮ ಶಿಕ್ಷಣ ನೀಡಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ತಿಳಿಸಿದರು.
ನಗರದ ಈಶ್ವರ ದೇವಸ್ಥಾನದ ಸಭಾಭವನದಲ್ಲಿ ಎಸ್.ಎಸ್. ಆಡಿನ ಜನಸೇವಾ ಸಂಸ್ಥೆಯ ವತಿಯಿಂದ ನಡೆದ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ, ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಕನ್ನಡ ಕುವರ - ಕನ್ನಡ ಕುವರಿ ರಾಜ್ಯ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಅನರ್ಘ್ಯ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಮತ್ತು ದುಶ್ಚಟಗಳ ಕಡೆ ಹೆಚ್ಚು ಆಕರ್ಷಿತರಾಗುತ್ತಿರುವುದು ಕಳವಳಕಾರಿ ಸಂಗತಿ. ಪಾಲಕರು ಮಕ್ಕಳ ಶಿಕ್ಷಣದ ಜತೆಗೆ ಅವರ ನಡೆ- ನುಡಿ, ಸ್ನೇಹ ಬಳಗ ಹಾಗೂ ಅಭ್ಯಾಸಗಳ ಮೇಲೂ ಗಮನಹರಿಸಬೇಕು. ಶಿಕ್ಷಕರು ಮತ್ತು ಪಾಲಕರು ಒಟ್ಟಾಗಿ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದರು.
ಎಸ್.ಎನ್. ಬಳ್ಳಾರಿ ಮಾತನಾಡಿ, ಎಸ್.ಎಸ್. ಆಡಿನ ಜನಸೇವಾ ಸಂಸ್ಥೆ ಕೇವಲ ಒಂದು ವರ್ಷದ ಅವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ. ಸಮಾಜಮುಖಿ ಕಾರ್ಯಗಳ ಮೂಲಕ ಸಂಸ್ಥೆ ಜನಮನ ಗೆದ್ದಿದೆ ಎಂದರು.ಬಸವರಾಜ ಎಂ. ಕಡೆಮನಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಶೋಭಾ ಎಸ್. ಆಡಿನ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮಂಜುಳಾ ರೇವಡಿ, ಶಾಂತಾಬಾಯಿ ಹಿರೇಮಠ ಪಾಟೀಲ, ನಿರ್ಮಲಾ ತರವಾಡೆ, ಮಂಜುಳಾ ವೆಂಕಟೇಶಯ್ಯ ಸೇರಿದಂತೆ ಐವರು ಸಾಧಕರಿಗೆ ಅನರ್ಘ್ಯ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಿಡಿಪಿಐ ಆರ್.ಎಸ್. ಬುರಡಿ, ಅಶೋಕ ಮಂದಾಲಿ, ಆನಂದ ಸಿಂಗಾಡಿ, ವಿ.ವಿ. ನಡವಿನಮನಿ, ಮಲ್ಲಿಕಾರ್ಜುನ ಸಂತೋಜಿ, ಶರೀಫ ಬಿಳೇಯಲಿ, ಎಸ್.ಕೆ. ಆಡಿನ, ಯಮನೂರಪ್ಪ ಆಡಿನ, ಪರಸಪ್ಪ ತಳವಾರ, ಮಂಜುನಾಥ ವಾಲ್ಮೀಕಿ, ಮಹಾಂತೇಶ ಮಲ್ಲಾರಿ, ಎಸ್.ಎನ್. ಯಲಿಗಾರ ಸೇರಿದಂತೆ ಹಲವರು ಇದ್ದರು.