ಕನ್ನಡಪ್ರಭ ವಾರ್ತೆ ಸೊರಬ

ಗ್ರಾಮೀಣ ಭಾಗದ ಮಕ್ಕಳಲ್ಲಿ ಅದ್ಭುತವಾದ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ ಹೊರಚಿಮ್ಮಲು ಮಕ್ಕಳ ಕಲರವ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಿದೆ ಎಂದು ಕಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಣ್ಣಪ್ಪ ಕೊಂಡ್ಲೇರ್ ಹೇಳಿದರು.

ತಾಲೂಕಿನ ಕಮರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮಕ್ಕಳ ಕಲರವ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಶಿಕ್ಷಕರು ತೋರುತ್ತಿರುವ ಅಪಾರ ಕ್ರಿಯಾಶೀಲ ಮತ್ತು ಬೋಧನಾ ವೈಖರಿಯನ್ನು ಮೆಚ್ಚಿಯೇ ಇಂದು ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು, ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ಕಮರೂರು ಸರ್ಕಾರಿ ಶಾಲೆಗೆ ದಾಖಲಿಸುತ್ತಿದ್ದಾರೆ. ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಂಕಗಳಿಕೆಯಷ್ಟೇ ಮುಖ್ಯವಲ್ಲ, ಶ್ರೇಷ್ಠ ಮಟ್ಟದ ಸಂಸ್ಕಾರಯುತ ಶಿಕ್ಷಣ ನೀಡುವುದು ಮಕ್ಕಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿದೆ. ಶಿಕ್ಷಕರು ಮತ್ತು ಪೋಷಕರ ನಡುವಿನ ಈ ಸಮನ್ವಯತೆಯೇ ಶಾಲೆಯ ಅಭಿವೃದ್ಧಿಗೆ ಮೂಲ ಶಕ್ತಿ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಪಂ ಅಧ್ಯಕ್ಷೆ ಯಶೋಧ ಅಣ್ಣಪ್ಪ ನೆರವೇರಿಸಿದರು. ಗ್ರಾಪಂ ಉಪಾಧ್ಯಕ್ಷ ಮಂಜುನಾಥ್ ನಾಯ್ಕ ಶಾಲೆಯ ಶೈಕ್ಷಣಿಕ ಮಹತ್ವದ ಕುರಿತು ಮಾತನಾಡಿದರು.


ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ.ಕೆ. ದೇವರಾಜ್ ಮಾತನಾಡಿ, ಹಳ್ಳಿಗಳ ಸರ್ಕಾರಿ ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳು ಅರ್ಥಪೂರ್ಣವಾಗಿವೆ. ಕೇವಲ ಓದುವ ಕಡೆಗೆ ಮಾತ್ರ ಗಮನ ಹರಿಸದೇ ಸಾಹಿತ್ಯ, ಕಲೆ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳನ್ನು ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಇಂತಹ ವೇದಿಕೆಗಳು ಸಹಕಾರಿಯಾಗಿವೆ. ಶಾಲೆಗಳಲ್ಲಿ ಆಯೋಜಿಸುವಂತಹ ವೇದಿಕೆಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ ಎಂದರು.

ಶಾಲಾ ಮಕ್ಕಳು ನಡೆಸಿಕೊಟ್ಟ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು ಗ್ರಾಮಸ್ಥರ ಮನಸೂರೆಗೊಂಡವು. ಅದರಲ್ಲೂ ವಿದ್ಯಾರ್ಥಿ ನಿಖಿಲ್ ಪ್ರಸಾದ್‌ಅವರುಕಾಂತಾರಚಿತ್ರದದೈವ ಸ್ವರೂಪದ ಪಾತ್ರವನ್ನು ಪ್ರದರ್ಶಿಸಿದ್ದು ಅಮೋಘವಾಗಿತ್ತುಇನ್ನುಆಪರೇಷನ್ ಸಿಂಧೂರದ ಚಿತ್ರಣವನ್ನು ನೃತ್ಯದ ಮೂಲಕ ಮಕ್ಕಳು ಪ್ರದರ್ಶಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಮುಖಂಡರಾದ ಚಂದ್ರು ನಾಯ್ಕ ಭದ್ರಾಪುರ, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಆಶಾ ಗಣೇಶ್‌ ಪ್ರಸಾದ್, ಗ್ರಾಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಣ್ಣಪ್ಪ, ಉಪಾಧ್ಯಕ್ಷ ಪರಶುರಾಮ್ ಬೋವಿ, ಶಾಲಾ ಮುಖ್ಯ ಶಿಕ್ಷಕ ವಾಸುದೇವ್ , ಗ್ರಾಪಂ ಸದಸ್ಯ ಎಂ.ಕೆ. ದೇವರಾಜ್, ಪ್ರಮುಖರಾದ ಚಂದ್ರು ನಾಯ್ಕ, ವಿಷ್ಣು ಆರ್.ನಾಯ್ಕ, ನಾಗೇಶ್ ಕಮರೂರು, ಸಣ್ಣಪ್ಪ ಶಿಕ್ಷಕರು, ಈಶ್ವರಪ್ಪ ಬೋವಿ, ಮಲ್ಕೇಶಪ್ಪ ಮಡಿವಾಳ, ಕುಮಾವತಿ ಹಂಚಿನ ಮನೆ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಸೇರಿದಂತೆ ಶಾಲಾ ಶಿಕ್ಷಕರಾದ ಗಣೇಶ್‌ಪ್ರಸಾದ್, ನಾಮದೇವ್ ನಾಯ್ಕ, ಸಿ.ಅಕ್ಷಯ್‌ಕುಮಾರ್, ಶ್ರೀಕೃಷ್ಣ, ವಿಜಯಲಕ್ಷ್ಮಿ, ಶಶಿಕಾಂತ್, ಅಣ್ಣಪ್ಪ, ಪೂರ್ಣಿಮಾ, ಕಾವ್ಯ, ಉಷಾ ಇತರರು ಹಾಜರಿದ್ದರು.