ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ವಂದೇ ಮಾತರಂ, ಮೇರೆ ದೇಶಕಿ ಧರತಿ, ಮೇರೆ ದೇಶಕೆ ವೀರ ಜವಾನೋ ಸೇರಿದಂತೆ ದೇಶಭಕ್ತಿ ಹೆಚ್ಚಿಸುವ ವಿವಿಧ ಶಾಲಾ ಮಕ್ಕಳ ನೃತ್ಯ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವೈಭವ ಹಾಗೂ ವರ್ಣರಂಜಿತವಾಗಿ ನಡೆದವು.

ನಗರದ ನವಚೈತನ್ಯ ಶಾಲೆ, ಹುಕ್ಕೇರಿಮಠ ಪ್ರೌಢಶಾಲೆ, ಮುನ್ಸಿಪಲ್ ಹೈಸ್ಕೂಲ್, ಲಯನ್ಸ್ ಪ್ರೌಢಶಾಲೆ ಹಾಗೂ ಕೆಎಲ್‌ಇ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ ವಂದೇ ಮಾತರಂ, ಮೇರೆ ದೇಶಕಿ ಧರತಿ, ಮೇರೆ ದೇಶಕೆ ವೀರ ಜವಾನೋ ಸೇರಿದಂತೆ ದೇಶದ ಕಲೆ, ಸಂಸ್ಕೃತಿ, ದೇಶಭಕ್ತಿ ಬಿಂಬಿಸುವ ನೃತ್ಯಪ್ರದರ್ಶನಗಳು ಎಲ್ಲರ ಗಮನ ಸೆಳೆದವು. ವಿದ್ಯಾರ್ಥಿಗಳು ಅತ್ಯಂತ ಹುರುಪಿನಿಂದ ನೃತ್ಯ ಪ್ರದರ್ಶಿಸುವ ಮೂಲಕ ರಾಷ್ಟ್ರಾಭಿಮಾನ ಮೂಡಿಸಿದರು. ನೆರೆದಿದ್ದ ಜನ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೊನೆಯತನಕ ಕುಳಿತು ವೀಕ್ಷಿಸಿದ ಸಚಿವ ರುದ್ರಪ್ಪ ಲಮಾಣಿ, ನೃತ್ಯದ ನಂತರ ಬಹುಮಾನ ವಿತರಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.

27 ಸಾಧಕರಿಗೆ ಸನ್ಮಾನ: ಪೊಲೀಸ್ ಇಲಾಖೆಯ ಎಸ್‌ಪಿ ಯಶೋದಾ ವಂಟಿಗೋಡಿ, ಆನಂದ ದೊಡ್ಡಕುರುಬರ, ಎಚ್.ಎಂ.ಗಾಜಿಗೌಡ್ರ, ಶಿಕ್ಷಣ ಇಲಾಖೆಯ ಡಿಡಿಪಿಐ ಮೋಹನ ದಂಡಿನ, ಡಯೆಟ್ ಪ್ರಾಚಾರ್ಯ ಝಡ್.ಎಂ. ಖಾಜಿ, ಕರಕುಶಲ ಕ್ಷೇತ್ರದ ಸಿದ್ದಪ್ಪ ಬಾರಂಗಿ, ಪರಮೇಶ್ವರ ಬಂಡಿ, ಮಂಜುನಾಥ ಪಂಚಾನನ, ಸಾಹಿತ್ಯ ಕ್ಷೇತ್ರದ ವಿರೂಪಾಕ್ಷಪ್ಪ ಕೋರಗಲ್ಲ, ಹ್ಯಾಂಡ್‌ಬಾಲ್ ಕ್ರೀಡಾಪಟು ಸೌಮ್ಯ ಖೋಡೆ, ಕರಾಟೆಪಟು ರೇವಂತ್ ಉಜನಿ, ಕ್ರೀಡಾ ಕ್ಷೇತ್ರದ ವೀರನಗೌಡ ಮರಿಗೌಡರ, ಯೋಗ ಕ್ಷೇತ್ರದ ಗೌರಿ ಹಿರೇಮಠ, ಅನಂತಪದ್ಮನಾಭ ಬಿ, ಸೇನಾ ಕ್ಷೇತ್ರದ ನಿಶೀಮಪ್ಪ ಹನಕನಹಳ್ಳಿ, ಸಮಾಜ ಸೇವಾ ಕ್ಷೇತ್ರದ ಹನುಮಂತಪ್ಪ ಕಬ್ಬಾರ, ಮಂಜುನಾಥ ಓಲೇಕಾರ, ಡಾ. ಮಹಾಂತೇಶ ಹುಚ್ಚಣ್ಣನವರ, ಎನ್.ಎನ್. ಗಾಳೆಮ್ಮನವರ, ಮಂಜುನಾಥಪಾಟೀಲ, ಗೃಹ ರಕ್ಷಕ ಕ್ಷೇತ್ರದ ಸಿ.ಎಸ್. ಬೆಲ್ಲದ, ನಾಟಕ ಕ್ಷೇತ್ರದ ರಾಮನಗೌಡ ಪಾಟೀಲ, ಬಸವರಾಜ ಹರಿಹರದ, ನೃತ್ಯ ಕ್ಷೇತ್ರದ ಪಿ.ಆರ್. ಗೌತಮಿ, ಜನಪದ ಕ್ಷೇತ್ರದ ಗಂಗಾಧರ ಗದಿಗೆಪ್ಪ ಶೆಟ್ಟರ, ಮಂಜುನಾಥ ಮಿರ್ಜಿ, ವಿಜ್ಞಾನ ಕ್ಷೇತ್ರದ ದ್ರುವ ಸುರೇಶ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಗೆ ಸನ್ಮಾನ: ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ಕನ್ನಡ, ಆಂಗ್ಲ ಹಾಗೂ ಉರ್ದು ಮಾಧ್ಯಮದ ತಲಾ ಮೂರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅದೇ ರೀತಿ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಆಕರ್ಷಕ ಪಥಸಂಚಲನ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪರೇಡ ಕಮಾಂಡರ ಮಹದೇವ ಅಥಣಿ ಅವರ ನೇತೃತ್ವದಲ್ಲಿ ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್, ಅಗ್ನಿಶಾಮಕ ದಳ, ಅಬಕಾರಿ, ಅರಣ್ಯ, ಗೃಹರಕ್ಷಕದಳ, ಎನ್‌ಸಿಸಿ, ಸ್ಕೌಟ್ಸ್‌ ಆಂಡ್ ಗೈಡ್ಸ್ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು ಸೇರಿದಂತೆ 14 ತಂಡಗಳಿಂದ ಜರುಗಿದ ಶಿಸ್ತುಬದ್ಧ ಪಥಸಂಚಲನ ಎಲ್ಲರ ಗಮನ ಸೆಳೆಯಿತು. ಇದಕ್ಕೂ ಮುನ್ನ ಸಚಿವರು ಅಲಂಕೃತ ವಾಹನದಲ್ಲಿ ಪಥಸಂಚಲನ ನಡೆಸಿದರು. ಪೊಲೀಸ್ ಹಾಗೂ ಕೆಎಸ್‌ಆರ್‌ಟಿಸಿ ವಾದ್ಯ ತಂಡ ಅತ್ಯಂತ ಸುಮಧುರವಾಗಿ ವಾದ್ಯ ನುಡಿಸಿತು. ಇದೇ ಸಂದರ್ಭದಲ್ಲಿ ಪಥಸಂಚಲನದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿಜೇತ ಹಿರಿಯ ಹಾಗೂ ಕಿರಿಯ ತಂಡಗಳಿಗೆ ಬಹುಮಾನ ವಿತರಿಸಿದರು.