ಕುಕನೂರು: ಮಕ್ಕಳಿಗೆ ಧರ್ಮ ಜಾಗೃತಿ ನೀಡಿ, ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಸಿದ್ದಯ್ಯ ಕಳ್ಳಿಮಠ ಹೇಳಿದರು.

ಪಟ್ಟಣದ ಆದಿ ಜಗದ್ಗುರು ರೇಣುಕಾಚಾರ್ಯ ವೃತ್ತದಲ್ಲಿ ಸಮಾಜದಿಂದ ಜರುಗಿದ ಜಗದ್ಗುರು ರೇಣುಕಾಚಾರ್ಯ ಜಯಂತಿಯಲ್ಲಿ ರೇಣುಕರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನೆರವೇರಿಸಿ ಮಾತನಾಡಿ, ಮಹನೀಯರ ಜಯಂತಿ ಕೇವಲ ಕಾಟಾಚಾರಕ್ಕೆ ಆಚರಿಸದೇ ಪ್ರತಿಯೊಂದು ಸಮುದಾಯದವರನ್ನು ಕರೆದುಕೊಂಡು ಮಹನೀಯರ ಜಯಂತಿ ಆಚರಿಸಬೇಕು. ಮಹನೀಯರ ಆದರ್ಶ ಪಾಲಿಸುವ ಮೂಲಕ ಪ್ರತಿಯೊಬ್ಬರು ಲಿಂಗ ಧರಿಸಿಕೊಂಡು ರೇಣುಕರ ಜಯಂತಿ ಆಚರಿಸಲು ಮುಂದಾಗಬೇಕು. ಇದರಿಂದ ಮುಂದಿನ ಪೀಳಿಗೆಗೆ ಆಚಾರ, ವಿಚಾರ,ಸಂಸ್ಕಾರ ನೀಡಿದಂತಾಗುತ್ತದೆ ಎಂದರು.

ಮುಖಂಡ ಮಂಜುನಾಥ ನಾಡಗೌಡ ಮಾತನಾಡಿ, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಸಂದೇಶ ಸಾರಿದ ರೇಣುಕರ ವಾಣಿಯಂತೆ ಅವರ ತತ್ವಾದರ್ಶ ಅಳವಡಿಸಿಕೊಂಡು ಪ್ರತಿಯೊಬ್ಬ ಮಾನವ ಬದುಕು ಸಾಗಿಸಬೇಕು ಎಂದರು.

ಮುಖಂಡ ಶಿವಕುಮಾರ ನಾಗಲಾಪೂಮಠ ಮಾತನಾಡಿ, ಎಲ್ಲ ಧರ್ಮಗಳಲ್ಲಿನ ವಿಶ್ವ ಮಾನವರ ಜಯಂತಿ ಆಚರಣೆ ಮಾಡುವುದರಿಂದ ಅವರು ಜಗತ್ತಿಗೆ ನೀಡಿದ ತತ್ವಾದರ್ಶ ಸಂದೇಶ ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ಧರ್ಮ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ ಜತೆಗೆ ಸಮಾನತೆಯ ಬಗ್ಗೆ ಸಾರಿದ ದಾರ್ಶನಿಕರ ಆದರ್ಶ ತತ್ವಗಳಡಿಯಲ್ಲಿ ಜೀವನ ಸಾಗಿಸಬೇಕು ಎಂದು ಹೇಳಿದರು.

ಹಿರಿಯ ಚನ್ನಬಸಯ್ಯ ಓಲಿ ಮಾತನಾಡಿ, ಆದಿ ಜಗದ್ಗುರು ರೇಣುಕರು ನೀಡಿರುವ ಸಂದೇಶ ಪ್ರತಿಯೊಬ್ಬರು ಅಳವಡಿಸಿಕೊಂಡು, ಅರಿತು ನಡೆಯಬೇಕು ಎಂದರು.


ಸಮಾಜದ ಮುಖಂಡ ಮಲ್ಲಯ್ಯ ಹತ್ಲಗೇರಿಮಠ, ವೀರಯ್ಯ ದೇವಗಣಮಠ, ಸಿದ್ದಲಿಂಗಯ್ಯ ಬಂಡಿ, ಮಹೇಶ ಕಲ್ಮಠ, ಈಶಯ್ಯ ಶಿರೂರಮಠ, ಮಂಜುನಾಥ ಗೊರ್ಲೆಕೊಪ್ಪ, ಶರಣಯ್ಯ ಸಸಿಮಠ, ಪಂಚಯ್ಯ ಹಿರೇಮಠ, ವೀರಯ್ಯ ಪೂಜಾರ, ಹರೀಶ ಹಿರೇಮಠ, ಶರಣಯ್ಯ ಹುಣಸಿಮರದ, ಚನ್ನಬಸಯ್ಯ ಹುಣಸಿಮರದ, ಶಶಿ ಓಲಿ, ವಿರುಪಾಕ್ಷಯ್ಯ ಬಂಡಿ, ಸಂಗಯ್ಯ ಬಂಡಿ, ಶರಣಪ್ಪ ಪೋಲಿಸ್ ಚಿಕೇನಕೊಪ್ಪ ಇತರರು ಇದ್ದರು.