ಮಕ್ಕಳಿಗೆ ಸಂಸ್ಕಾರ, ಮೌಲ್ಯಗಳನ್ನು ಕಲಿಸಬೇಕು

| Published : Feb 10 2025, 01:49 AM IST

ಸಾರಾಂಶ

ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತವೆ. ಹಾಗಾಗಿ ಉತ್ತಮ ನಡತೆ, ಆಚಾರ, ವಿಚಾರ ಮುಂತಾದ ಸಂಗತಿಗಳು ಸಿಗುವ ಹಾಗೆ ನೋಡಿಕೊಳ್ಳಬೇಕು. ಬಾಲ್ಯದಲ್ಲಿ ಕಲಿತದ್ದು ಕಟ್ಟಡಕ್ಕೆ ಅಡಿಪಾಯದಂತೆ ಜೀವನದಲ್ಲಿ ಭವಿಷ್ಯಕ್ಕೆ ನೆರವಾಗುತ್ತದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರ, ಮೌಲ್ಯಗಳನ್ನು ಕಲಿಸಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹಿರಿಯರನ್ನು ಗೌರವಿಸುವ, ಕಲಿಯುವ, ತಿಳಿಯುವ ಗುಣ ಮಕ್ಕಳಿಗೆ ಕಲಿಸಿ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರೊಂದಿಗೆ ಓದಲು ಒಳ್ಳೆಯ ವಾತಾವರಣವನ್ನು ಮನೆಯಲ್ಲಿ ಸೃಷ್ಟಿಸಿಕೊಡಬೇಕು ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಕಾರ್ಯದರ್ಶಿ ಶ್ರೀ ಮಂಗಳನಾಥ ಸ್ವಾಮೀಜಿ ಹೇಳಿದರು.

ನಗರ ಹೊರ ವಲಯದ ಬಿಜಿಎಸ್ ವರ್ಲ್ಡ್ ಸ್ಕೂಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತಾ-ಪಿತೃ ವಂದನಾ ಕಾರ್ಯಕ್ರಮ ಹಾಗೂ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮನೆಯಲ್ಲೇ ಕಲಿಕೆ ಹೆಚ್ಚು

ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತವೆ. ಹಾಗಾಗಿ ಉತ್ತಮ ನಡತೆ, ಆಚಾರ, ವಿಚಾರ ಮುಂತಾದ ಸಂಗತಿಗಳು ಸಿಗುವ ಹಾಗೆ ನೋಡಿಕೊಳ್ಳಬೇಕು. ಬಾಲ್ಯದಲ್ಲಿ ಕಲಿತದ್ದು ಕಟ್ಟಡಕ್ಕೆ ಅಡಿಪಾಯದಂತೆ ಜೀವನದಲ್ಲಿ ಭವಿಷ್ಯಕ್ಕೆ ನೆರವಾಗುತ್ತದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರ, ಮೌಲ್ಯಗಳನ್ನು ಕಲಿಸಬೇಕು. ಮನೆಯಲ್ಲಿ ಟಿವಿ ಮತ್ತು ಮೊಬೈಲ್ ಗಳು ಮಕ್ಕಳಿಗೆ ಜ್ಞಾನಾರ್ಜನೆಗೆ ಪೂರಕವಾಗಿರಲಿ. ಅವರು ದಾರಿತಪ್ಪುವಷ್ಟು ಅದನ್ನು ನೋಡದಿರಲಿ ಎಂದು ತಿಳಿಹೇಳಿದರು.

ನಾವು ತಂದೆ ತಾಯಿಗೆ ಪೂಜ್ಯ ಸ್ಥಾನವನ್ನು ನೀಡಿದ್ದೇವೆ. ಅವರೇ ನಮ್ಮ ಮಾರ್ಗದರ್ಶಕರು. ಹಾಗೆಯೇ ಪೋಷಕರು ಸಹ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಹನೆಯನ್ನು ಕಲಿಸಬೇಕು.ವೃದ್ಧಾಪ್ಯದಲ್ಲಿ ಮಕ್ಕಳು ತಂದೆ-ತಾಯಿಯರನ್ನು ಪ್ರೀತಿಯಿಂದ ನೋಡಿ, ಅವರ ಬದುಕಿಗೆ ಆಸರೆಯಾಗಬೇಕು.''''''''ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ಪೋಷಕರಿಗೆ ಪಾದಪೂಜೆ ನೆರವೇರಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ ನಮ್ಮ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿಕ್ಷಣ ಸಂಸ್ಥೆಗಳ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಈ ಅದೃಷ್ಟ ದೊರೆತಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇದೊಂದು ಜೀವನದ ತಿರುವಿನ ಅಂಶವಾಗಿದೆ ಎಂದರು.

ತಂದೆ ತಾಯಿಯನ್ನು ಗೌರವಿಸಿ

ಬಿಜಿಎಸ್ ವಿದ್ಯಾಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿಗಳಾದ ಡಾ. ಎನ್ ಶಿವರಾಮರೆಡ್ದಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿ, ನಿತ್ಯವೂ ನೀವು ದೇವರನ್ನು ಕಾಣಲಾರಿರಿ. ನಿಮ್ಮಮುಂದೆ ಕಾಣುವ ಪ್ರತ್ಯಕ್ಷ ದೇವರೆಂದರೆ ತಂದೆ-ತಾಯಿಗಳು. ನೀವು ಅವರ ಮಾತನ್ನು ಪಾಲಿಸಿರಿ,ಮಕ್ಕಳು ತಪ್ಪು ಮಾಡುವುದು ಸಹಜ. ಭಾರತೀಯ ಸಂಸ್ಕೃತಿಯಲ್ಲಿ ತಂದೆ-ತಾಯಿಗಳ ಪಾದಕ್ಕೆ ನಮಸ್ಕರಿಸಿ, ಕ್ಷಮೆ ಕೋರುವುದು ವಿಭಿನ್ನವಾಗಿದೆ. ಮಕ್ಕಳು ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು, ಚೆನ್ನಾಗಿ ಓದಿ ಹೆಚ್ಚು ಅಂಕಗಳನ್ನು ಗಳಿಸಬೇಕೆಂಬುದು ಪ್ರತಿಯೊಬ್ಬ ತಂದೆ-ತಾಯಿಯರ ಆಸೆಯಾಗಿರುತ್ತದೆ ಎಂದರು.

ಮಕ್ಕಳು ಸಂಸ್ಕಾರವಂತರಾಗಿ ಪೋಷಕರ ಆಸೆಯನ್ನು ನೇರವೇರಿಸಬೇಕು.10ನೇ ತರಗತಿಯ ನಂತರದ ಎರಡು ವರ್ಷಗಳು ಬಹಳ ಮುಖ್ಯ ತಂದೆ ತಾಯಿಯರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಮಕ್ಕಳಿಗೆ ನೀವು ತಂದೆ ತಾಯಿಯರಿಗೆ ಒಳ್ಳೆಯ ಹೆಸರು ತರಬೇಕು, ಸಮಾಜದಲ್ಲಿ ಅವರು ತಲೆತಗ್ಗಿಸುವ ಕೆಲಸ ಎಂದು ಮಾಡಬಾರದು. ಎಲ್ಲಾರೂ ಚೆನ್ನಾಗಿ ಓದಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆನೀಡಿದರು.

ಮಾತಾಪಿತೃಗಳ ಪಾದಪೂಜೆ

ವಿದ್ಯಾರ್ಥಿಗಳು ಸಾಮೂಹಿಕವಾಗಿ ತಮ್ಮ ತಂದೆ- ತಾಯಿಗಳ ಪಾದಗಳನ್ನು ತೊಳೆದು ಅರಿಶಿನ-ಕುಂಕುಮ ಹಚ್ಚಿ, ಪುಷ್ಪಾರ್ಚನೆ‌ ಮಾಡಿ ಪಾದ ಪೂಜೆ ಮಾಡಿದರು. ಮೂಲಕ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಓದಿದ ಶಾಲೆಗೆ ಕೀರ್ತಿ, ಗುರುಗಳಿಗೆ ಗೌರವ ತಂದೆ- ತಾಯಿಯ ಕನಸ್ಸನ್ನು ನನಸು‌ ಮಾಡುತ್ತೇವೆಂದು ಸಂಕಲ್ಪ ತೊಟ್ಟರು. ಈ ಕಾರ್ಯಕ್ರಮದಲ್ಲಿ ಬಿಜಿಎಸ್ ವರ್ಲ್ಡ್ ಸ್ಕೂಲ್ ನ ಪ್ರಾಂಶುಪಾಲೆ ದೀಪಿಕಾ ಶರ್ಮಾ,ಬಿಜಿಎಸ್ ವಿದ್ಯಾ ಸಂಸ್ಥೆಗಳ ವಿವಿಧ ಮುಖೋಪಾಧ್ಯಾಯರುಗಳು, ಭೋಧಕ, ಬೋಧಕೇತರ ಸಿಬ್ಬಂಧಿ,ಪೋಷಕರು ವಿದ್ಯಾರ್ಥಿಗಳ ಇದ್ದರು.