ಎಂ. ಪ್ರಹ್ಲಾದ್ ಕನಕಗಿರಿ

ಸ್ವಂತ ಹಣದಿಂದ ತಾವೇ ಓದುವ ಕೊಠಡಿಗಳಿಗೆ ಬಣ್ಣ ಹಚ್ಚಿ ಶಾಲೆಯ ಅಂದ ಹೆಚ್ಚಿಸುವ ಕೆಲಸ ಮಾಡಿರುವ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿಗಳ ಸತ್ಕಾರ್ಯಕ್ಕೆ ತಾಲೂಕಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ 10ನೇ ತರಗತಿಯಲ್ಲಿ ಓದುತ್ತಿರುವ 342 ಮಕ್ಕಳ ಪೈಕಿ 245 ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಬರುತ್ತಿದ್ದು, ಇವರೆಲ್ಲರೂ ಸೇರಿಕೊಂಡು ತಮ್ಮ ಶಾಲಾ ಕೊಠಡಿಗಳಿಗೆ ಸ್ವ-ಇಚ್ಛೆಯಿಂದ ಬಣ್ಣ ಹಚ್ಚಿದ್ದಾರೆ. ಈ ಬಣ್ಣ ಹಚ್ಚುವ ಕಾರ್ಯಕ್ಕಾಗಿ ಪ್ರತಿ ವಿದ್ಯಾರ್ಥಿ ತಮ್ಮ ಪಾಲಕರು, ಪೋಷಕರ ಬಳಿ ₹100 ಸಂಗ್ರಹಿಸಿದ್ದಾರೆ. ಒಟ್ಟೂ ₹20 ಸಾವಿರ ಸಂಗ್ರಹವಾಯಿತು. ಆದರೆ ಈ ಹಣ ಬಣ್ಣ ಹಚ್ಚಲು ಸಾಲುವುದಿಲ್ಲ ಎಂಬುದು ಮನವರಿಕೆಯಾಯಿತು. ಹೀಗಾಗಿ ಬಣ್ಣ ಹಚ್ಚಲು ಕಾರ್ಮಿಕರನ್ನು ನೇಮಿಸುವ ಬದಲು ತಾವೇ ಬಣ್ಣ ಹಚ್ಚಿದರು.

ಎಸ್ಎಸ್ಎಲ್‌ಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶಾಲೆಯಿಂದ ಹೊರ ಹೋಗುವಾಗ "ಶಾಲೆಗಾಗಿ ನಾವು " ಎನ್ನುವ ಧ್ಯೇಯದಡಿ ಒಂದಲ್ಲ ಒಂದು ರೀತಿಯಲ್ಲಿ ಸೇವಾ ಕಾರ್ಯ ಮಾಡುವ ರೂಢಿ ಈ ಶಾಲೆಯಲ್ಲಿದೆ. ಎರಡು ವರ್ಷಗಳ ಹಿಂದೆ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶಾಲೆಗಾಗಿ ಸ್ಕ್ರೀನ್, ಮ್ಯಾಟ್, ಮೈಕ್ ಸೆಟ್ ಹಾಗೂ ಶಾಮಿಯಾನ ನೀಡಿದ್ದರು. ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ.

ನಮ್ಮ ಶಾಲೆಯ ಕೊಠಡಿಗಳಿಗೆ ಹಲವು ವರ್ಷಗಳಿಂದ ಬಣ್ಣ ಹಚ್ಚಿರಲಿಲ್ಲ. ಹೀಗಾಗಿ ನಾವೆಲ್ಲರೂ ಸೇರಿ ಚರ್ಚಿಸಿ ಸಂಗ್ರಹಿಸಿದ ಹಣದಲ್ಲಿ ಬಣ್ಣ ಹಚ್ಚಬೇಕೆನ್ನುವ ನಿರ್ಧಾರ ಮಾಡಿದೆವು. ಕಾರ್ಮಿಕರಿಗೆ ಕೂಲಿ ಹಣ ನೀಡಲು ನಮ್ಮ ಬಳಿ ಹಣ ಇರಲಿಲ್ಲ. ಹೀಗಾಗಿ ನಾವೇ ಬಣ್ಣ ಹಚ್ಚಿದ್ದೇವೆ ಎಂದು ವಿದ್ಯಾರ್ಥಿ ಪಾಮಣ್ಣ ಪಾಲಿ ತಿಳಿಸಿದ್ದಾರೆ.


ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ತಾವೇ ಹಣ ಸಂಗ್ರಹಿಸಿ ಸ್ವ-ಇಚ್ಛೆಯಿಂದ ಶಾಲೆಗೆ ಬಣ್ಣ ಹಚ್ಚಿದ್ದಾರೆ. ಶಾಲೆಯ ಉದ್ದಾರಕ್ಕೆ ನಮ್ಮದು ಅಳಿಲು ಸೇವೆ ಇರಲಿ ಎನ್ನುವ ಪರಿಕಲ್ಪನೆಯೊಂದಿಗೆ ಮಕ್ಕಳು ಋಣ ತೀರಿಸುವ ಸತ್ಕಾರ್ಯ ಮಾಡಿರುವುದು ಶಾಲಾ ಆಡಳಿತ ಮಂಡಳಿಗೆ ಖುಷಿ ತಂದಿದೆ ಎಂದು ಮುಖ್ಯಶಿಕ್ಷಕ ಜಗದೀಶ ಹಾದಿಮನಿ ತಿಳಿಸಿದ್ದಾರೆ.