ಕನ್ನಡಪ್ರಭ ವಾರ್ತೆ ಮಂಡ್ಯ

ಇಂದಿನ ಮಕ್ಕಳಿಗೆ, ಯುವ ಜನರಿಗೆ ಮಹಾ ಕಾವ್ಯಗಳ ಕುರಿತು ಅರಿವಿಗಾಗಿ ಗಮಕದ ಮೂಲಕ ಜಾಗೃತಿ ಮೂಡಿಸಬೇಕು ಎಂದು ಗಮಕಿ ವಿ.ಸುಜಾತಾ ಕೃಷ್ಣ ಅಭಿಪ್ರಾಯಿಸಿದರು.

ಶಂಕರ ನಗರದ ಶ್ರೀ ವಿದ್ಯಾಗಣಪತಿ ದೇವಸ್ಥಾನದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಮಂಡ್ಯ ಜಿಲ್ಲಾ ಗಮಕ ಕಲಾ ಪರಿಷತ್ ಘಟಕ, ಕನ್ನಡ ಸಂಸ್ಕೃತಿ ಇಲಾಖೆ, ದೇವಸ್ಥಾನ ಟ್ರಸ್ಟ್ ನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಗಮಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆದಿಕವಿ ವಾಲ್ಮೀಕಿಯಿಂದ ಆರಂಭವಾದ ಗಮಕ ಕಲೆ ಭಾರತೀಯ ಸಂಸ್ಕೃತಿಯ ಅಸ್ಮಿತೆಯಾಗಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪೋಷಕರು, ಶಿಕ್ಷಕರು ಹಾಗೂ ಪ್ರತಿಯೊಬ್ಬ ನಾಗರಿಕರದ್ದಾಗಿದೆ. ಹೀಗಾಗಿ ಬಾಲ್ಯದಿಂದಲೇ ಮಕ್ಕಳಿಗೆ ಕಾವ್ಯ ವಾಚನ ಮತ್ತು ಕಲೆಗಳ ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸಬೇಕಿದೆ ಎಂದರು.

ಮೊಬೈಲ್ ಸೇರಿದಂತೆ ಅತ್ಯಾಧುನಿಕ ಡಿಜಿಟಲ್ ಪಿಡುಗಿನಿಂದ ಹೊರ ಬರಲು ಸಮಾಜಮುಖಿಯಾಗಿ ಮಕ್ಕಳನ್ನು ವಿದ್ಯಾರ್ಥಿ ಹಾಗೂ ಯುವ ಜನರನ್ನು ತೊಡಗಿಸಿಕೊಳ್ಳಲು ಗಮಕ, ಕಾವ್ಯಗಳ ಅರಿವು, ಕಲೆಗಳ ಮಹತ್ವ ಪರಿಚಯಿಸುವಿಕೆ ಅತ್ಯಂತ ಅಗತ್ಯ. ಸಂಗೀತ, ಗಮಕ ಲಲಿತ ಕಲೆಗಳು ಮನುಷ್ಯನ ಭಾವನೆಗಳನ್ನು ಅರಳಿಸಿ ದೇಶಕ್ಕೆ ಉತ್ತಮ ಕೊಡುಗೆಗಳನ್ನಾಗಿ ರೂಪಿಸುತ್ತದೆ ಎಂದು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ವಿದ್ಯಾಗಣಪತಿ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷ ಶಿವಲಿಂಗೇಗೌಡ, ಕಾರ್ಯದರ್ಶಿ ಕೃಷ್ಣಮೂರ್ತಿ ಟ್ರಸ್ಟ್ ನ ಸದಸ್ಯ ಬಸವರಾಜ್ ಕಲಾಶ್ರೀ ಗಮಕಿ ವಿದ್ಯಾಶಂಕರ್ ಉಪಸ್ಥಿತರಿದ್ದರು.

ಯುವ ಗಮಕಿ ರಮೇಶ್ ಬಡಿಗೇರ್ ಕುಮಾರವ್ಯಾಸ ಭಾರತದ ಕರ್ಣ ಭೇದನ ಕಾವ್ಯ ಭಾಗವನ್ನು ವಾಚಿಸಿದರು. ಗಮಕಿ ಡಾ. ಎಸ್. ಶ್ರೀನಿವಾಸ ಶೆಟ್ಟಿ ವಿದ್ವತ್ ಪೂರ್ಣ ವ್ಯಾಖ್ಯಾನ ದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಗಮಕ ಪರಿಷತ್ ನ ಜಿಲ್ಲಾ ಪ್ರತಿನಿಧಿ ಕಲಾಶ್ರೀ ವಿದ್ಯಾಶಂಕರ್ ಎಲ್ಲರನ್ನು ಸ್ವಾಗತಿಸಿದರು.