ಸಾರಾಂಶ
ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ನಡೆಸಿಕೊಂಡು ಬಂದಿರುವ, ಈ ಬಾರಿ 18ನೇ ವರ್ಷದ ಚಿಟ್ಟಾಣಿ ಯಕ್ಷಗಾನ ಸಪ್ತಾಹವು ಕೃಷ್ಣಮಠದ ರಾಜಾಂಗಂದಲ್ಲಿ ಉದ್ಘಾಟನೆಗೊಂಡಿತು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ನಡೆಸಿಕೊಂಡು ಬಂದಿರುವ, ಈ ಬಾರಿ 18ನೇ ವರ್ಷದ ಚಿಟ್ಟಾಣಿ ಯಕ್ಷಗಾನ ಸಪ್ತಾಹವು ಕೃಷ್ಣಮಠದ ರಾಜಾಂಗಂದಲ್ಲಿ ಉದ್ಘಾಟನೆಗೊಂಡಿತು. ಸಪ್ತಾಹ ಉದ್ಘಾಟಿಸಿದ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಂದೇಶ ನೀಡುತ್ತಾ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಯಕ್ಷಗಾನದ ಪೂರ್ವ ಪ್ರತಿಭೆ, ಅವರ ಸಂಸ್ಮರಣೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಕಿರಿಯ ಕಲಾವಿದರಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ದಿವ್ಯಸಾನಿಧ್ಯ ವಹಿಸಿದ್ದರು. ಅಭಿಮಾನಿ ಬಳಗದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಧರ್ಮಸ್ಥಳ ಶಾಂತಿವನ ಟ್ರಸ್ಟ್ನ ಅಧ್ಯಕ್ಷ ಸೀತಾರಾಮ ತೋಳ್ಪಡಿತ್ತಾಯ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಚಿಟ್ಟಾಣಿ ಕುಟುಂಬದ ಕಾರ್ತಿಕ ಚಿಟ್ಟಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂ. ಗೋಪಿಕೃಷ್ಣ ರಾವ್ ಸ್ವಾಮೀಜಿಯವರಿಗೆ ಫಲವಸ್ತು ಸಮರ್ಪಿಸಿದರು. ಮುರಲಿ ಕಡೆಕಾರ್ ಸಂಯೋಜಿಸಿದ ಕಾರ್ಯಕ್ರಮವನ್ನು ನಾರಾಯಣ ಎಂ. ಹೆಗಡೆ ನಿರೂಪಿಸಿದರು. ಮೊದಲ ಪ್ರದರ್ಶನವಾಗಿ ಕವಿ ಗಣೇಶ ಕೊಲೆಕಾಡಿ ಅವರ ‘ಸಮರ ಸೌಗಂಧಿಕಾ’ ಪ್ರಸ್ತುತಗೊಂಡಿತು.