ಏಸುಕ್ರಿಸ್ತನ ಸಂದೇಶಗಳು ಸಾರ್ವಕಾಲಿಕ: ಡಾ.ಕೋಡಿ ರಂಗಪ್ಪ

| Published : Dec 26 2024, 01:02 AM IST

ಸಾರಾಂಶ

ಜಗತ್ತಿನಲ್ಲಿ ಅತಿ ಹೆಚ್ಚು ಜನರು ಮತ್ತು ದೇಶಗಳು ಆಚರಿಸಲ್ಪಡುವ ಕ್ರೈಸ್ತ ಧರ್ಮ ಮತ್ತು ಕ್ರಿಶ್ಚಿಯನ್ ಮಿಷನರಿಗಳು ನೊಂದವರು ಮತ್ತು ಅಶಕ್ತರ ಬಗ್ಗೆ ಕಾಳಜಿ ಹೊಂದಿದ್ದು, ಎಲ್ಲ ದೇಶಗಳಲ್ಲಿಯೂ ಸಾಮೂಹಿಕ ಪ್ರಾರ್ಥನೆಗೆ ಚರ್ಚ್ ಗಳು, ಶಾಲೆಗಳು ಹಾಗೂ ಆಸ್ಪತ್ರೆಗಳನ್ನು ನಿರ್ಮಿಸಿ ಮನುಕುಲದ ಸೇವೆಗಾಗಿ ರಚನಾತ್ಮಕ ಕಾರ್ಯಗಳನ್ನು ನಡೆಸುತ್ತಿವೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕ್ರೈಸ್ತ ಧರ್ಮ ಸ್ಥಾಪಕ ಏಸುಕ್ರಿಸ್ತನ ಸಂದೇಶಗಳು ಸರ್ವಕಾಲಿಕ ಮಾನ್ಯತೆ ಹೊಂದಿವೆ ಎಂದು ಶಾಂತಾ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಕೋಡಿ ರಂಗಪ್ಪ ಅಭಿಪ್ರಾಯಪಟ್ಟರು.

ತಾಲೂಕಿನ ಪೆರೇಸಂದ್ರದ ಶಾಂತಾ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಏಸುಕ್ರಿಸ್ತ ಜಯಂತಿಯ ಮಕ್ಕಳ ಕಾರ್ಯಕ್ರಮದಲ್ಲಿ ಮಾತನಾಡಿ, ಎರಡು ಸಾವಿರ ವರ್ಷಗಳ ಹಿಂದೆ ಏಸುಕ್ರಿಸ್ತರು ಬೋಧಿಸಿದ ಸರಳತೆ , ಸಂಯಮ, ಮಾನವೀಯತೆ, ಕ್ಷಮಾಗುಣ, ಕಾರುಣ್ಯ ಹಾಗೂ ಸೇವೆ ಮುಂತಾದ ಸಂದೇಶಗಳು ಸಾರ್ವಕಾಲಿಕ ಯೋಗ್ಯವಾಗಿದ್ದು ಪ್ರತಿಯೊಬ್ಬರೂ ಈ ಮೌಲ್ಯಗಳನ್ನು ಪಾಲಿಸುವುದರಿಂದ ಜಗತ್ತು ಸೋದರತ್ವ,ಶಾಂತಿ ಮತ್ತು ನೆಮ್ಮದಿಯನ್ನು ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.

ಜಗತ್ತಿನಲ್ಲಿ ಅತಿ ಹೆಚ್ಚು ಜನರು ಮತ್ತು ದೇಶಗಳು ಆಚರಿಸಲ್ಪಡುವ ಕ್ರೈಸ್ತ ಧರ್ಮ ಮತ್ತು ಕ್ರಿಶ್ಚಿಯನ್ ಮಿಷನರಿಗಳು ನೊಂದವರು ಮತ್ತು ಅಶಕ್ತರ ಬಗ್ಗೆ ಕಾಳಜಿ ಹೊಂದಿದ್ದು, ಎಲ್ಲ ದೇಶಗಳಲ್ಲಿಯೂ ಸಾಮೂಹಿಕ ಪ್ರಾರ್ಥನೆಗೆ ಚರ್ಚ್ ಗಳು, ಶಾಲೆಗಳು ಹಾಗೂ ಆಸ್ಪತ್ರೆಗಳನ್ನು ನಿರ್ಮಿಸಿ ಮನುಕುಲದ ಸೇವೆಗಾಗಿ ರಚನಾತ್ಮಕ ಕಾರ್ಯಗಳನ್ನು ನಡೆಸುತ್ತಿವೆ ಎಂದರು.

ನಮ್ಮ ದೇಶವು ಸರ್ವಧರ್ಮಗಳನ್ನು ಗೌರವಿಸುವ ಹಾಗೂ ಧರ್ಮಗಳ ನಡುವೆ ಸಹೋದರತ್ವವನ್ನು ಬೆಳೆಸುವ ಆಶಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ನಾವೆಲ್ಲರೂ ಎಲ್ಲ ಧರ್ಮಗಳನ್ನು ಗೌರವಿಸಬೇಕು ಹಾಗೂ ಎಲ್ಲ ಧರ್ಮಗಳ ಮಾನವೀಯ ಸಂದೇಶಗಳನ್ನು ಪಾಲಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಏಸುಕ್ರಿಸ್ತರ ಪ್ರಾರ್ಥನೆಗಳು ಹಾಗೂ ಪುಟಾಣಿ ಮಕ್ಕಳ ನೃತ್ಯಗಳು ಗಮನ ಸೆಳೆದವು.

ಶಾಂತಾ ಸಂಸ್ಥೆ ಪ್ರಾಂಶುಪಾಲ ಡಾ. ನವೀನ್ ಸೈಮನ್, ಡಾ. ಗೋಪಿನಾಥ್, ಶರವಣ, ಅಂಬಿಕಾ ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಇದ್ದರು.