ಕ್ರಿಶ್ಚಿಯನ್ ಶಾಲೆಗಳು ದಸರಾ ರಜೆ ಕಡಿತಗೊಳಿಸಿದರೆ ಹೋರಾಟ

| Published : Sep 19 2025, 01:00 AM IST

ಸಾರಾಂಶ

ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗುರುವಾರ ಚಿತ್ರದುರ್ಗದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕ್ರಿಶ್ಚಿಯನ್ ಶಾಲೆಗಳು ದಸರೆ ರಜೆ ಕಡಿತಗೊಳಿಸಿ ಕ್ರಿಸ್ ಮಸ್ ಗೆ ಒಟ್ಟಗೂಡಿಸಿದರೆ ಉಗ್ರ ಹೋರಾಟ ಮಾಡಲಾಗುವುದೆಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ವರ್ಷವೂ ದಸರಾ ಹಬ್ಬಕ್ಕಾಗಿ ಸರ್ಕಾರ ಶಾಲೆಗಳಿಗೆ ರಜೆ ಘೋಷಿಸುತ್ತದೆ. ಕ್ರಿಶ್ಚಿಯನ್ ಶಾಲೆಯವರು ಹಬ್ಬದ ರಜೆಗಳನ್ನು ಕಡಿತಗೊಳಿಸಿ ಕ್ರಿಸ್‍ಮಸ್ ಹಬ್ಬಕ್ಕೆ ನೀಡುತ್ತ ಹಿಂದೂ ಧಾರ್ಮಿಕ ಹಬ್ಬಗಳ ಮೇಲೆ ದಬ್ಬಾಳಿಕೆ ಮಾಡುತ್ತಿವೆ. ಇಂತಹ ನಡೆಯ ನಾವು ಸಹಿಸುವುದಿಲ್ಲ. ಕ್ರಿಶ್ಚಿಯನ್ ಶಾಲೆಗಳ ಗೇಟ್‍ಗಳಿಗೆ ಬೀಗ ಹಾಕುತ್ತೇವೆಂದರು.

ದಸರಾ ಹಬ್ಬದ ರಜೆಯನ್ನು ಕ್ರಿಶ್ಚಿಯನ್ ಕಾನ್ವೆಂಟ್‍ಗಳು ಮೊಟಕುಗೊಳಿಸಿ ಮಕ್ಕಳಿಗೆ ಪಾಠ ಹೇಳುವುದರ ಜೊತೆ ಪರೀಕ್ಷೆಗಳನ್ನು ಘೋಷಿಸುತ್ತವೆ. ಶೇ.90 ರಷ್ಟು ಹಿಂದೂ ವಿದ್ಯಾರ್ಥಿಗಳು ಕ್ರಿಶ್ಚಿಯನ್ ಕಾನ್ವೆಂಟ್‍ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಕರು, ಸಿಬ್ಬಂದಿಗಳು ಕೂಡ ಹಿಂದೂಗಳಿದ್ದಾರೆ. ದಸರಾ ಇನ್ನಿತರೆ ಹಬ್ಬಗಳನ್ನು ಹಿಂದೂಗಳು ಶಾಸ್ತ್ರೋಕ್ತ ವೈಜ್ಞಾನಿಕವಾಗಿ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಸಾಮರಸ್ಯ ಮೂಡಿಸುವ ಹಬ್ಬಗಳನ್ನು ಕ್ರಿಶ್ಚಿಯನ್ನರು ಹತ್ತಿಕ್ಕಲು ನಾವುಗಳು ಬಿಡುವುದಿಲ್ಲ. ಈ ಸಂಬಂಧ ಶಿಕ್ಷಣ ಮಂತ್ರಿಗಳಿಗೆ, ಇಲಾಖೆಯ ಉಪ ನಿರ್ದೇಶಕರುಗಳಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆಂದು ಹೇಳಿದರು.

ಹಿಂದೂಗಳನ್ನು ನೇರವಾಗಿ ಮತಾಂತರಗೊಳಿಸದಿದ್ದರೂ ಮಾನಸಿಕ ಹಾಗೂ ಸಾಂಸ್ಕೃತಿಕವಾಗಿ ಕ್ರಿಶ್ಚಿಯನ್ ಶಾಲೆಗಳಲ್ಲಿ ಮತಾಂತರವಾಗುತ್ತಿದೆ. ಬಸವಣ್ಣ, ಗಾಂಧಿ, ಅಂಬೇಡ್ಕರ್ ಫೋಟೋಗಳನ್ನು ಶಾಲೆಯಲ್ಲಿಡಬೇಕು. ಯಾವ ಕ್ರಿಶ್ಚಿಯನ್ ಶಾಲೆಗಳಲ್ಲಿಯೂ ಈ ಮೂವರು ಮಹನೀಯರ ಫೋಟೋಗಳಿಲ್ಲ. ರಾಜ್ಯೋತ್ಸವ ಕೂಡ ಆಚರಣೆ ಮಾಡಲ್ಲ. ಹಾಗಾಗಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ ಎಂದರು.

ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಮೆರವಣಿಗೆ ಯಾವುದೇ ತೊಂದರೆಯಿಲ್ಲದೆ ಸುಸೂತ್ರವಾಗಿ ಮುಗಿಯಿತು. ಡಿಜೆ ವಾಹನ ಮಾಲೀಕರುಗಳ ವಿರುದ್ದ ಕೇಸ್ ಹಾಕಿರುವುದನ್ನು ಪ್ರಶ್ನಿಸಿದರೆ ಸುಪ್ರೀಂಕೋರ್ಟ್ ಮಾರ್ಗಸೂಚಿಯನ್ನು ಉಲ್ಲಂಘಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಉತ್ತರ ನೀಡುತ್ತಿದ್ದಾರೆ. ದಿನಕ್ಕೆ ಐದು ಬಾರಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುವುದರಿಂದ ಶಬ್ಬ ಬರುವುದಿಲ್ಲವೇ. ಹಿಂದೂಗಳಿಗೊಂದು, ಮುಸಲ್ಮಾನರಿಗೊಂದು ಕಾನೂನು ಇದೆಯಾ ಎಂದು ಮುತಾಲಿಕ್ ಪ್ರಶ್ನಿಸಿದರು.

ಮಸೀದಿಗಳ ಮೇಲೆ ಸುಮೋಟೋ ಕೇಸು ದಾಖಲಿಸಿ ಬೆಳಗಿನ ಜಾವ 4-30 ಕ್ಕೆ ಅಲ್ಲಾ ಕೂಗುವುದನ್ನು ನಿಲ್ಲಿಸಬೇಕು. ಹಿಂದೂಗಳ ಮೇಲೆ ದಬಾವಣೆ ಸರಿಯಲ್ಲ. ಚಿತ್ರದುರ್ಗದ ಗೋನೂರು ಸಮೀಪ ದಲಿತ ವಿದ್ಯಾರ್ಥಿನಿಯ ಹತ್ಯೆಯಾಗಿರುವುದನ್ನು ಖಂಡಿಸುತ್ತೇನೆ. ಕಾಮುಕರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಶ್ರೀರಾಮಸೇನೆ ದಕ್ಷಿಣ ಪ್ರಾಂತ ರಾಜ್ಯಾಧ್ಯಕ್ಷ ಸೈಟ್‍ಬಾಬಣ್ಣ, ಸುಂದರೇಶ್ ನಾಡಗಲ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.