ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಾಂಡವಪುರ ಪುರಸಭೆ ಫೈನಾನ್ಸ್ ಕಂಪನಿಯಾಗಿದೆ. ಪ್ರತಿಯೊಂದು ಕೆಲಸಕ್ಕೂ ಲಂಚ ಕೊಡಬೇಕಿದೆ ಎಂದು ಆರೋಪಿಸಿ ಸಾರ್ವಜನಿಕರು ಕಚೇರಿ ಮುಂಭಾಗ ಅಡುಗೆ ತಯಾರಿಸಿ ಪಟ್ಟಣದ ನಾಗರಿಕರು ಗುರುವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಡಾ.ರಾಜ್ಕುಮಾರ್ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ಪುರಸಭೆ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಲಂಚ ಕೊಡದೆ ಯಾವುದೇ ಕೆಲಸ ಆಗುತ್ತಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಪುರಸಭೆ ಉಳಿಸುವಂತೆ ಘೋಷಣೆ ಕೂಗಿದರು.
ಕಚೇರಿಯಲ್ಲಿ ಅಕ್ರಮ ಖಾತೆ ಮಾಡಲಾಗುತ್ತಿದೆ. ಪುರಸಭೆ ಆಸ್ತಿ ಅನ್ಯರ ಪಾಲಾಗುತ್ತಿದ್ದರೂ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪುರಸಭೆ ಉಳಿಸಿಕೊಳ್ಳಬೇಕಾದರೆ ಮುಖ್ಯಾಧಿಕಾರಿ ಹಠಾವೋ, ಪುರಸಭೆ ಬಚಾವೋ ಎಂಬ ಹೋರಾಟ ಅನಿವಾರ್ಯ ಎಚ್ಚರಿಸಿದರು.ಪುರಸಭೆ ಮಾಜಿ ಅಧ್ಯಕ್ಷ ಜಗದೀಶ್ ಮಾತನಾಡಿ, ಅಧಿಕಾರಿಗಳು ಪುರಸಭೆ ಆಸ್ತಿ ಉಳಿಸಿಕೊಳ್ಳುವ ಕೆಲಸ ಮಾಡುತ್ತಿಲ್ಲ. ನಿರ್ಮಲ ಕಾನ್ವೆಂಟ್ ಪಕ್ಕ ನಿವೇಶನ ಪುರಸಭೆಗೆ ಸೇರಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಈ ಹಿಂದೆಯೇ ತೀರ್ಪು ನೀಡಿದ್ದರು ಕೋಟ್ಯಾಂತರ ಬೆಲೆ ಬಾಳುವ ಆಸ್ತಿ ಉಳಿಸಿಕೊಳ್ಳುತ್ತಿಲ್ಲ ಎಂದು ದೂರಿದರು.
ಭ್ರಷ್ಟಚಾರದಲ್ಲಿ ತೊಡಗಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ಎಸ್ಐಟಿ, ಲೋಕಾಯುಕ್ತ, ಸಿಒಡಿ ಅಥವಾ ಇನ್ಯಾವುದೇ ಸಂಸ್ಥೆ ಮೂಲಕ ಉನ್ನತ ಮಟ್ಟದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಪುರಸಭೆ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಬರಬಹುದು, ಹೋಗಬಹುದು ಆದರೆ ಭಷ್ಟಚಾರ ಮುಂದೆ ನಡೆಯದಂತೆ ತಪ್ಪಿಸಲು ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನಿನಡಿಯಲ್ಲಿ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.ಬಿಜೆಪಿ ರೈತಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ಮಾತನಾಡಿ, ಗಣಪತಿ ಮಾರಾಟಕ್ಕೆ ಇಟ್ಟಿದ್ದ ಗೋದಾಮಿನ ಮೇಲೆ ದಾಳಿ ನಡೆಸಿದ ಪುರಸಭೆ ಮುಖ್ಯಾಧಿಕಾರಿಗಳು ಅದಕ್ಕೆ ದಂಡ ವಿಧಿಸಿದ ನಂತರವೂ ತಮ್ಮ ಅಧಿಕಾರಿಗಳು ಮೂಲಕ ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು ದೂರಿದರು.
ಯುಜಿಡಿ ಸಮಸ್ಯೆ, ಕಸ ವಿಲೇವಾರಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಚೇರಿ ಪ್ರತಿಯೊಂದು ಕೆಲಸಕ್ಕೂ ಸಾರ್ವಜನಿಕರು ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಹಠಾವೋ, ಪಾಂಡವಪುರ ಬಜಾವೋ ಧ್ಯೇಯದೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಮೇಲಾಧಿಕಾರಿಗಳು ಕ್ರಮದ ಭರವಸೆ ನೀಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹೊನ್ನಗಿರಿಗೌಡ, ಹಿರೇಮರಳಿ ದೊರೆಸ್ವಾಮಿ, ಶ್ರೀನಿವಾಸ್, ವಿಷ್ಣುವಿಠಲ, ಬಿರೇಶೆಟ್ಟಹಳ್ಳಿ ಬಾಲಗಂಗಾಧರ, ಹಿರೋಡೆ ಬೀದಿ ಕೇಶವ, ಶ್ರೀನಿವಾಸ ನಾಯಕ, ವಿ.ಸಿ ಕಾಲನಿ ಆನಂದ ಇತರರು ಇದ್ದರು.