ಕೊಪ್ಪಳ: ಸೈಬರ್ ಸುರಕ್ಷತೆ ಪೊಲೀಸರ ಜವಾಬ್ದಾರಿ ಮಾತ್ರವಲ್ಲ. ಪ್ರತಿಯೊಬ್ಬ ನಾಗರಿಕ ಮತ್ತು ಅಧಿಕಾರಿ, ಸಿಬ್ಬಂದಿ ಜಾಗೃತರಾಗಬೇಕು. ಡಿಜಿಟಲ್ ಜಗತ್ತಿನಲ್ಲಿ ತಡೆ,ಯೋಚನೆ, ನಂತರ ಕ್ರಮ ಎಂಬ ನೀತಿ ಅನುಸರಿಸಿದರೆ ಮೋಸದಿಂದ ತಪ್ಪಿಸಿಕೊಳ್ಳಬಹುದು ಎಂದು ಜಿಲ್ಲಾ ಸೈಬರ್ ಕ್ರೆಂ ಡಿವೈ.ಎಸ್.ಪಿ ಸಿದ್ದಲಿಂಗನಗೌಡ ಪಾಟೀಲ ಹೇಳಿದರು.

ಮಂಗಳವಾರ ಜಿಲ್ಲಾಡಳಿತ,ಜಿಪಂ, ಪೊಲೀಸ್ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಕೊಪ್ಪಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಸುರಕ್ಷಿತ ಅಂತರ್ಜಾಲ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.

ಆನ್‌ಲೈನ್ ಬ್ಯಾಂಕಿಂಗ್, ಯುಪಿಐ ಪಾವತಿ, ಸಾಮಾಜಿಕ ಜಾಲತಾಣ ಮತ್ತು ಇ-ಕಾಮರ್ಸ್ ಬಳಕೆ ಹೆಚ್ಚಿದಂತೆ ಮೋಸಗಾರರು ಹೊಸ ಹೊಸ ವಿಧಾನ ಬಳಸುತ್ತಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಬೆಂಗಳೂರಿನ ಮಹಿಳೆಯೊಬ್ಬರು ₹32 ಕೋಟಿ ಹಣ ಕಳೆದುಕೊಂಡಿದ್ದಾರೆ.ನಮ್ಮ ಕೊಪ್ಪಳ ಸುತ್ತಮುತ್ತಲೂ ಸೈಬರ್ ಪ್ರಕರಣ ಹೆಚ್ಚುತ್ತಿವೆ. ಅವುಗಳಿಂದ ಜಾಗೃತರಾಗಿರಿ. ಸೈಬರ್ ಕ್ರೆöಮ್ ತಪ್ಪಿಸಿಕೊಳ್ಳಲು ಬಲವಾದ ಪಾಸ್‌ವರ್ಡ್ ಬಳಸಿ, ಒಟಿಪಿ, ಪಿನ್, ಸಿವಿವಿ ಅನ್ನು ಯಾರಿಗೂ ಹೇಳಬೇಡಿ.ಅನಾಮಧೇಯ ಲಿಂಕ್ ಅಥವಾ ಆ್ಯಪ್ ಡೌನ್‌ಲೋಡ್ ಮಾಡಬೇಡಿ.ವೈಯಕ್ತಿಕ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹಂಚಬೇಡಿ.ಹಣ ವರ್ಗಾವಣೆಗೂ ಮೊದಲು ಖಚಿತಪಡಿಸಿಕೊಂಡು ವರ್ಗಾವಣೆ ಮಾಡಿ ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಮನುಷ್ಯನಿಗೆ ಮೊಬೈಲ್ ಜೀವನದ ಒಂದು ಅವಿಭಾಜ್ಯ ಅಂಗವಾದಂತಾಗಿದೆ. ಮೊಬೈಲ್,ಇಂಟರ್‌ನೆಟ್‌ ನಿಂದ ನಮಗೆ ಬಹಳಷ್ಟು ಲಾಭ-ನಷ್ಟಗಳಿವೆ.ಆದರೆ ಅವುಗಳನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂಬುವುದು ಮುಖ್ಯ. ನಾವುಗಳು ಎಷ್ಟೇ ಜಾಣರಿದ್ದರು ಸಹ ಕೆಲವೊಮ್ಮೆ ಹ್ಯಾಕರ್ಸ್ ಅಥವಾ ಸೈಬರ್ ಕ್ರೆಮ್‌ ಪ್ರಕರಣಗಳಿಗೆ ಬಲಿಯಾಗಿ ತೊಂದರೆಗೆ ಒಳಗಾಗಬಹುದು. ಇದಕ್ಕಾಗಿ ಪ್ರತಿಯೊಬ್ಬರೂ ಸೈಬರ್ ಅಪರಾಧ ಕುರಿತು ಜಾಗೃತರಾಗಿರಬೇಕು. ಮನುಷ್ಯನಿಗೆ ಅತಿ ಆಸೆ ಮತ್ತು ಭಯ ಸೈಬರ್ ಕ್ರೈಂ ಗೆ ದಾರಿಯಾಗುತ್ತದೆ. ಉದಾಹರಣೆಗೆ ವಂಚಕರು ಲಕ್ಕಿ ಡ್ರಾನಲ್ಲಿ ಹಣ ಗೆದ್ದಿದ್ದೀರಿ, ನಿಮ್ಮ ಮೊಬೈಲ್ ಸಂಖ್ಯೆಗೆ ಆಫರ್ ಬಂದಿದೆ ಎಂದು ವಿವಿಧ ಆಸೆ ತೋರಿಸುತ್ತಾರೆ. ನಿಮ್ಮ ಎಟಿಎಂ ಕಾರ್ಡ್ ಅವಧಿ ಮುಕ್ತಾಯಗೊಂಡಿದೆ, ಬ್ಲಾಕ್ ಆಗಿದೆ, ಹೀಗೆ ವಿವಿಧ ಬಗೆಗಳಲ್ಲಿ ಭಯ ಹುಟ್ಟಿಸಿ ವಂಚಿಸಬಹುದು. ಮೊಬೈಲ್ ಕರೆಗಳ ಮೂಲಕ ಸೂಕ್ಷ್ಮ ವಿವರಗಳಾದ ಒಟಿಪಿ, ಆಧಾರ್,ಪ್ಯಾನ್ ಅಥವಾ ಬ್ಯಾಂಕ್ ಮಾಹಿತಿ ಎಂದಿಗೂ ಬಹಿರಂಗಪಡಿಸಬಾರದು. ಅನಧಿಕೃತ ಆಧಾರ್ ಪಾವತಿ ಅಧಿಸೂಚನೆ ಬಗ್ಗೆ ಜಾಗರೂಕರಾಗಿರಿ.ಪ್ಯಾನ್, ಆಧಾರ್ ಅಥವಾ ಬ್ಯಾಂಕ್ ವಿವರಗಳಂತಹ ಸೂಕ್ಷ್ಮ ಮಾಹಿತಿ ಕೇಳುವ ಅಪರಿಚಿತ ದೂರವಾಣಿ ಸಂಖ್ಯೆಗಳಿಂದ ಹಾಗೂ ವಿಶೇಷವಾಗಿ ಕೆವೈಸಿ ನವೀಕರಣಗಳ ನೆಪದಲ್ಲಿ ಬರುವ ಲಿಂಕ್‌ ಮೇಲೆ ಎಂದಿಗೂ ಕ್ಲಿಕ್ ಮಾಡಬೇಡಿ. ವೈಯಕ್ತಿಕ ಮಾಹಿತಿ ಅಥವಾ ಹಣಕ್ಕಾಗಿ ವಿನಂತಿಸುವ ಅಪರಿಚಿತ ದೂರವಾಣಿ ಸಂಖ್ಯೆಗಳಿಂದ ಬರುವ ಕರೆಗಳಿಗೆ ಎಂದಿಗೂ ಪ್ರತಿಕ್ರಿಯಿಸಬಾರದು ಎಂದು ಮಾಹಿತಿ ನೀಡಿದರು.

ಸೈಬರ್ ಮೋಸವಾದರೆ ತಕ್ಷಣ 1930 ಸೈಬರ್ ಕ್ರೈಂ ಸಹಾಯವಾಣಿಗೆ ಕರೆ ಮಾಡಿ ಅಥವಾ ಮೋಸ ಹೋದ ಒಂದು ಗಂಟೆಯೊಳಗಾಗಿ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದರೆ ಹಣ ವಾಪಸ್ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ವೆಸ್ಟ್ಮೆಂಟ್, ಎಪಿಕೆ ಫೈಲ್, ಡಿಜಿಟಲ್ ಅರೆಸ್ಟ್, ಲೋನ್ ಆ್ಯಪ್, ರೀಲ್ಸ್ ಫ್ರಾಢ್ ಕುರಿತು ಮಾಹಿತಿ ನೀಡಿ ಅವುಗಳಿಂದ ಹೇಗೆ ಜಾಗೃತರಾಗಿರಬೇಕು ಎಂದು ತಿಳಿಸಿದರು.


ಈ ಸಂದರ್ಭ ಜಿಲ್ಲಾ ಎನ್‌ಐಸಿ ಅಧಿಕಾರಿ ಬಸವರಾಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.