ಸಾರಾಂಶ
ಚಿತ್ರದುರ್ಗದಿಂದ ಸ್ಪರ್ಧಿಸುವರೆಂಬ ಸುದ್ದಿ ಹರಡಿದ್ದೇ ತಡ, ಕಾರಜೋಳ ಅವರಿಗೆ ಯಾವುದೇ ಕಾರಣದಿಂದಲೂ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಬಾರದೆಂದು ಕರುನಾಡ ವಿಜಯಸೇನೆ ಕಾರ್ಯಕರ್ತರು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಚಿತ್ರದುರ್ಗ: ಲೋಕಸಭಾ ಚುನಾವಣಾ ಕಣದಲ್ಲಿ ಬಿಜೆಪಿಗೆ ರಾಜ್ಯದ ಪ್ರಮುಖ ಕ್ಷೇತ್ರಗಳಲ್ಲಿ ಮುಜುಗರ ಉಂಟಾಗುವಂತ ಘಟನೆಗಳು ಜರುಗಿರುವಂತೆಯೇ ಇನ್ನೂ ಟಿಕೆಟ್ ಘೋಷಣೆ ಆಗದ ಕೋಟೆನಾಡು ಚಿತ್ರದುರ್ಗದಲ್ಲಿಯೂ ಸನ್ನಿವೇಶ ಉಂಟಾಗುವ ಲಕ್ಷಣಗಳು ಗೋಚರಿಸಿವೆ.
ಇದಕ್ಕೆ ಕಾರಣ, ರಾಜ್ಯದ ಹಿರಿಯ ಬಿಜೆಪಿ ಸಚಿವ ಗೋವಿಂದ ಕಾರಜೋಳ. ಚಿತ್ರದುರ್ಗದಿಂದ ಸ್ಪರ್ಧಿಸುವರೆಂಬ ಸುದ್ದಿ ಹರಡಿದ್ದೇ ತಡ, ಕಾರಜೋಳ ಅವರಿಗೆ ಯಾವುದೇ ಕಾರಣದಿಂದಲೂ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಬಾರದೆಂದು ಕರುನಾಡ ವಿಜಯಸೇನೆ ಕಾರ್ಯಕರ್ತರು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಗೋವಿಂದ ಕಾರಜೋಳ ಅವರಿಗೆ ಯಾವುದೇ ಅರಿವಿಲ್ಲ. ಹಾಗಾಗಿ ಇಂತಹವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವೇ ಇಲ್ಲ. ಹಾಲಿ ಸಂಸದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಸಂಸದ ಜನಾರ್ಧನ ಸ್ವಾಮಿ, ಯುವ ಮುಖಂಡ ಎಂ.ಸಿ.ರಘುಚಂದನ್ ಇವರುಗಳ ಪೈಕಿ ಯಾರಿಗಾದರೂ ಟಿಕೆಟ್ ನೀಡಲಿ. ಅದನ್ನು ಬಿಟ್ಟು ಪಕ್ಷದ ವರಿಷ್ಟರು ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿ ಇಲ್ಲಿ ಕ್ಷೇತ್ರವನ್ನು ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಬಿಜೆಪಿ ನಾಯಕರು ಗಂಭೀರವಾಗಿ ಪರಿಗಣಿಸಬೇಕೆಂದು ಪ್ರತಿಭಟನೆಯ ನೇತೃತ್ವವಹಿಸಿದ್ದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಒತ್ತಾಯಿಸಿದರು.
ಕರುನಾಡ ವಿಜಯಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಅಣ್ಣಪ್ಪ, ನಿಸಾರ್ ಅಹಮದ್, ಜಗದೀಶ್ ಸಿ. ಅವಿನಾಶ್, ನಾಗರಾಜ್ ಮುತ್ತು, ಪ್ರದೀಪ್, ಸಂತೋಷ್ ಎನ್. ಸುರೇಶ್, ಅಖಿಲೇಶ್, ಕಮಲಮ್ಮ ಇವರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.