ಕುಡುಕರ ಅಡ್ಡೆಯಾದ ಕೋಟ್ಯಂತರ ರುಪಾಯಿ ವೆಚ್ಚದ ನಗರಸಭೆ ಮಳಿಗೆಗಳು..!

| Published : Oct 15 2023, 12:45 AM IST

ಸಾರಾಂಶ

ಕುಡುಕರ ಅಡ್ಡೆಯಾದ ಕೋಟ್ಯಂತರ ರುಪಾಯಿ ವೆಚ್ಚದ ನಗರಸಭೆ ಮಳಿಗೆ

ಎಂ.ಜಿ. ರಸ್ತೆ, ಕೆ.ಎಂ. ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಕಮರ್ಷಿಯಲ್ ಕಾಂಪ್ಲೆಕ್ಸ್ । ತಿಂಗಳಿಗೆ 15 ರಿಂದ 20 ಲಕ್ಷ ರು. ಬಾಡಿಗೆ ಖೋತಾ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಚಿಕ್ಕಮಗಳೂರಿನಲ್ಲಿ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ನಗರಸಭೆಯ ಭವ್ಯ ಮಳಿಗೆಗಳು ಕುಡುಕರ ಅಡ್ಡೆಯಾಗಿ ಪರಿವರ್ತನೆ ಆಗಿದೆ. ಈ ಮಳಿಗೆ ಉದ್ಘಾಟನೆಯಾಗಿದ್ದರೂ ಉಪಯೋಗಕ್ಕೆ ಬಾರದ ಮಳಿಗೆಗಳು ವರ್ತಕರಿಗೆ ಲಭ್ಯವಾಗಿಲ್ಲ. ವರ್ತಕರಿಗೆ ಅನುಕೂಲವಾಗಲೆಂದು ನಿರ್ಮಾಣವಾದ ಮಳಿಗೆಗಳು ಅವ್ಯವಸ್ಥೆಯ ಅಗರವಾಗಿದೆ. ಕೋಟ್ಯಂತರ ರು.ಗಳನ್ನು ಖರ್ಚು ಮಾಡಿ ನಿರ್ಮಾಣ ಮಾಡಿದ ಮಳಿಗೆಗಳು ಉದ್ಟಾಟನೆಯಾಗಿ ಅನಾಥವಾಗಿದ್ದು ನಗರಸಭೆಯ ಆದಾಯಕ್ಕೂ ಕತ್ತರಿ ಬಿದ್ದಿದೆ. ನಗರದ ಹೃದಯ ಭಾಗವಾಗಿರುವ ಎಂ.ಜಿ. ರಸ್ತೆ ಎಂ.ಜಿ. ರಸ್ತೆ ಹಾಗೂ ಕೆ.ಎಂ. ರಸ್ತೆಯಲ್ಲಿ ನಿರ್ಮಾಣ ಗೊಂಡಿರುವ ಕಮರ್ಷಿಯಲ್ ಕಾಂಪ್ಲೆಕ್ಸ್‌ ನಿಂದ ತಿಂಗಳಿಗೆ 15 ರಿಂದ 20 ಲಕ್ಷ ರು. ಬಾಡಿಗೆ ಖೋತಾ, ಕತ್ರಿಮಾರಮ್ಮ ದೇಗುಲದ ಬಳಿ 54 ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಚಿಕ್ಕಮಗಳೂರು ನಗರಸಭೆಯಿಂದ ರಾಜ್ಯದಲ್ಲೇ ಮಾದರಿ ಎನ್ನುವ ರೀತಿಯಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಿ ನಂತರ ಕೈ ತೊಳೆದುಕೊಂಡಿರುವ ಪರಿಣಾಮ ಮಳಿಗೆಗಳಿಗೆ ಗ್ರಹಣ ಹಿಡಿದಿದೆ. ನಗರಸಭೆಗೆ ಹೆಚ್ಚು ಆದಾಯ ತಂದು ಕೊಡಬೇಕಿದ್ದ ನೂತನವಾಗಿ ನಿರ್ಮಿಸಿರುವ ನಗರಸಭೆ ಮಳಿಗೆಗಳು ಉದ್ಘಾಟನೆ ಯಾದರೂ ಬಾಡಿಗೆ ನೀಡಲು ಇನ್ನೂ ಮೀನಮೇಷ ಎಣಿಸಲಾಗುತ್ತಿದೆ. 3.50 ಕೋಟಿ ರು. ವೆಚ್ಚದಲ್ಲಿ ದಂಟರಮಕ್ಕಿ ಕತ್ರಿಮಾರಮ್ಮ ದೇವಸ್ಥಾನದ ಸಮೀಪ 32 ವಾಣಿಜ್ಯ ಮಳಿಗೆ ನಿರ್ಮಿಸಿದೆ. ಎಂ.ಜಿ. ರಸ್ತೆಯ ಹಳೆ ತರಕಾರಿ ಮಾರುಕಟ್ಟೆಯಲ್ಲಿ 3.50 ಕೋಟಿ ರು.ವೆಚ್ಚದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಾಣಿಜ್ಯ ಸಂಕೀರ್ಣದಲ್ಲಿ 22 ಮಳಿಗೆ ನಿರ್ಮಿಸಲಾಗಿದೆ. ಈ ಎರಡೂ ವಾಣಿಜ್ಯ ಸಂಕೀರ್ಣಗಳನ್ನು ವಿಧಾನಸಭಾ ಚುನಾವಣೆಗೂ ಮುನ್ನವೇ ಅಂದರೆ 2023 ರ ಫೆಬ್ರವರಿಯಲ್ಲಿ ಅಂದಿನ ಶಾಸಕ ಸಿ.ಟಿ.ರವಿ ಉದ್ಘಾಟಿಸಿದ್ದರು. ಆದರೆ ಈವರೆಗೂ ಮಳಿಗೆಗಳು ಮಾತ್ರ ವರ್ತಕರಿಗೆ ದೊರೆತಿಲ್ಲ. ಒಟ್ಟಾರೆ ಅನಾಥವಾಗಿರುವ ಮಳಿಗೆಗಳು ಇಂದು ಅನೈತಿಕ ಚಟುಟವಟಿಕೆ ತಾಣವಾಗಿವೆ. ಕುಡುಕರ ಅಡ್ಡೆಯಾಗಿ ಪರಿವರ್ತನೆ ಯಾಗಿದ್ದು ಮಳಿಗೆಗಳು ಮುಂಭಾಗದಲ್ಲಿ ಮದ್ಯ ಬಾಟಲಿಗಳು ರಾಶಿಯೇ ಬಿದ್ದಿರುತ್ತವೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತು ಇತ್ತ ಗಮನ ಹರಿಸಬೇಕಾಗಿದೆ.

---ಬಾಕ್ಸ್--

ಬಾಡಿಗೆ ಖೋತಾ: ಇತ್ತೀಚೆಗೆ ದರಪಟ್ಟಿ ತಯಾರಿಸಿ ಅನುಮೋದನೆಗಾಗಿ ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ಈ ಎರಡೂ ಸಂಕೀರ್ಣಗಳಿಂದ ನಗರಸಭೆಗೆ ಮಾಸಿಕ 15 ರಿಂದ 20 ಲಕ್ಷ ರು. ಬಾಡಿಗೆ ನಿರೀಕ್ಷಿಸಿದ್ದು ಅಷ್ಟೂ ಹಣ ಈಗ ನಷ್ಟವಾಗುತ್ತಿದೆ.

ಕಳೆದ 8 ತಿಂಗಳಿನಿಂದ ಖಾಲಿ: ಇದಕ್ಕೆ ಮೂಲ ಕಾರಣ ಟೆಂಡರ್ ಪ್ರಕ್ರಿಯೆ ವಿಳಂಬ. ಈ ಮಳಿಗೆಗಳು ವರ್ತಕರಿಗೆ ಸಿಗುವ ಭಾಗ್ಯ ದೊರೆತಿಲ್ಲ, ಆದರೆ, ಪ್ರತಿನಿತ್ಯ ರಾತ್ರಿ ಅನೈತಿಕ ಚಟುವಟಿಕೆ ಹಾಗೂ ಕುಡುಕರ ತಾಣವಾಗಿ ಪರಿಣಮಿಸಿದೆ. ಈ ಮಳಿಗೆಗಳನ್ನು ಟೆಂಡರ್ ಕರೆದು ಬಾಡಿಗೆ ನೀಡಿದರೆ ನಗರಸಭೆಗೆ ಪ್ರತಿ ತಿಂಗಳು ಲಕ್ಷಾಂತರ ರು. ಆದಾಯ ಬರಲಿದ್ದು 54 ಕುಟುಂಬಗಳಿಗೆ ಆಧಾರವಾಗಲಿದೆ. ಆದರೆ, ಇದರತ್ತ ಜನ ಪ್ರತಿನಿಧಿಗಳು ತಿರುಗಿ ನೋಡುತ್ತಿಲ್ಲ. 14 ಕೆಸಿಕೆಎಂ 4ಚಿಕ್ಕಮಗಳೂರಿನ ಕೆ.ಎಂ. ರಸ್ತೆಯ ಕತ್ರಿಮಾರಮ್ಮ ದೇಗುಲದ ಬಳಿ ನಿರ್ಮಾಣಗೊಂಡಿರುವ ನಗರಸಭೆ ಕಾಂಪ್ಲೆಕ್ಸ್.