ಕನ್ನಡ ಪ್ರಭ ವಾರ್ತೆ ದಾಬಸ್ಪೇಟೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನದಕ್ಷಿಣ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ಗೆ ಬಂದಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.ಬೆಂಗಳೂರಿನ ಕಾಡುಗೋಡಿಯ ಮೈತ್ರಿ ಲೇಔಟ್ನ ನಿವಾಸಿ ಅದ್ವೈತ್ ಉಪದ್ಯಾಯ (32) ನಾಪತ್ತೆಯಾದ ಯುವಕನಾಗಿದ್ದು, ಈತ ಆ.7ರಂದು ಮನೆಯಲ್ಲಿ ಶಿವಗಂಗೆ ಬೆಟ್ಟಕ್ಕೆ ಟ್ರಕಿಂಗ್ ಹೋಗುವುದಾಗಿ ಹೇಳಿ ಬಂದಿದ್ದಾನೆ. ಅದರಂತೆ ಬೆಳಗ್ಗೆ 7.30ಕ್ಕೆ ಶಿವಗಂಗೆ ಬೆಟ್ಟದ ಕೆಳಗೆ ಬೈಕ್ ಪಾರ್ಕಿಂಗ್ ಮಾಡಿ ಶಿವಗಂಗೆ ಬೆಟ್ಟ ಹತ್ತಿದ್ದಾನೆ. ನಂತರ ಬೆಟ್ಟದಿಂದ ವಾಪಾಸ್ಸು ಬಂದಿದ್ದಾನೋ ಇಲ್ಲವೋ ಎಂಬ ಬಗ್ಗೆ ಅನುಮಾನವಿದ್ದು, ಆತನಿಗೆ ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿದ್ದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿದೆ.
ಸಿಸಿ ಕ್ಯಾಮೆರದಲ್ಲಿ ಸೆರೆ: ಆತ ಬೆಟ್ಟ ಹತ್ತುತ್ತಿರುವ ದೃಶ್ಯ ದೇವಾಲಯದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳೆದ 5 ದಿನಗಳ ಹಿಂದೆ ವೈಟ್ ಫೀಲ್ಡ್ ನಲ್ಲಿ ಬುಲೆಟ್ ಬೈಕ್ ಬಾಡಿಗೆ ಪಡೆಡಿದ್ದು ಅದೇ ಬೈಕ್ನಲ್ಲಿ ಶಿವಗಂಗೆಗೆ ಬಂದು ಬೈಕ್ ಅನ್ನು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದಾನೆ. ಇನ್ನೂ ಈ ಯುವಕ ಇಂದೋರ್ ಮೂಲದ ಉದ್ಯಮಿಯ ಮಗ ಎನ್ನಲಾಗಿದ್ದು, ನಾಪತ್ತೆಯಾದ ಬಗ್ಗೆ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಾಬಸ್ಪೇಟೆ ಹಾಗೂ ನೆಲಮಂಗಲ ಪೊಲೀಸರು ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ನಲ್ಲಿ ಶೋಧಿಸುತ್ತಿದ್ದಾರೆ. ಅಲ್ಲದೇ ಡ್ರೋನ್ ಮೂಲಕವೂ ಹುಡುಕಾಟ ನಡೆಸಿದ್ದಾರೆ.