ರಬಕವಿ-ಬನಹಟ್ಟಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಹಿನ್ನೆಲೆ ಮಂಗಳವಾರ ಕಟ್ಟಿದ್ದ ಹಸಿರು ರಿಬ್ಬನ್ ಹರಿದು ಹಾಕಿದ್ದಕ್ಕೆ ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದ ಘಟನೆ ಪರಿಣಾಮ ಬನಹಟ್ಟಿ ಪೊಲಿಸ್ ಠಾಣೆಯಲ್ಲಿ ೪೦ ಜನರ ಮೇಲೆ ಪೊಲೀಸರು ಸ್ವಯಂ ದೂರು ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ,

ತಾಲೂಕಿನ ಹೊಸೂರು ಗ್ರಾಮದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಹಿನ್ನೆಲೆ ಮಂಗಳವಾರ ಕಟ್ಟಿದ್ದ ಹಸಿರು ರಿಬ್ಬನ್ ಹರಿದು ಹಾಕಿದ್ದಕ್ಕೆ ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದ ಘಟನೆ ಪರಿಣಾಮ ಬನಹಟ್ಟಿ ಪೊಲಿಸ್ ಠಾಣೆಯಲ್ಲಿ ೪೦ ಜನರ ಮೇಲೆ ಪೊಲೀಸರು ಸ್ವಯಂ ದೂರು ದಾಖಲಿಸಿದ್ದಾರೆ.ಪ್ರತಿವರ್ಷದಂತೆ ಹೊಸೂರಿನಲ್ಲಿ ಟಿಪ್ಪು ಜಯಂತಿ ಆಚರಣೆ ನಡೆಯುತ್ತಿತ್ತು. ಎರಡು ಗುಂಪುಗಳು ಪ್ರತ್ಯೇಕವಾಗಿ ಆಚರಣೆ ನಡೆಸುತ್ತಿದ್ದವು. ರಿಬ್ಬನ್ ಹರಿದ ಪರಿಣಾಮ ಒಂದು ಗುಂಪಿನ ವ್ಯಕ್ತಿಯೇ ಕಾರಣವೆಂದು ತಿಳಿದು ಮಂಗಳವಾರ ರಾತ್ರಿ ೧೦.೩೦ರ ಸುಮಾರಿಗೆ ಹೊಸೂರಿನ ಬನಶಂಕರಿ ದೇವಸ್ಥಾನ ಹತ್ತಿರದ ರಸ್ತೆಯಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ಕೆಲವರ ಮೇಲೆ ಹಲ್ಲೆ ನಡೆದಿದೆ.

ನಡೆದಿದ್ದೇನು ? : 3-4 ವರ್ಷಗಳಿಂದ ಅಂಜುಮನ್ ಸಂಸ್ಥೆಯ ಲೆಕ್ಕಪತ್ರ ಕೇಳಿದ ವಿಚಾರಕ್ಕೆ ಮನಸ್ತಾಪ ಆರಂಭವಾಗಿತ್ತು. ಇದರ ಪರಿಣಾಮ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿದೆ ಎನ್ನಲಾಗಿದೆ.

೪೦ ಜನರ ಮೇಲೆ ಪ್ರಕರಣ ದಾಖಲು: ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಗುಂಪುಗಳ ಮಧ್ಯೆ ೪೦ ಜನರ ಮೇಲೆ ಶಾಂತಿ ಕದಡುವ ಕಾರಣಕ್ಕೆ ಸ್ವಯಂ ಪ್ರಕರಣ ದಾಖಲು ಮಾಡಿಕೊಂಡಿರುವ ಬನಹಟ್ಟಿ ಪೊಲೀಸರು ಪ್ರಕರಣದ ಕುರಿತು ಅತ್ಯಂತ ಸೂಕ್ಷ್ಮವಾಗಿ ಹೆಜ್ಜೆಯಿಡುತ್ತಿದೆ.

ಪಿಎಸ್‌ಐ ಶಾಂತಾ ಹಳ್ಳಿ ಸೇರಿದಂತೆ ಪೊಲೀಸ್ ತಂಡ ಹೊಸೂರಿನಲ್ಲಿಯೇ ಬಿಡಾರ ಹೂಡಿದ್ದು, ಶಾಂತಿ ಭಂಗ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಯಥಾಸ್ಥಿತಿಯಲ್ಲಿದ್ದು, ಎಂದಿನಂತೆ ದೈನಂದಿನ ಕೆಲಸ ಕಾರ್ಯಗಳಲ್ಲಿ ನಾಗರಿಕರಿದ್ದಾರೆ.