ಶಾಲಾ ಆವರಣ ಸ್ವಚ್ಛತೆ ವಿಚಾರಕ್ಕೆ ಘರ್ಷಣೆ

| Published : Aug 20 2025, 01:30 AM IST

ಸಾರಾಂಶ

ಈಶಾ ಫೌಂಡೇಶನ್ ಗೆ ತೆರಳುವ ರಸ್ತೆಯಲ್ಲಿರುವ ಲಿಂಗಶೆಟ್ಟಿಪುರ ಗ್ರಾಮದಲ್ಲಿರುವ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಕೃಷ್ಣವೇಣಿ ಎಂಬುವರು ಶಾಲೆಯ ಆವರಣ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಇದಕ್ಕೆ ಗ್ರಾಪಂ ಸದಸ್ಯ ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗ್ರಾಪಂ ಸದಸ್ಯರ ಗಮನಕ್ಕೆ ತಾರದೆ ಸ್ವಚ್ಛತಾ ಕಾರ್ಯ ಆರಂಭಿಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇದು ಜಗಳಕ್ಕೆ ಕಾರಣ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸರ್ಕಾರಿ ಶಾಲಾ ಆವರಣದಲ್ಲಿ ಕಸ, ಕಳೆ ಮತ್ತು ಕುರುಚಲು ಗಿಡಗಳನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿದ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತುಕತೆ ವಿಕೋಪಕ್ಕೆ ತಿರುಗಿ, ತಳ್ಳಾಟ, ನೂಕಾಟದೊಂದಿಗೆ ಕೈಕೈ ಮಿಲಾಯಿಸಿಕೊಂಡು ದೂರು ಪ್ರತಿದೂರು ದಾಖಲಿಸಿದ ಘಟನೆ ತಾಲೂಕಿನ ಲಿಂಗಶೆಟ್ಟಿಪುರ ಗ್ರಾಮದಲ್ಲಿ ನಡೆದಿದೆ. ಗ್ರಾಪಂ ಸದಸ್ಯ ಆಕ್ಷೇಪ

ಈಶಾ ಫೌಂಡೇಶನ್ ಗೆ ತೆರಳುವ ರಸ್ತೆಯಲ್ಲಿರುವ ಲಿಂಗಶೆಟ್ಟಿಪುರ ಗ್ರಾಮದಲ್ಲಿರುವ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಕೃಷ್ಣವೇಣಿ ಎಂಬುವರು ಶಾಲೆಯ ಆವರಣ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಇದಕ್ಕೆ ಗ್ರಾಪಂ ಸದಸ್ಯ ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗ್ರಾಪಂ ಸದಸ್ಯರ ಗಮನಕ್ಕೆ ತಾರದೆ ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯ ಆರಂಭಿಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಆಗ ಇಬ್ಬರ ನಡುವೆ ಜಗಳವಾಗಿದೆ. ಇದರಿಂದ ಮನನೊಂದ ಕೃಷ್ಣವೇಣಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

ದೂರು ದಾಖಲಿಸಲು ನಿರಾಕರಿಸಿದ ಮಹಿಳಾ ಠಾಣೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಇಂತಹ ಸಣ್ಣ, ಸಣ್ಣ ವಿಚಾರಕ್ಕೆ ಹೀಗೆ ಪೊಲೀಸ್‌ಠಾಣೆ ಮೆಟ್ಟಿಲೇರುವುದು ತಪ್ಪು ಎಂದು ತಿಳಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಕುಪಿತರಾದ ಕೃಷ್ಣವೇಣಿ ಗ್ರಾಮಕ್ಕೆ ವಾಪಸ್ಸಾದವರೇ ನಡುರಸ್ತೆಯಲ್ಲಿ ನ್ಯಾಯಕೋರಿ ಅಂಬೇಡ್ಕರ್ ಪೋಟೋ ಹಿಡಿದು ಧರಣಿ ಕುಳಿತಿದ್ದಾರೆ. ಪ್ರತಿಯಾಗಿ ಗ್ರಾಮಪಂಚಾಯಿತಿ ಸದಸ್ಯ ಮಂಜುನಾಥ್ ತನ್ನ ಪತ್ನಿ ಜತೆ ಇವರಿಗೆ ಎದುರಾಗಿ ಧರಣಿ ಕುಳಿತಿದ್ದಾರೆ.

ಇಬ್ಬರ ನಡುವೆ ನೂಕಾಟ

ಈ ಸಂದರ್ಭದಲ್ಲಿ ಮತ್ತೆ ಮಾತುಕತೆ ನಡೆದು ಎರಡೂ ತಂಡಗಳ ನಡುವೆ ತಳ್ಳಾಟ ನೂಕಾಟ ಆಗಿದೆ. ಇಷ್ಟಕ್ಕೆ ಸುಮ್ಮನಾಗದೆ ಕೈಕೈಮಿಲಾಯಿಸಿಕೊಂಡಿದ್ದಾರೆ. ಈ ವೇಳೆ ಕೃಷ್ಣವೇಣಿ ಅವರಿಗೆ ಬಳೆಯ ಗಾಜು ಚುಚ್ಚಿ ರಕ್ತಬಂದಿದೆ. ಈಕೆ ಗ್ರಾಪಂ ಸದಸ್ಯ ಮಂಜುನಾಥ್ ಮತ್ತು ಅವರ ಪತ್ನಿ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.ಮಹಿಳೆ ಆಸ್ಪತ್ರೆಗೆ ದಾಖಲು

ಸುರಿವ ಮಳೆಯ ನಡುವೆ ಕೃಷ್ಣವೇಣಿ ಧರಣಿ ಕುಳಿತಿದ್ದು ಕೆಲಹೊತ್ತಿನಲ್ಲಿ ಅರೆಪ್ರಜ್ಞೆಗೆ ಜಾರಿದ್ದಾರೆ. ಈ ವೇಳೆ ಗ್ರಾಮಸ್ಥರು ಆಕೆಗೆ ಉಪಚರಿಸಿದರೂ ಎಚ್ಚರವಾಗಲಿಲ್ಲ. ಈ ನಡುವೆ ಪೊಲೀಸರು ಆಗಮಿಸಿ ತಮ್ಮ ವಾಹದಲ್ಲಿಯೇ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದು ದಾಖಲಿಸಿದ್ದಾರೆ. ಈ ವಿಚಾರದಲ್ಲಿ ದೂರು ಪ್ರತಿದೂರು ದಾಖಲಾಗಿದೆ.