ಸಾರಾಂಶ
ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ (ಜಿಸಿಪಿಎಎಸ್)ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ನೃತ್ಯ, ನೃತ್ಯ ವಿನ್ಯಾಸ ಕಲಾವಿದೆ ಮಧು ನಟರಾಜ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಶಾಸ್ತ್ರೀಯತೆಗೆ ಸಮಕಾಲೀನತೆಯ ಸ್ಪರ್ಶವಾದಾಗ ನೃತ್ಯವೂ ಸೇರಿದಂತೆ ಎಲ್ಲಾ ಕಲೆಗಳಲ್ಲಿ ಹೊಸಗಾಳಿ ಬೀಸಲು ಸಾಧ್ಯ ಎಂದು ಖ್ಯಾತ ನೃತ್ಯ, ನೃತ್ಯ ವಿನ್ಯಾಸ ಕಲಾವಿದೆ ಮಧು ನಟರಾಜ್ ಹೇಳಿದ್ದಾರೆ.ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ (ಜಿಸಿಪಿಎಎಸ್)ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ವಿಜೇತೆ ಮಧು ನಟರಾಜ್ ಅವರು ಶಾಸ್ತ್ರೀಯ ನೃತ್ಯದ ಪಠ್ಯಗಳು ಮತ್ತು ತಂತ್ರಗಳು ಪುನರ್ವಾಖ್ಯಾನ ಹಾಗೂ ನವೀಕರಣಕ್ಕೆ ಒಳಗಾದಾಗ, ಅವು ಸಮಕಾಲೀನವೂ, ಜನರಿಗೆ ಹತ್ತಿರವೂ ಆಗುತ್ತವೆಂದು ಅಭಿಪ್ರಾಯಪಟ್ಟರು.ಶಾಸ್ತ್ರೀಯ ಕಥಕ್ ಹಾಗೂ ಸಮಕಾಲೀನ ಎರಡೂ ನೃತ್ಯಗಳಲ್ಲಿ ಪರಿಣತಿ ಹೊಂದಿರುವ ಇವರು ಬೆಂಗಳೂರಿನ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ನ ನಿರ್ದೇಶಕರೂ ಆಗಿದ್ದಾರೆ. ಹಲವು ವಿಡಿಯೋಗಳ ಮೂಲಕ, ತಮ್ಮ ವಿವಿಧ ಪ್ರಯೋಗಗಳನ್ನು ವಿವರಿಸಿದ ಮಧು ನಟರಾಜ್ ಇವರು, ಮುಖ್ಯವಾಗಿ ಪ್ರಕೃತಿ, ಸ್ತ್ರೀ, ಪರಿಸರ ಸಂಬಂಧಿ ವಿಷಯಗಳನ್ನು ನೃತ್ಯ ರೂಪದಲ್ಲಿ ಜನರಿಗೆ ತಲುಪಿಸುವ ಪ್ರಯತ್ನಗಳನ್ನು ಎತ್ತಿ ಹೇಳಿದರು.
ಕಲಾವಿದೆಯರಾದ ರಮ್ಯಾ ನಾಗರಾಜ್ ಹಾಗೂ ಡಾ. ಭ್ರಮರಿ ಶಿವಪ್ರಕಾಶ್ ಇವರ ಪ್ರಾತ್ಯಕ್ಷಿಕೆಯ ಮೂಲಕ ಶಾಸ್ತ್ರೀಯ ನೃತ್ಯ ಪ್ರಕಾರಗಳ ಹೋಲಿಕೆ ಮತ್ತು ಭಿನ್ನತೆಗಳನ್ನು ಮಧು ನಟರಾಜ್ ವಿವರಿಸಿದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಸಂವಾದ ನಡೆಸಿಕೊಟ್ಟರು.