ಸಾರಾಂಶ
ಕುಮಾರಣ್ಣನಿಂದ ಮಾತ್ರ ಸ್ವಚ್ಛ, ದಕ್ಷ ಆಡಳಿತ ಸಾಧ್ಯ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಅಭಿಪ್ರಾಯಪಟ್ಟರು.
ಚಿತ್ರದುರ್ಗ: ಕುಮಾರಣ್ಣನಿಂದ ಮಾತ್ರ ಸ್ವಚ್ಛ, ದಕ್ಷ ಆಡಳಿತ ಸಾಧ್ಯ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಅಭಿಪ್ರಾಯಪಟ್ಟರು.ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ರಾಜಕಾರಣ ಶೂನ್ಯವಾಗಿದೆ. ಬರೀ ಹೇಳಿಕೆ, ಭ್ರಷ್ಟಾಚಾರ, ಆರೋಪ, ಪ್ರತ್ಯಾರೋಪಗಳೇ ಎಲ್ಲೆಡೆ ಮಾರ್ದನಿಸುತ್ತಿವೆ ಎಂದರು.
ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರೈತರ ಪರ ಅನೇಕ ಕಾರ್ಯಕ್ರಮಗಳ ಜಾರಿಗೆ ತಂದಿದ್ದರು. ಇಂದಿಗೂ ಅವರ ಜನಪ್ರಿಯ ಯೋಜನೆಗಳನ್ನು ಜನತೆ ಮೆಲಕು ಹಾಕುತ್ತಿದ್ದಾರೆ. ಅವರು ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಬಯಸುತ್ತಿದ್ದಾರೆ ಎಂದು ಹೇಳಿದರು.ಕುಮಾರಸ್ವಾಮಿಯವರ ಹುಟ್ಟುಹಬ್ಬದ ಅಂಗವಾಗಿ ನೀಲಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷವಾದ ಪೂಜೆಯನ್ನು ಸಲ್ಲಿಸುವುದರ ಮೂಲಕ ಅವರಿಗೆ ನಾಡಿನ ಜನತೆಯ ಕಲ್ಯಾಣಕ್ಕಾಗಿ ಭಗವಂತ ಆರೋಗ್ಯ, ಆಯಸ್ಸು ನೀಡಲೆಂದು ಪ್ರಾರ್ಥಿಸಲಾಯಿತು. ಮುಂದಿನ ದಿನದಲ್ಲಿ ಪಕ್ಷದ ಸಿದ್ಧಾಂತದ ಅಡಿಯಲ್ಲಿ ಮುಂಬರುವ ಎಲ್ಲಾ ಚುನಾವಣೆಯನ್ನು ಸಹಾ ಎದುರಿಸಿ ಗೆಲ್ಲಲಾಗುವುದೆಂದು ತಿಳಿಸಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಯಣ್ಣ ಮಾತನಾಡಿ, ಕುಮಾರಸ್ವಾಮಿಯವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುವುದರ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವಾತಾವರಣ ನಿರ್ಮಾಣವಾಗಬೇಕಿದೆ. ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮಾಡಿದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಈಗಲೂ ಸಹಾ ಜನರು ನೆನಪಿಸಿಕೊಳ್ಳುತ್ತಾರೆ. ರೈತರ ಸಾಲ ಮನ್ನಾ, ಭಾಗ್ಯಲಕ್ಷ್ಮೀ, ಮಕ್ಕಳಿಗೆ ಸೈಕಲ್ ವಿತರಣೆ ಸೇರಿದಂತೆ ವಿವಿಧ ರೀತಿಯ ಯೋಜನೆಗಳು ಈಗಲೂ ಜನರ ಮನಸ್ಸಿನಲ್ಲಿ ಇದೆ ಎಂದರು.
ಈಗ ಕುಮಾರಸ್ವಾಮಿಯವರು ಕೇಂದ್ರ ಸರ್ಕಾರದ ಮಂತ್ರಿಯಾಗಿ, ದೇಶದ ಕಾರ್ಮಿಕರ ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಮುಂದಾಗಲಿ. ಇದೇ ರೀತಿ ರಾಜ್ಯದ ಹಲವಾರು ಸಮಸ್ಯೆಗಳನ್ನು ಸಹಾ ಬಗೆಹರಿಸುವಲ್ಲಿ ಕುಮಾರಸ್ವಾಮಿಯವರು ಗಮನ ಹರಿಸಬೇಕು. ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದರ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಯತ್ನಿಸಲಿ. ಕುಮಾರ ಸ್ವಾಮಿ ಅವರನ್ನು ಗೆಲ್ಲಿಸಿ ಕೇಂದ್ರದಲ್ಲಿ ಸಚಿವರಾಗಲು ಅವಕಾಶ ಮಾಡಿಕೊಟ್ಟ ಮಂಡ್ಯ ಭಾಗದ ಜನತೆಯ ಅಭಿನಂದಿಸಲೇಬೇಕು ಎಂದು ಹೇಳಿದರು. ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗೆ ಸಾಧ್ಯವಿರುವ ಅಗತ್ಯ ಕ್ರಮಗಳ ಬಗ್ಗೆ ಕುಮಾರಸ್ವಾಮಿ ಅವರ ಗಮನ ಸೆಳೆಯಲಾಗುವುದು. ಮುಖ್ಯಮಂತ್ರಿಯಾಗಿ ಸಮರ್ಥ ಆಡಳಿತ ನೀಡಿರುವ ಅವರಿಗೆ ರಾಜ್ಯದ ಸಮಸ್ಯೆಗಳ ಅರಿವಿದೆ ಎಂದು ಹೇಳಿದರು.
ಇದೇ ವೇಳೆ ಚಿತ್ರದುರ್ಗ ನಗರಸಭೆ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಸ್ರುಲ್ಲಾ ರವರನ್ನು ಸನ್ಮಾನಿಸಲಾಯಿತು.ಜೆಡಿಎಸ್ನ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಚಿತ್ರದುರ್ಗ ತಾಲೂಕು ಅಧ್ಯಕ್ಷ ಸಣ್ಣ ತಿಮ್ಮಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಗೀತಮ್ಮ, ಚಿತ್ರದುರ್ಗ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಸ್ರಲ್ಲಾ, ಸದಸ್ಯರಾದ ಚಂದ್ರಶೇಖರ್, ಹೊಳಲ್ಕೆರೆ ಜೆಡಿಎಸ್ ಅಧ್ಯಕ್ಷ ಪರಮೇಶ್ವರಪ್ಪ, ರುದ್ರಣ್ಣ ಜಾಲಿಕಟ್ಟೆ, ಮಂಜುನಾಥ, ಯುವ ಘಟಕದ ಅಧ್ಯಕ್ಷ ಪ್ರತಾಪ್ ಜೋಗಿ, ಅಬು, ಹನುಮಂತಪ್ಪ, ಸಚಿದಾನಂದ, ಪುಟ್ಟಪ್ಪ ಭಾಗವಹಿಸಿದ್ದರು.