ನಮಾಮಿ ಕಾವೇರಿ ಸಹಯೋಗದೊಂದಿಗೆ 180ನೇ ಮಹಾ ಆರತಿ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ ಕಾವೇರಿ ನದಿ ಸೇರಿದಂತೆ ಜಲ ಮೂಲಗಳ ಆರಾಧನೆಯ ಮೂಲಕ ಜನರಲ್ಲಿ ಸ್ವಚ್ಛತೆಯ ಅರಿವು ಜಾಗೃತಿ ಮೂಡಿಸಲು ಸಾಧ್ಯ ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಸಂಘಟನಾ ಪ್ರಮುಖರು ಹಾಗೂ ಉದ್ಯಮಿ ಎಂ ಎಂ ದಾವೂದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಮಾಮಿ ಕಾವೇರಿ ಸಹಯೋಗದೊಂದಿಗೆ ನಡೆದ 180ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ನದಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕಾಗಿದೆ ಎಂದ ಅವರು ನದಿ ಸಂರಕ್ಷಣೆ ಸಂಬಂಧ ತಮ್ಮ ಸಂಘಟನೆ ಕೈಜೋಡಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಉದ್ಯಮಿ ಯಾದವ್ ಅವರು ಮಾತನಾಡಿ, ನದಿ ಪ್ರಕೃತಿಯನ್ನು ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಕೆಲಸ ಆಗಬೇಕಿದೆ. ಜಲಮೂಲ ನದಿಗಳನ್ನು ನೇರವಾಗಿ ಕಲುಷಿತ ಗೊಳಿಸುವ ಜನರಿಗೆ ದಂಡ ಶಿಕ್ಷೆ ವಿಧಿಸುವ ಕಾನೂನು ಅನುಷ್ಠಾನಗೊಳ್ಳಬೇಕು ಎಂದರು.ಮುಖ್ಯ ಅರ್ಚಕರಾದ ಕೃಷ್ಣಮೂರ್ತಿ ಭಟ್ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ಮಾತನಾಡಿ, ನದಿಗೆ ಒಳ್ಳೆಯ ವಸ್ತುಗಳನ್ನು ಅರ್ಪಿಸಬೇಕೇ ಹೊರತು ಉಪಯೋಗವಿಲ್ಲದ ತ್ಯಾಜ್ಯಗಳನ್ನು ಹಾಕುವುದು ಒಳಿತಲ್ಲ ಎಂದರು. ಜ್ಞಾನದ ಕೊರತೆಯಿಂದ ಜನರು ಜಲಮೂಲಗಳಿಗೆ ಧಕ್ಕೆ ಉಂಟು ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು. ಈ ಸಂದರ್ಭ ಕಾವೇರಿ ಮಹಾ ಆರತಿ ಬಳಗದ ಸಂಚಾಲಕರಾದ ವನಿತಾ ಚಂದ್ರಮೋಹನ್, ನಮಾಮಿ ಕಾವೇರಿ ಬಳಗದ ಸದಸ್ಯರು ಇದ್ದರು.