ಸಾರಾಂಶ
ಮಂಗಳೂರು: ಸ್ವಚ್ಛತೆಯ ಕಾರ್ಯ ದೇಶದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ. ನಮ್ಮ ಮನೆ ಮಾತ್ರವಲ್ಲ, ನಮ್ಮ ನಾಗರಿಕ ಪರಿಸರದ ಜವಾಬ್ದಾರಿಯೂ ನಮ್ಮೆಲ್ಲರ ವೈಯಕ್ತಿಕ ಜವಾಬ್ದಾರಿಯಾಗಿದೆ. ‘ನಮ್ಮ ಕಸ, ನಮ್ಮ ಜವಾಬ್ದಾರಿ’ ಎಂಬ ಮಂತ್ರದಂತೆ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವ ಕಾರ್ಯದಲ್ಲಿ ಮುಂದುವರಿಯಬೇಕಾಗಿದೆ ಎಂದು ಡಾ. ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಎಸ್.ಆರ್. ಹರೀಶ್ ಆಚಾರ್ಯ ಹೇಳಿದರು.ವಿಶ್ವಕರ್ಮ ಸಹಕಾರ ಬ್ಯಾಂಕ್ ಆಯೋಜಿಸಿರುವ ಸ್ವಚ್ಛ ಭಾರತ ಕಾರ್ಯಕ್ರಮದಲ್ಲಿ ಸ್ವಯಂಸೇವಕ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ ಕಾರ್ಯಕ್ರಮದ “ಸ್ವಚ್ಛತಾ ಹೀ ಸೇವಾ’’ ಎಂಬ ಧ್ಯೇಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬ್ಯಾಂಕ್ ತನ್ನ ಸ್ವರ್ಣ ಜಯಂತಿಯ ಪ್ರಯುಕ್ತ ಎಲ್ಲ ಶಾಖೆಗಳು ಮತ್ತು ಅದರ ಗ್ರಾಹಕರೊಂದಿಗೆ ಈ ಆಂದೋಲನದಲ್ಲಿ ಕೈಜೋಡಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.ವಿಶ್ವಕರ್ಮ ಸಹಕಾರ ಬ್ಯಾಂಕಿನ ಪ್ರಧಾನ ಕಚೇರಿ ಪರಿಸರದಲ್ಲಿ ಆರಂಭವಾದ ಈ ಸ್ವಚ್ಛ ಭಾರತ್ ಕಾರ್ಯಕ್ರಮವನ್ನು ಹಸಿರು ನಿಶಾನೆ ತೋರುವ ಮೂಲಕ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ರಾಜೇಂದ್ರ, ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಎಲ್. ಹರೀಶ್ ಮತ್ತು ಕಾಳಿಕಾಂಬಾ ಸೇವಾ ಸಮಿತಿಯ ಜಗದೀಶ್ ಸಿದ್ದಕಟ್ಟೆ ಉದ್ಘಾಟಿಸಿದರು.
ಸ್ವಚ್ಛ ಭಾರತ ಕಾರ್ಯಕ್ರಮದ ಸಂಚಾಲಕ ಭರತ್ ನಿಡ್ಪಳ್ಳಿ ಹಾಗೂ ಪ್ರಕಾಶ್ ಆಚಾರ್ಯ ಹಲೇಜಿ ಶ್ರಮದಾನದ ಕಾರ್ಯಕ್ರಮವನ್ನು ನಿರ್ವಹಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಜಗದೀಶ್ ಆಚಾರ್ಯ ಪಡುಪಣಂಬೂರು, ನಿರ್ದೇಶಕರಾದ ಹರಿಪ್ರಸಾದ್, ಬಿಜು ಜಯ, ಜಯಶ್ರೀ ವಿ. ಆಚಾರ್ಯ, ರೇಷ್ಮಾ ಚಂದನ್, ವ್ಯವಸ್ಥಾಪಕ ನಿರ್ದೇಶಕ ವಸಂತ ಅಡ್ಯಂತಾಯ, ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ಸದಸ್ಯರಾದ ಪುನೀತ್, ಮಂಜುಳಾ, ನೇಹಾ, ಸಾಮಾಜಿಕ ಕಾರ್ಯಕರ್ತರಾದ ರತ್ನಾಕರ ಆಚಾರ್ಯ, ಕೆ.ಎಲ್. ಸುರೇಶ್, ಕೆ.ಜೆ.ಗುರುರಾಜ್, ಪ್ರಕಾಶ್ ಕುಂಟಾಡಿ, ನಾಗೇಶ್ ಆಚಾರ್ಯ ಕುಳಾಯಿ, ಗೋಪಾಲ್ ಶೇಟ್, ಪುರುಷೋತ್ತಮ ಪ್ರಭು, ದ.ಕ. ಚಿನ್ನದ ಕೆಲಸಗಾರರ ಸಂಘದ ಸದಸ್ಯರು, ವಿಶ್ವಕರ್ಮ ಯುವ ವೇದಿಕೆಯ ಸದಸ್ಯರು, ಕಾಳಿಕಾಂಬಾ ಸೇವಾ ಸಮಿತಿಯ ಸದಸ್ಯರು ಹಾಗೂ ಬ್ಯಾಂಕಿನ ಸಿಬ್ಬಂದಿ ಭಾಗವಹಿಸಿದ್ದರು.ಬ್ಯಾಂಕಿನ ಸುತ್ತಮುತ್ತಲಿನ ಪ್ರದೇಶಗಳಾದ ಟೆಂಪಲ್ ಸ್ಕ್ವೇರ್, ಫ್ಲವರ್ ಮಾರ್ಕೆಟ್, ರಥಬೀದಿ, ನ್ಯೂಚಿತ್ರಾ ಟಾಕಿಸ್, ಅಳಕೆ, ಡೊಂಗರಕೇರಿ ಮುಂತಾದ ಪ್ರದೇಶಗಳಲ್ಲಿ ಸ್ವಯಂಸೇವಕ ಕಾರ್ಯಕರ್ತರು ಪರಿಸರದ ಸ್ವಚ್ಛತೆ ಹಾಗೂ ಸೌಂದರ್ಯೀಕರಣದ ಕಾರ್ಯದಲ್ಲಿ ತೊಡಗಿಸಿಕೊಂಡರು.