ಮನೆಗಳ ಬಾಗಿಲಿಗೇ ಶುದ್ಧ ನೀರು ನಮ್ಮೆಲ್ಲರ ಪುಣ್ಯ

| Published : Jun 21 2025, 12:49 AM IST

ಮನೆಗಳ ಬಾಗಿಲಿಗೇ ಶುದ್ಧ ನೀರು ನಮ್ಮೆಲ್ಲರ ಪುಣ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ನಮ್ಮ ಪೂರ್ವಜರು ಪ್ರಯಾಸಪಟ್ಟು ದೂರದ ಕೆರೆ, ಬಾವಿ, ಹೊಳೆಗಳ ನೀರನ್ನು ತಂದು ಶೋಧಿಸಿ ಕುಡಿಯುತ್ತಿದ್ದರು. ಇಂದು ಮನೆಗಳ ಬಾಗಿಲಲ್ಲೇ ಶುದ್ಧ ಕುಡಿಯುವ ನೀರು ಸಿಗುತ್ತಿರುವುದು ನಮ್ಮ ನಿಮ್ಮ ಪುಣ್ಯ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದ್ದಾರೆ.

- ಶಾಸಕ ಶಾಂತನಗೌಡ ಸಂತಸ । ಸಿಂಗಟಗೆರೆಯಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಗ್ರಾಮ ಘೋಷಣೆ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಈ ಹಿಂದೆ ನಮ್ಮ ಪೂರ್ವಜರು ಪ್ರಯಾಸಪಟ್ಟು ದೂರದ ಕೆರೆ, ಬಾವಿ, ಹೊಳೆಗಳ ನೀರನ್ನು ತಂದು ಶೋಧಿಸಿ ಕುಡಿಯುತ್ತಿದ್ದರು. ಇಂದು ಮನೆಗಳ ಬಾಗಿಲಲ್ಲೇ ಶುದ್ಧ ಕುಡಿಯುವ ನೀರು ಸಿಗುತ್ತಿರುವುದು ನಮ್ಮ ನಿಮ್ಮ ಪುಣ್ಯ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ತಿಮ್ಲಾಪುರ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಸರಬರಾಜು ಗ್ರಾಮ ಘೋಷಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ತಿಂಗಳು ₹100 ಕೊಡಿ:

ಕಾಲಕಾಲಕ್ಕೆ ನಮ್ಮ ಸರ್ಕಾರಗಳು ಶುದ್ಧ ಕುಡಿಯುವ ನೀರನ್ನು ದಿನದ 24 ಗಂಟೆಯೂ ಜನರಿಗೆ ಕೊಡಬೇಕೆನ್ನುವ ಉದ್ದೇಶದಿಂದ ಜಲಜೀವನ್ ಮಿಷನ್ ಯೋಜನೆ ಜಾರಿಗೊಳಿಸಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಯಶಸ್ವಿ ಯೋಜನೆಯನ್ನು ಕೈಗೆತ್ತಿಕೊಂಡು ಗ್ರಾಮೀಣ ಭಾಗದ ಜನತೆಗೆ ಶುದ್ಧ ಕುಡಿಯುವ ನೀರು ಕೊಡುತ್ತಿವೆ. ಆಗಸ್ಟ್ 15 ರೊಳಗೆ ತಾಲೂಕಿನ 25 ಗ್ರಾಮಗಳಿಗೆ 24*7 ನೀರು ಕೊಡುವ ಯೋಜನೆ ಸಮರ್ಪಿಸುತ್ತೇವೆ. ಪ್ರತಿ ತಿಂಗಳು ಇದರ ನಿರ್ವಹಣೆಗೆ ₹100 ಕೊಡಿ, ಯಾರೂ ಸಹ ಕೊಡದೇ ಇರಬೇಡಿ. ಆ ಹಣ ನಿಮ್ಮ ಗ್ರಾಮದ ಕೆಲಸಕ್ಕೇ ಖರ್ಚಾಗುತ್ತದೆ ಎಂದರು.

ಜಿಲ್ಲೆಯಲ್ಲಿಯೇ ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕುಗಳಲ್ಲಿ 24*7 ಕುಡಿಯುವ ನೀರು ಕೊಡಲು ನಮ್ಮ ತಾಲೂಕಿನ ಗ್ರಾಮಗಳು ಅತಿ ಹೆಚ್ಚಾಗಿ ಆಯ್ಕೆಯಾಗಿರುವುದು ನಮ್ಮ ಅದೃಷ್ಟ. ಯಾವ ಗ್ರಾಮ ಆಯ್ಕೆಯಾಗಿದೆಯೋ ಅಂತಹ ಗ್ರಾಮಗಳಲ್ಲಿ ನೀರು ವ್ಯರ್ಥ ಆಗದಂತೆ ಗ್ರಾಮಸ್ಥರು ಎಚ್ಚರ ವಹಿಸಬೇಕು ಎಂದರು.

ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆ ಹಾಗೂ ಸಹಾಯಕರು ಇಲ್ಲ ಎಂಬ ಬಗ್ಗೆ ಮಾಹಿತಿ ಇದೆ. ಆದರೆ ಇಲ್ಲಿಗೆ ಪೋಸ್ಟಿಂಗ್ ಕೊಡಲು ಎಲ್ಲ ವ್ಯವಸ್ಥೆ ಮಾಡಿದ್ದರೂ ಸರ್ಕಾರದ ಆದೇಶಗಳನ್ನು ಪ್ರಶ್ನಿಸಿ, ಕೆಲವರು ನ್ಯಾಯಾಲಯಕ್ಕೆ ಹೋಗಿರುವುದರಿಂದ ನೇಮಕಾತಿಯಲ್ಲಿ ವಿಳಂಬ ಆಗಿದೆ. ಆದರೂ ಈ ಸಮಸ್ಯೆಗೆ ಕೂಡಲೇ ಪರಿಹಾರ ಒದಗಿಸಲಾಗುವುದು ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸೋಮ್ಲಾನಾಯ್ಕ್ ಮಾತನಾಡಿ, ಇಡೀ ರಾಜ್ಯದಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ನಡೆದಿರುವ ನೀರು ಸರಬರಾಜು ಗ್ರಾಮ ಘೋಷಣೆಯಾದ 33 ಗ್ರಾಮಗಳಲ್ಲಿ 16 ಗ್ರಾಮಗಳು ದಾವಣಗೆರೆ ಜಿಲ್ಲೆಯಲ್ಲೇ ಇವೆ. ಹೊನ್ನಾಳಿಯಲ್ಲಿ ಅತಿ ಹೆಚ್ಚು ನೀರು ಸರಬರಾಜು ಗ್ರಾಮಗಳು ಆಯ್ಕೆಯಾಗಿವೆ. ಒಟ್ಟು ಕಾಮಗಾರಿಗೆ ₹104.25 ಕೋಟಿ ಬಿಡುಗಡೆಯಾಗಿದೆ. ಅದರಲ್ಲಿ ₹62 ಕೋಟಿಯನ್ನು ಪೂರ್ಣ ಕಾಮಗಾರಿಗೆ ಬಳಸಿದ್ದೇವೆ. ಬಾಕಿ ಹಣ ಉಳಿದಿರುವ ಕಾಮಗಾರಿಗೆ ಮೀಸಲಿಟ್ಟಿದ್ದೇವೆ ಎಂದು ವಿವರಿಸಿದರು.

ತಾ.ಪಂ. ಇಒ ಪ್ರಕಾಶ್, ತಿಮ್ಲಾಪುರ ಗ್ರಾ.ಪಂ. ಅಧ್ಯಕ್ಷ ಹನುಮಂತಪ್ಪ, ಸದಸ್ಯರಾದ ಅನುಪಮ ಅಣ್ಣಪ್ಪ, ಜಯಪ್ಪ, ಟಿ.ಜಿ.ರಮೇಶ್‌ ಗೌಡ, ಪ್ರೇಮಾ, ಅಶ್ವಿನಿ, ಮಹೇಶ್, ಡಾ.ನಂದನ್‌ಕುಮಾರ್, ನಿವೃತ್ತ ಶಿಕ್ಷಕ ಸಿದ್ದಪ್ಪ, ಪಿಡಿಒ ಹೊನ್ನಪ್ಪ, ದೇವರಾಜ್ ಹಾಗೂ ಇತರರು ಇದ್ದರು.

- - -

(ಕೋಟ್‌) ಜಲಜೀವನ್ ಮಿಷನ್ ಯೋಜನೆಯಲ್ಲಿ ನಾವು ಕೈಗೊಂಡ ಯಾವ ಕಾಮಗಾರಿಯೂ ಕಳಪೆಯಾಗಿಲ್ಲ. ಸ್ವತಃ ವಿಶ್ವ ಬ್ಯಾಂಕ್‌ನವರೇ ಬಂದು ಪರಿಶೀಲಸಿ, ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳಿಗೆ ಹೆಮ್ಮೆಯ ವಿಚಾರ.

- ಸೋಮ್ಲಾನಾಯ್ಕ್, ಎಇಇ, ಗ್ರಾಮೀಣ ಕುಡಿಯುವ ನೀರು-ನೈರ್ಮಲ್ಯ ಇಲಾಖೆ

- - -

-20ಎಚ್.ಎಲ್.ಐ1.ಜೆಪಿಜಿ:

ಸಿಂಗಟಗೆರೆಯಲ್ಲಿ ಶುಕ್ರವಾರ ನಡೆದ ಶುದ್ಧ ಕುಡಿಯುವ ನೀರು ಸರಬರಾಜು ಗ್ರಾಮ ಘೋಷಣೆ ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.