ಸಾರಾಂಶ
ಸಮೀಪದ ಹನುಮನಾಳ ಹೋಬಳಿಯ ಮಾಲಗಿತ್ತಿ ಗ್ರಾಪಂ ವ್ಯಾಪ್ತಿಯ ಮಾಲಗಿತ್ತಿಯ ಮಠದ ಹತ್ತಿರ ಇರುವ ಆರೋಗ್ಯ ಕೇಂದ್ರದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಅನೈರ್ಮಲ್ಯ ತಾಂಡವಾಡುತ್ತಿದೆ.
ಕನ್ನಡಪ್ರಭ ವಾರ್ತೆ ಹನುಮಸಾಗರ
ಸಮೀಪದ ಹನುಮನಾಳ ಹೋಬಳಿಯ ಮಾಲಗಿತ್ತಿ ಗ್ರಾಪಂ ವ್ಯಾಪ್ತಿಯ ಮಾಲಗಿತ್ತಿಯ ಮಠದ ಹತ್ತಿರ ಇರುವ ಆರೋಗ್ಯ ಕೇಂದ್ರದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಅನೈರ್ಮಲ್ಯ ತಾಂಡವಾಡುತ್ತಿದೆ. ಗ್ರಾಪಂ ಸದಸ್ಯರು, ಅಧಿಕಾರಿಗಳು ಸ್ವಚ್ಛತೆ ಕೈಗೊಳ್ಳದೇ ನಿರ್ಲಕ್ಷ್ಯವಹಿಸಿರುವುದಕ್ಕೆ ಈ ಅವಾಂತರ ಸೃಷ್ಟಿಯಾಗಿದೆ.ಈ ಆರೋಗ್ಯ ಕೇಂದ್ರಕ್ಕೆ ಗರ್ಭಿಣಿಯರು, ಬಾಣಂತಿಯರು ಭೇಟಿ ನೀಡುತ್ತಾರೆ. ಕೇಂದ್ರದ ಸುತ್ತಮುತ್ತ ಹಾವು, ಚೇಳು ಓಡಾಡುತ್ತವೆ. ಕೆಲವರು ಕೇಂದ್ರದ ಸುತ್ತಮುತ್ತ ಮಲ, ಮೂತ್ರ ವಿಸರ್ಜನೆ ಮಾಡುತ್ತಾರೆ. ಕಾಯಿಲೆ ವಾಸಿ ಮಾಡಿಸಿಕೊಳ್ಳಲು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವುದು ಸಹಜ. ಆದರೆ ಈ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರೆ ಮತ್ತಷ್ಟು ಕಾಯಿಲೆ ಬರಬಹುದು ಎನ್ನುವ ಸ್ಥಿತಿ ಇದೆ. ಸ್ವಚ್ಛ ಭಾರತ ಎಂಬ ಕೇಂದ್ರ ಸರ್ಕಾರದ ಯೋಜನೆ ಪಾಲನೆಯಾಗುತ್ತಿಲ್ಲ.
ಗ್ರಾಮದಲ್ಲಿ ಎರಡು ಶುದ್ಧ ನೀರಿನ ಘಟಕಗಳಿದ್ದು, ಅವುಗಳಲ್ಲಿ ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಇನ್ನೊಂದು ಘಟಕ ಸುಮಾರು ವರ್ಷಗಳಿಂದ ಹದಗೆಟ್ಟು ಹೋಗಿದೆ. ಚರಂಡಿಗಳು ಕಲುಷಿತಗೊಂಡಿದ್ದು, ಅನೇಕ ರೋಗ ರುಜಿನಗಳ ಹೆಚ್ಚಳದ ಆತಂಕ ಕಂಡು ಬರುತ್ತಿದೆ. ಜನ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇತ್ತ ಕಡೆ ಗಮನ ಹರಿಸುತ್ತಿಲ್ಲ. ಕೂಡಲೇ ಆರೋಗ್ಯ ಕೇಂದ್ರ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.