ಸಾರಾಂಶ
ಗದಗ ನಗರದ ಚೆನ್ನಮ್ಮ ಸರ್ಕಲ್ ಹತ್ತಿರ ಸಿಕ್ಕಲಿಗಾರ್ ಓಣಿ ೩೨ನೇ ವಾರ್ಡಿನಲ್ಲಿ ಇರುವ ಸುಲಭ ಶೌಚಾಲಯ ತೆರವುಗೊಳಿಸಿ ಸಮುದಾಯ ಭವನ ನಿರ್ಮಿಸಬೇಕು ಎಂದು ವಾರ್ಡ್ ನಿವಾಸಿಗಳು ಮನವಿ ಮಾಡಿದ್ದಾರೆ.
ಗದಗ: ನಗರದ ಚೆನ್ನಮ್ಮ ಸರ್ಕಲ್ ಹತ್ತಿರ ಸಿಕ್ಕಲಿಗಾರ್ ಓಣಿ ೩೨ನೇ ವಾರ್ಡಿನಲ್ಲಿ ಇರುವ ಸುಲಭ ಶೌಚಾಲಯ ತೆರವುಗೊಳಿಸಿ ಸಮುದಾಯ ಭವನ ನಿರ್ಮಿಸಬೇಕು ಎಂದು ವಾರ್ಡಿನ ಸ್ಥಳೀಯರು ಹಾಗೂ ಕ್ರಾಂತಿ ಸೇನಾ ಸಂಘಟನೆ ವತಿಯಿಂದ ನಗರಸಭೆ ಉಪಾಧ್ಯಕ್ಷೆ ಹಾಗೂ ೩೨ನೇ ವಾರ್ಡಿನ ಸದಸ್ಯೆ ಸುನಂದಾ ಪ್ರಕಾಶ್ ಬಾಕಳೆ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕ್ರಾಂತಿ ಸೇನಾ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರವೀಣ ಹಬೀಬ ಮಾತನಾಡಿ, ನಗರದ ೩೨ನೇ ವಾರ್ಡಿನಲ್ಲಿ ಇರುವ ಶೌಚಾಲಯ ಹಾಳು ಬಿದ್ದಿದೆ. ಸ್ವಚ್ಛತೆ ಇಲ್ಲದೆ ವಾಸನೆ ಹರಡಿ ಜನರಿಗೆ ತೊಂದರೆಯಾಗುತ್ತಿದೆ. ಸೊಳ್ಳೆ, ಕ್ರಿಮಿ-ಕೀಟಗಳು ಓಣಿಯಲ್ಲಿ ಹರಡುತ್ತಿದ್ದು ಜನರಿಗೆ, ಚಿಕ್ಕ ಮಕ್ಕಳಿಗೆ, ವೃದ್ಧರಿಗೆ ಭಯವಾಗುತ್ತಿದೆ. ಕಾರಣ ತುಂಬಿದ ಓಣಿಯಲ್ಲಿ ಶೌಚಾಲಯದ ಪೈಪ್ಗಳು ಒಡೆದು ನೀರು ರಸ್ತೆಯಲ್ಲಿ ಹರಿಯುತ್ತಿದೆ. ಅದರಿಂದ ಚಿಕ್ಕ ಮಕ್ಕಳಿಗೆ ವೃದ್ಧರಿಗೆ ಡೆಂಘೀ ಇನ್ನಿತರ ರೋಗ ಹರಡಿ ಏನಾದರೂ ಜೀವಕ್ಕೆ ಏರುಪೇರು ಆದರೆ ಯಾರು ಹೊಣೆ ಎನ್ನುವ ಚಿಂತೆ ಕಾಡುತ್ತಿದೆ. ಆದ ಕಾರಣ ಈ ಸುಲಭ ಶೌಚಾಲಯ ತೆರವುಗೊಳಿಸಿ ಸಮುದಾಯ ಭವನ ನಿರ್ಮಿಸಬೇಕು ಎಂದು ಒತ್ತಾಯಿಸಿದರು.ನಾಗರಾಜ ನವಲಗುಂದ ಮಾತನಾಡಿ, ನಗರದ ೩೨ನೇ ವಾರ್ಡಿನ ಜನರಿಗೆ ಸಮುದಾಯ ಭವನ ಇಲ್ಲದ ಕಾರಣ ಸಮಾರಂಭ ನಡೆಸಲು ಕಷ್ಟವಾಗುತ್ತಿದೆ. ಮನೆಯಲ್ಲಿ ಜಾಗವಿರುವುದಿಲ್ಲ, ಕಲ್ಯಾಣ ಮಂಟಪದ ಬಾಡಿಗೆ ಭರಿಸುವ ಶಕ್ತಿ ಇರುವುದಿಲ್ಲ. ಹೀಗಾಗಿ ಸಮುದಾಯ ಭವನ ನಿರ್ಮಿಸಿದರೆ ಇಲ್ಲಿಯ ಜನರಿಗೆ ಅನುಕೂಲವಾಗುತ್ತದೆ. ವಾರ್ಡಿನ ಸದಸ್ಯರು, ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಸುಲಭ ಶೌಚಾಲಯ ತೆರವುಗೊಳಿಸಿ ಸಮುದಾಯ ಭವನ ಹಾಗೂ ಅಲ್ಲಿಯೇ ಚಿಕ್ಕದಾಗಿ ಸುಲಭ ಶೌಚಾಲಯ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ರಾಮಣ್ಣ ನವಲಗುಂದ, ಬಿಕ್ಕಪ್ಪ ದೊಡ್ಮನಿ, ರಾಮ ದೊಡ್ಡಮನಿ, ವಿನೋದ್, ನಾಗವ್ವ ನವಲಗುಂದ, ಈರವ್ವ ಶಿರಹಟ್ಟಿ, ದುರ್ಗವ್ವ ದೊಡ್ಡಮನಿ, ಪದ್ಮವ್ವ ನವಲಗುಂದ ಹಾಗೂ ಓಣಿಯ ಹಿರಿಯರು, ಯುವಕರು ಇದ್ದರು.